ಬೆಂಗಳೂರು ಕೆ.ಆರ್ ವೃತ್ತದಲ್ಲಿ ಬಿಎಂಟಿಸಿ ಬಸ್ಸುಗಳ ಡಿಕ್ಕಿ; ಹಲವು ಪ್ರಯಾಣಿಕರಿಗೆ ಗಾಯ, ಮೂವರ ಸ್ಥಿತಿ ಗಂಭೀರ, ಯುವತಿಯ ಕಾಲು ಸಿಲುಕಿ ಎರೆಡು ಗಂಟೆಗಳ ನರಳಾಟ, ಸಾರ್ವಜನಿಕರ ಆಕ್ರೋಶ

04-07-26 02:51 pm       HK News Staffer   ಕ್ರೈಂ

ಕೆಆರ್ ವೃತ್ತದಲ್ಲಿ ಬಿಎಂಟಿಸಿಯ ವಾಯುವಜ್ರ ಹಾಗೂ ಇವಿ ಬಸ್ ನಡುವೆ ಶನಿವಾರ ಬೆಳಿಗ್ಗೆ ಸಂಭವಿಸಿದ ಅಪಘಾತದಲ್ಲಿ ಎಂಟು ಮಂದಿ ಗಾಯಗೊಂಡಿದ್ದಾರೆ. ಆ ಪೈಕಿ ಮೂವರ ಸ್ಥಿತಿ ಗಂಭೀರವಾಗಿದೆ. ಕಲಬುರಗಿ ಮೂಲದ ಭಾಗಮ್ಯ ಎಂಬ ಯುವತಿಯ ಕಾಲು ಸಿಲುಕಿ ನರಳಾಟ ನಡೆಸುತ್ತಿದ್ದರು. ಅಗ್ನಿಶಾಮಕ ದಳ, ಪೊಲೀಸರು ಹಾಗೂ ಸ್ಥಳೀಯರು ಎರೆಡು ತಾಸು ಕಾರ್ಯಾಚರಣೆ ನಡೆಸಿ ಯುವತಿಯನ್ನು ರಕ್ಷಿಸಿದ್ದಾರೆ.

ಬೆಂಗಳೂರು, ಜುಲೈ 04: ಕೆಆರ್ ವೃತ್ತದಲ್ಲಿ ಬಿಎಂಟಿಸಿಯ ವಾಯುವಜ್ರ ಹಾಗೂ ಇವಿ ಬಸ್ ನಡುವೆ ಶನಿವಾರ ಬೆಳಿಗ್ಗೆ ಸಂಭವಿಸಿದ ಅಪಘಾತದಲ್ಲಿ ಎಂಟು ಮಂದಿ ಗಾಯಗೊಂಡಿದ್ದಾರೆ. ಆ ಪೈಕಿ ಮೂವರ ಸ್ಥಿತಿ ಗಂಭೀರವಾಗಿದೆ. ಕಲಬುರಗಿ ಮೂಲದ ಭಾಗಮ್ಯ ಎಂಬ ಯುವತಿಯ ಕಾಲು ಸಿಲುಕಿ ನರಳಾಟ ನಡೆಸುತ್ತಿದ್ದರು. ಅಗ್ನಿಶಾಮಕ ದಳ, ಪೊಲೀಸರು ಹಾಗೂ ಸ್ಥಳೀಯರು ಎರೆಡು ತಾಸು ಕಾರ್ಯಾಚರಣೆ ನಡೆಸಿ ಯುವತಿಯನ್ನು ರಕ್ಷಿಸಿದ್ದಾರೆ.

ಗಾಯಾಳು ಯುವತಿ ಹಾಗೂ ಬಸ್ ಚಾಲಕ ಸೇರಿದಂತೆ ಹಲವರನ್ನು ಸೇಂಟ್ ಮಾರ್ಥಾಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಭಾಗ್ಯ ಹಾಗೂ ಚಾಲಕನಿಗೆ ಸೇಂಟ್ ಮಾರ್ಥಾಸ್ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಮುಂದುವರಿಸಲಾಗಿದೆ.

