Mangalore Serial Killings, B Y Vijayendra: ಕರಾವಳಿಯಲ್ಲಿ ಸರಣಿ ಕೊಲೆ ; ಮುಸ್ಲಿಂ ಯುವಕನ ಹತ್ಯೆ ಮುಂದಿಟ್ಟುಕೊಂಡು ಹಿಂದೂ ಕಾರ್ಯಕರ್ತರನ್ನ ಸುಮ್ಮನೆ ಬಂಧಿಸಲಾಗುತ್ತಿದೆ, ಪರಿಸ್ಥಿತಿ ಮಿತಿ ಮೀರಿದ್ರೆ ನಾವು ಜವಾಬ್ದಾರರಲ್ಲ , ವಿಜಯೇಂದ್ರ ವಾಗ್ದಾಳಿ! 

31-05-25 09:38 pm       HK News Desk   ಕರ್ನಾಟಕ

ಕರಾವಳಿ ಭಾಗದಲ್ಲಿ ಸರಣಿ ಕೊಲೆಗಳ ಹಿನ್ನಲೆಯಲ್ಲಿ ಮುಸ್ಲಿಂ ವ್ಯಕ್ತಿಯ ಹತ್ಯೆ ಮುಂದಿಟ್ಟುಕೊಂಡು ಹಿಂದು ಕಾರ್ಯಕರ್ತರನ್ನು ಸುಮ್ಮನೆ ಬಂಧಿಸಲಾಗುತ್ತಿದೆ.

ಮಂಡ್ಯ, ಮೇ.30: ಕರಾವಳಿ ಭಾಗದಲ್ಲಿ ಸರಣಿ ಕೊಲೆಗಳ ಹಿನ್ನಲೆಯಲ್ಲಿ ಮುಸ್ಲಿಂ ವ್ಯಕ್ತಿಯ ಹತ್ಯೆ ಮುಂದಿಟ್ಟುಕೊಂಡು ಹಿಂದು ಕಾರ್ಯಕರ್ತರನ್ನು ಸುಮ್ಮನೆ ಬಂಧಿಸಲಾಗುತ್ತಿದೆ. ಆ ಮೂಲಕ ಕಾರ್ಯಕರ್ತರನ್ನು ಟಾರ್ಗೆಟ್ ಮಾಡಲಾಗುತ್ತಿದೆ. ಇದಕ್ಕಾಗಿ ಕೋಮು ನಿಗ್ರಹದಳವನ್ನು ರಾಜ್ಯ ಸರಕಾರ ಸ್ಥಾಪನೆ ಮಾಡಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ವಾಗ್ದಾಳಿ ನಡೆಸಿದರು.

ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರಕಾರದ ಕುಮ್ಮಕ್ಕಿನಿಂದ ಪೊಲೀಸರು ಅತಿರೇಕದ ವರ್ತನೆ ತೋರುತ್ತಿದ್ದಾರೆ. ಹಿಂದು ಕಾರ್ಯಕರ್ತರನ್ನು ಬಂಧಿಸಿದರೆ ಪರಿಸ್ಥಿತಿ ಮಿತಿ ಮೀರಲಿದೆ. ಅದಕ್ಕೆ ಕಾಂಗ್ರೆಸ್ ಸರಕಾರ, ಸಿಎಂ, ಗೃಹ ಸಚಿವರು ಹೊಣೆಯಾಗುತ್ತಾರೆ. ಇದು ಕಾಂಗ್ರೆಸ್ ಸರಕಾರಕ್ಕೆ ಶೋಭೆ ತರಲ್ಲ ಎಂದು ಆಕ್ಷೇಪಿಸಿದರು.

ಆಪರೇಷನ್ ಸಿಂಧೂರ್ ಕಾರ್ಯಾಚರಣೆ ನಡೆದಾಗ ಇಂಟಲಿಜೆನ್ಸ್ ಬಗ್ಗೆ ಕಾಂಗ್ರೆಸ್‌ನವರು ಮಾತನಾಡಿದ್ದರು. ಆದರೀಗ ಮಂಗಳೂರಿನಲ್ಲಿ ಕೊಲೆಯಾಗುತ್ತಿದೆ. ಈಗ ರಾಜ್ಯ ಸರಕಾರ ಏನು ಮಾಡುತ್ತಿದೆ? ಇವರ ಬಳಿ ಇಂಟಲಿಜೆನ್ಸ್ ಇಲ್ಲವೇ?" ಎಂದು ಪ್ರಶ್ನಿಸಿದರು.

ರಾಜ್ಯದಲ್ಲಿ ಮಳೆ ಅವಾಂತರ ವಿಚಾರಕ್ಕೆ ಪ್ರತಿಕ್ರಿಯಿಸಿ, ಮಳೆ ಅವಾಂತರ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ನಮ್ಮ ಪಕ್ಷದಿಂದ ತಂಡ ಮಾಡಲು ತೀರ್ಮಾನಿಸಲಾಗಿದೆ. ಪಕ್ಷದ ನಾಯಕರು ಹಾಗೂ ಮುಖಂಡರು ಪ್ರವಾಸ ಕೈಗೊಳ್ಳಲು ಹೇಳಿದ್ದೇನೆ. ರಾಜ್ಯ ಸರಕಾರ ಗ್ಯಾರಂಟಿಯ ಅಮಲಿನಲ್ಲಿದೆ. ಇಷ್ಟೆಲ್ಲ ಮಳೆಯಾದರೂ ಕೂಡ ರೈತರಿಗೆ ಬಿತ್ತನೆ ಬೀಜ ಕೊಟ್ಟಿಲ್ಲ. ಇದರಿಂದ ರೈತರು ಪರದಾಡುತ್ತಿದ್ದಾರೆ. ರಾಜ್ಯ ಸರಕಾರ ಎಚ್ಚೆತ್ತು ರೈತರಿಗೆ ಅನುಕೂಲವಾಗುವ ಕೆಲಸ ಮಾಡಬೇಕು' ಎಂದು ಆಗ್ರಹಿಸಿದರು.

Mangalore Serial Killings, Hindus Unfairly Targeted Over Muslim Youth’s Murder, Warns B Y Vijayendra.