CM Siddaramaiah, Delhi; ಮುಖ್ಯಮಂತ್ರಿ ಸಿದ್ದರಾಮಯ್ಯ ಕೊರಳು ಸುತ್ತಿಕೊಂಡ ಕಾಲ್ತುಳಿತ ಪ್ರಕರಣ ; ಸಿಎಂ, ಡಿಸಿಎಂ ದಿಲ್ಲಿಗೆ ಕರೆಸಿಕೊಂಡ ಹೈಕಮಾಂಡ್, ಹೈಕೋರ್ಟಿನಲ್ಲೂ ಅಗ್ನಿಪರೀಕ್ಷೆ, ಆಡಳಿತ ವೈಫಲ್ಯಕ್ಕೆ ರಾಜಕೀಯ ತಲೆದಂಡ ?

10-06-25 11:19 am       HK News Desk   ಕರ್ನಾಟಕ

ಆರ್ ಸಿಬಿ ವಿಜಯೋತ್ಸವದಲ್ಲಿ ನಡೆದ ಕಾಲ್ತುಳಿತ ಘಟನೆಗೆ ರಾಜ್ಯ ಸರಕಾರದ ಆಡಳಿತ ವೈಫಲ್ಯ ಕಾರಣ ಎನ್ನುವ ಅಂಶ ಸಿಎಂ ಸಿದ್ದರಾಮಯ್ಯ ಅವರನ್ನು ತೀವ್ರ ಇಕ್ಕಟ್ಟಿಗೆ ಸಿಲುಕಿಸಿದೆ. ದಿನದಿಂದ ದಿನಕ್ಕೆ ಪ್ರಕರಣ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದ್ದು, ರಾಜಕೀಯ ತಲೆದಂಡಕ್ಕೂ ಕಾರಣವಾಗುವ ಸಾಧ್ಯತೆ ದಟ್ಟವಾಗಿದೆ.

ಬೆಂಗಳೂರು, ಜೂನ್ 10: ಆರ್ ಸಿಬಿ ವಿಜಯೋತ್ಸವದಲ್ಲಿ ನಡೆದ ಕಾಲ್ತುಳಿತ ಘಟನೆಗೆ ರಾಜ್ಯ ಸರಕಾರದ ಆಡಳಿತ ವೈಫಲ್ಯ ಕಾರಣ ಎನ್ನುವ ಅಂಶ ಸಿಎಂ ಸಿದ್ದರಾಮಯ್ಯ ಅವರನ್ನು ತೀವ್ರ ಇಕ್ಕಟ್ಟಿಗೆ ಸಿಲುಕಿಸಿದೆ. ದಿನದಿಂದ ದಿನಕ್ಕೆ ಪ್ರಕರಣ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದ್ದು, ರಾಜಕೀಯ ತಲೆದಂಡಕ್ಕೂ ಕಾರಣವಾಗುವ ಸಾಧ್ಯತೆ ದಟ್ಟವಾಗಿದೆ. ಇದೇ ವೇಳೆ, ಕಾಂಗ್ರೆಸ್ ಹೈಕಮಾಂಡ್ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಅವರನ್ನು ದೆಹಲಿಗೆ ಕರೆಸಿದ್ದು, ಸ್ಪಷ್ಟನೆ ಕೇಳಿ ಬಿಸಿ ಮುಟ್ಟಿಸುವ ಸಾಧ್ಯತೆಯಿದೆ.

ಕಾಂಗ್ರೆಸ್ ಸರಕಾರದ ಕರ್ನಾಟಕ ಮಾದರಿಗೆ ಕಳಂಕ ತಂದಿರುವ ಈ ದುರಂತವನ್ನು ಕಾಂಗ್ರೆಸ್ ಹೈಕಮಾಂಡ್ ಗಂಭೀರವಾಗಿ ಪರಿಗಣಿಸಿದ್ದು, ಸಿಎಂ ಮತ್ತು ಡಿಸಿಎಂ ತುರ್ತಾಗಿ ದೆಹಲಿಗೆ ಹಾರಿದ್ದಾರೆ. ದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಕೆಸಿ ವೇಣುಗೋಪಾಲ್, ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಉಪಸ್ಥಿತಿಯಲ್ಲಿ ಸಭೆ ನಡೆಯಲಿದ್ದು, ಖುದ್ದಾಗಿ ವಿವರಣೆ ಪಡೆದು ಯಾವ ರೀತಿಯ ಸೂಚನೆ ನೀಡಲಿದ್ದಾರೆ ಎನ್ನುವುದು ಕುತೂಹಲಕ್ಕೆ ಕಾರಣವಾಗಿದೆ.

