Hassan Suicide, Police Constable Harrasment: ಹಾಸನದಲ್ಲಿ ಹೆಡ್​​ ಕಾನ್ಸ್​ಟೇಬಲ್​ನಿಂದಲೇ ಮೀಟರ್ ಬಡ್ಡಿ ದಂಧೆ ;  80 ಸಾವಿರಕ್ಕೆ 2 ಲಕ್ಷ ರೂ. ಬಡ್ಡಿ, ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ !

05-05-25 01:30 pm       HK News Desk   ಕರ್ನಾಟಕ

ಹೆಡ್​​ ಕಾನ್ಸ್​ಟೇಬಲ್​ನಿಂದಲೇ ಮೀಟರ್ ಬಡ್ಡಿ ದಂಧೆ ಕಿರುಕುಳಕ್ಕೆ ಬೇಸತ್ತು ವ್ಯಕ್ತಿ ಆತ್ಮಹತ್ಯೆಗೆ ಯತ್ನಿಸಿರುವಂತಹ ಘಟನೆ ಜಿಲ್ಲೆಯ ಸಕಲೇಶಪುರ ತಾಲೂಕಿನ ಬಾಳ್ಳುಪೇಟೆಯಲ್ಲಿ ನಡೆದಿದೆ.

ಹಾಸನ, ಮೇ 05: ಹೆಡ್​​ ಕಾನ್ಸ್​ಟೇಬಲ್​ನಿಂದಲೇ ಮೀಟರ್ ಬಡ್ಡಿ ದಂಧೆ ಕಿರುಕುಳಕ್ಕೆ ಬೇಸತ್ತು ವ್ಯಕ್ತಿ ಆತ್ಮಹತ್ಯೆಗೆ ಯತ್ನಿಸಿರುವಂತಹ ಘಟನೆ ಜಿಲ್ಲೆಯ ಸಕಲೇಶಪುರ ತಾಲೂಕಿನ ಬಾಳ್ಳುಪೇಟೆಯಲ್ಲಿ ನಡೆದಿದೆ. ಬಾಳ್ಳುಪೇಟೆಯ ಮೊಹಮ್ಮದ್ ತನ್ಜೀರ್ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ. ಹಾಸನ ಎಸ್​ಪಿ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಹೆಡ್ ಕಾನ್ಸ್​ಟೇಬಲ್​ ಅರುಣ್​ ವಿರುದ್ಧ ಮೀಟರ್ ಬಡ್ಡಿ ದಂಧೆ ಆರೋಪ ಕೇಳಿಬಂದಿದೆ. 

80 ಸಾವಿರ ರೂ.ಗೆ 2 ಲಕ್ಷ ರೂ ಬಡ್ಡಿ ;

ಮೊಹಮ್ಮದ್ ತನ್ಜೀರ್​​ 2 ವರ್ಷದ ಹಿಂದೆ ಕೋಳಿ ಅಂಗಡಿ ಮಾಡಲು ಹೆಡ್ ಕಾನ್ಸ್​ಟೇಬಲ್​ ಅರುಣ್​​ ಬಳಿ ಸಾಲ ಪಡೆದಿದ್ದರು. 80 ಸಾವಿರ ರೂ ಹಣಕ್ಕೆ ವಾರಕ್ಕೆ 7,800 ರೂ. ಬಡ್ಡಿ ವಸೂಲಿ ಮಾಡಲಾಗುತ್ತಿತ್ತು. ತಿಂಗಳಿಗೆ 28 ಸಾವಿರ ರೂ. ಬಡ್ಡಿ ಕಟ್ಟಿ ತನ್ಜೀರ್ ಹೈರಾಣಾಗಿದ್ದರು. 80 ಸಾವಿರ ರೂ.ಗೆ 2 ಲಕ್ಷ ರೂ ಬಡ್ಡಿ ಕಟ್ಟಿದ್ರೂ ಬಿಡದೆ ಕಿರುಕುಳ ನೀಡುತ್ತಿರುವುದಾಗಿ ತನ್ಜೀರ್ ಆರೋಪಿಸಿದ್ದಾರೆ.

ಅರುಣ್​ಗೆ ಬಡ್ಡಿ ಕಟ್ಟುವುದಕ್ಕಾಗಿ ತನ್ಜೀರ್ ವಕೀಲ ದುಶ್ಯತ್ ಸೇರಿ ಹಲವರಿಂದ ಸಾಲ ಪಡೆದಿದ್ದರು. ಎರಡು ವಾರದಿಂದ ಬಡ್ಡಿ ಕಟ್ಟದಿದ್ದಕ್ಕೆ ತನ್ಜೀರ್​ಗೆ ಕಿರುಕುಳ ನೀಡಲಾಗಿದೆ. ಒಟ್ಟು 5 ಲಕ್ಷ ರೂ. ಸಾಲ ಮಾಡಿದ್ದ ತನ್ಜೀರ್​​, ಸಾಲಕ್ಕೆ ಬಡ್ಡಿ ಕಟ್ಟಲಾಗದೆ ಮನನೊಂದು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಅಸ್ವಸ್ಥಗೊಂಡ ತನ್ಜೀರ್​ಗೆ ಹಾಸನದ ವೈದ್ಯಕೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಮೀಟರ್ ಬಡ್ಡಿ ಆರೋಪ ಸಂಬಂಧ ಸಕಲೇಶಪುರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದೂರು ದಾಖಲಾಗಿದೆ.

ರಾಜ್ಯ ಸರ್ಕಾರ ಇತ್ತೀಚೆಗೆ ಸುಗ್ರೀವಾಜ್ಞೆ ಹೊರಡಿಸಿದರು ಕೂಡ ಕರ್ನಾಟಕದಲ್ಲಿ ಮೈಕ್ರೋ ಫೈನಾನ್ಸ್​ಗಳ ಕಿರುಕುಳ ಮಾತ್ರ ಇನ್ನೂ ನಿಂತಿಲ್ಲ. ಅದೆಷ್ಟೋ ಬಡ ಜನರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಇತ್ತೀಚೆಗೆ ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ಬೇಸತ್ತು ಹಾವೇರಿ ಜಿಲ್ಲೆಯಲ್ಲಿ ಇಬ್ಬರು ಆತ್ಮಹತ್ಯೆಗೆ ಶರಣಾಗಿದ್ದರು.

Hassan Head Constable Runs Loan Shark Racket, Man Attempts Suicide Over Harassment by police constable Arun, who works at the SP office. Tanveer is the man who attempted suicide.