ಕಾಲ್ತುಳಿತ ಮತ್ತು ನಂತರದ ಘಟನೆಗಳು ಆಡಳಿತದಲ್ಲಿ ಸಿಎಂ ಸಿದ್ದರಾಮಯ್ಯ ಹಿಡಿತ ಕಳಕೊಂಡಿದ್ದಾರೆ ಎನ್ನುವ ಭಾವನೆ ಮೂಡಿಸಿದ್ದು, ಸರಕಾರದಲ್ಲಿ ಸಮನ್ವಯದ ಕೊರತೆ ಅನುಮಾನ ವರಿಷ್ಠರನ್ನೂ ಕಾಡಲಾರಂಭಿಸಿದೆ. ಸರ್ಕಾರ ಎರಡು ವರ್ಷ ಪೂರೈಸಿದ ಸಂದರ್ಭದಲ್ಲೇ ಈ ಘಟನೆ ನಡೆದಿರುವುದರಿಂದ ಹೈಕಮಾಂಡ್ ನಾಯಕರಲ್ಲಿ ಅಸಮಾಧಾನ ಮೂಡಿಸಿದೆ. ಸದ್ಯಕ್ಕೆ ಪೊಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸಿದ್ದು, ಆನಂತರ ಆಗುತ್ತಿರುವ ಬೆಳವಣಿಗೆಗಳಿಂದಾಗಿ ಅತೃಪ್ತರಾಗಿರುವ ದೆಹಲಿ ನಾಯಕರು, ಈ ಬಗ್ಗೆ ಇಬ್ಬರಿಂದಲೂ ವಿವರಣೆ ಕೇಳಲಿದ್ದಾರೆ. 11 ಯುವಜನರ ಸಾವು ಹಾಗೂ 50ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವುದನ್ನು ಸರಕಾರದ ವೈಫಲ್ಯದ ದೃಷ್ಟಿಯಿಂದ ನೋಡಲಾಗುತ್ತಿದೆ. ಇದೇ ವೇಳೆ, ಸ್ವಯಂ ಪ್ರಕರಣ ದಾಖಲಿಸಿಕೊಂಡಿರುವ ಹೈಕೋರ್ಟ್ ಪ್ರತಿಕ್ರಿಯೆ ಯಾವ ರೀತಿ ಇರಲಿದೆ ಎನ್ನುವ ಆತಂಕವೂ ಆಡಳಿತಾರೂಢ ಕಾಂಗ್ರೆಸ್ ನಾಯಕರನ್ನು ಕಾಡುತ್ತಿದೆ.

ದೆಹಲಿ ಬುಲಾವ್ ಮತ್ತು ಹೈಕೋರ್ಟಿನಲ್ಲಿ ಪ್ರಕರಣ ನಡೆಯುತ್ತಿರುವ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಸೋಮವಾರ ರಾತ್ರಿ ಆಪ್ತ ಸಚಿವರೊಂದಿಗೆ ಸಭೆ ನಡೆಸಿದ್ದಾರೆ. ಗೃಹ ಸಚಿವ ಪರಮೇಶ್ವರ್, ಕಾನೂನು ಸಚಿವ ಎಚ್.ಕೆ ಪಾಟೀಲ್, ಮುಖ್ಯ ಕಾರ್ಯದರ್ಶಿ, ಅಡ್ವಕೇಟ್ ಜನರಲ್ ಹಾಗೂ ಹಿರಿಯ ಅಧಿಕಾರಿಗಳು ಮತ್ತು ಕೆಲವು ಆಪ್ತರ ಜೊತೆಗೆ ಬೆಳವಣಿಗೆ ಬಗ್ಗೆ ಚರ್ಚಿಸಿದ್ದಾರೆ.

ಅಧಿಕಾರಿಗಳ ನಡುವೆ ಶೀತಲ ಸಮರ;

ಇನ್ನೊಂದೆಡೆ, ವಿಜಯೋತ್ಸವ ಆಚರಣೆಗೆ ಬಂದೋಬಸ್ತ್ ಮಾಡಲು ಕಷ್ಟ ಇದೆ ಎಂಬ ಪೊಲೀಸ್ ಇಲಾಖೆಯ ಸೂಚನೆಯನ್ನು ಧಿಕ್ಕರಿಸಿ ಸಂಭ್ರಮಾಚರಣೆ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಅದೇ ಕಾರಣಕ್ಕೆ ದುರಂತ ಆಗಿದೆ ಎನ್ನುವುದು ಆಡಳಿತ ವ್ಯವಸ್ಥೆಯಲ್ಲಿ ಕಂಪನ ಸೃಷ್ಟಿಸಿದೆ. ಪ್ರಕರಣದಲ್ಲಿ ಆಡಳಿತ ವೈಫಲ್ಯ ಎದ್ದು ಕಾಣುತ್ತಿದ್ದರೂ ಪೊಲೀಸ್ ಅಧಿಕಾರಿಗಳನ್ನು ಬಲಿಪಶು ಮಾಡಲಾಗಿದೆ ಎಂಬ ಅಂಶವೂ ಐಪಿಎಸ್ ಮತ್ತು ಐಎಎಸ್ ಅಧಿಕಾರಿಗಳ ನಡುವೆ ಶೀತಲ ಸಮರಕ್ಕೂ ಕಾರಣವಾಗಿದೆ. ಕೇವಲ ಪೊಲೀಸ್ ಅಧಿಕಾರಿಗಳನ್ನು ಬಲಿಪಶು ಮಾಡಿದ್ದಾರೆ, ಜವಾಬ್ದಾರಿ ಹೊತ್ತಿದ್ದ ಐಎಎಸ್ ಅಧಿಕಾರಿಗಳ ಬಗ್ಗೆ ಕ್ರಮ ಆಗಿಲ್ಲ ಎನ್ನುವ ವಿಚಾರ ಕೋಲ್ಡ್ ವಾರ್ ಸೃಷ್ಟಿಸಿದೆ. ಇದರ ಭಾಗವಾಗಿಯೇ ಅಧಿಕಾರಿಗಳ ಒಳಗಡೆ ಮಾತ್ರ ಇರಬೇಕಾಗಿದ್ದ ಪೊಲೀಸ್ ಅನುಮತಿ ನೀಡಿರಲಿಲ್ಲ, ಡಿಪಿಎಆರ್ ಕಾರ್ಯದರ್ಶಿಗೆ ಡಿಸಿಪಿ ಬರೆದ ಪತ್ರ ಬಹಿರಂಗವಾಗಿದೆ.

ಹರಕೆಯ ಕುರಿಯಾಗಿಸಿದ್ರು – ಕೆಎಟಿಗೆ ಮೊರೆ;

ಇದೇ ವೇಳೆ, ಐಪಿಎಸ್ ಅಧಿಕಾರಿ ವಿಕಾಸ್ ಕುಮಾರ್ ತನ್ನನ್ನು ವಿನಾಕಾರಣ ಬಲಿಪಶು ಮಾಡಲಾಗಿದೆ ಎಂದು ಕೆಎಟಿಗೆ ದೂರು ಸಲ್ಲಿಸಿದ್ದಾರೆ. ನನ್ನನ್ನು ಹರಕೆಯ ಕುರಿಯಾಗಿಸಿ ಅಮಾನತು ಮಾಡಲಾಗಿದೆ ಎಂದು ಆರೋಪಿಸಿದ್ದು, ಅಮಾನತು ಪ್ರಶ್ನಿಸಿ ಕೇಂದ್ರ ನ್ಯಾಯಾಧಿಕರಣ ಮಂಡಳಿಗೆ ನಿರ್ಗಮಿತ ಹೆಚ್ಚುವರಿ ಪೊಲೀಸ್ ಆಯುಕ್ತ ವಿಕಾಸ್ ಕುಮಾರ್ ದೂರು ನೀಡಿದ್ದಾರೆ. ಮತ್ತೊಂದೆಡೆ, ಇಡೀ ಕಾಲ್ತುಳಿತ ಘಟನೆಗೆ ರಾಜ್ಯ ಸರಕಾರವೇ ಕಾರಣ, ಈ ಹಿಂದೆ ಭಾರತ ವಿಶ್ವಕಪ್ ಗೆದ್ದಾಗ ಮುಂಬೈನಲ್ಲಿ ವಿಜಯೋತ್ಸವ ಆಚರಣೆ ಮಾಡಿದ್ದೇವೆ, ಮೂರು ಲಕ್ಷ ಜನ ಸೇರಿದ್ದರೂ ಯಾವುದೇ ಅವಘಡ ಆಗಿಲ್ಲ. ರಾಜ್ಯ ಸರಕಾರಕ್ಕೆ ಪತ್ರ ಬರೆದಿದ್ದರೂ ವಿಧಾನಸೌಧದಲ್ಲಿ ಸನ್ಮಾನ ಕಾರ್ಯಕ್ರಮ ಏರ್ಪಡಿಸಿದ್ದರು. ಇದರಿಂದಾಗಿ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಸಾಕಷ್ಟು ಪೊಲೀಸರನ್ನು ನಿಯೋಜಿಸದೆ ನಿರ್ಲಕ್ಷ್ಯ ಮಾಡಲಾಗಿತ್ತು ಎಂದು ಕಾರ್ಯಕ್ರಮ ಆಯೋಜಕರಾಗಿದ್ದ ಡಿಎನ್ಎ ಎಂಟರ್ಟೈನ್ಮೆಂಟ್ ಸಂಸ್ಥೆ ಹೈಕೋರ್ಟ್ ಮೆಟ್ಟಿಲೇರಿದ್ದು, ತನ್ನ ಮೇಲಿನ ಎಫ್ಐಆರ್ ರದ್ದು ಮಾಡುವಂತೆ ಕೋರಿದೆ.

Stampede Tragedy Traps CM Siddaramaiah in Political and Legal Storm; High Command Summons CM, DCM to Delhi as High Court Steps In