ಸೇಂಟ್ ಮಾರ್ಥಾಸ್ ಆಸ್ಪತ್ರೆಗೆ ಬಿಎಂಟಿಸಿ ಅಧಿಕಾರಿಗಳು, ಪೊಲೀಸರ ಭೇಟಿ ಮಾಡಿ ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ವೈದ್ಯರ ಬಳಿ ಮನವಿ ಮಾಡಿದ್ದಾರೆ. ಆದರೆ, ಸೇಂಟ್ ಮಾರ್ಥಾಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ದುಬಾರಿಯಾಗಿದ್ದು ನಮ್ಮ ಬಳಿ ಅಷ್ಟೊಂದು ಹಣವಿಲ್ಲ ಎಂದು ಗಾಯಾಳುಗಳು ಹೇಳಿದರು.‌ ಬಿಎಂಟಿಸಿ ಕಡೆಯಿಂದಲೇ ಚಿಕಿತ್ಸಾ ವೆಚ್ಚ ನೀಡುವಂತೆ ಗಾಯಾಳುಗಳು ಮನವಿ ಮಾಡಿದ್ದಾರೆ

ಕೆಆರ್ ವೃತ್ತದಲ್ಲಿ ನಿಂತಿದ್ದ ಎಸಿ ಬಸ್‌ಗೆ ಹಿಂಬದಿಯಿಂದ ಬಂದ ಬಿಎಂಟಿಸಿ ಸೇರಿದ ಸಾಮಾನ್ಯ ಬಸ್ ಡಿಕ್ಕಿಯಾಗಿದೆ. ಸ್ಥಳಕ್ಕೆ ಪಶ್ಚಿಮ ಸಂಚಾರ ವಿಭಾಗದ ಡಿಸಿಪಿ ಅನೂಪ್ ಶೆಟ್ಟಿ ಭೇಟಿ ನೀಡಿ ಮಾಹಿತಿ ಪಡೆದುಕೊಂಡರು.

ಇವಿ ಬಸ್‌ನ ಚಾಲಕನ ಅತಿವೇಗದ ಚಾಲನೆಯೇ ಅಪಘಾತ ಕಾರಣ ಎಂಬುದು ಮೇಲ್ನೋಟಕ್ಕೆ ಕಂಡುಬಂದಿದೆ‌‌ ಎಂದು ಸಂಚಾರ ಪೊಲೀಸರು ತಿಳಿಸಿದ್ದಾರೆ.

ನಗರದ ಹೃದಯದ ಭಾಗದಲ್ಲೇ ಅಪಘಾತ ಸಂಭವಿಸಿ ಹಲವರು ಗಾಯಗೊಂಡಿದ್ದರೂ ಕಾರ್ಯಾಚರಣೆ ವಿಳಂಬವಾಗಿರುವುದಕ್ಕೆ ಸಾರ್ವಜನಿಕರು ಹಾಗೂ ಪ್ರಯಾಣಿಕರಿಂದ ಆಕ್ರೋಶ ವ್ಯಕ್ತವಾಗಿದೆ.

ಘಟನೆ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಪಶ್ಚಿಮ ಸಂಚಾರ ವಿಭಾಗದ ಡಿಸಿಪಿ ಅನೂಪ್ ಶೆಟ್ಟಿ, ಪ್ರಾಥಮಿಕ ತನಿಖೆಯ ಪ್ರಕಾರ ಮುಂಭಾಗದ ಬಸ್ ಟ್ರಾಫಿಕ್ ಸಿಗ್ನಲ್‌ಗೆ ನಿಂತಿದ್ದರೂ, ಹಿಂದಿನಿಂದ ಬಂದ ಬಸ್ ಸಮಯಕ್ಕೆ ನಿಲ್ಲಿಸಲು ಸಾಧ್ಯವಾಗದೆ ಡಿಕ್ಕಿ ಹೊಡೆದಿದೆ ಎಂದು ಹೇಳಿದರು.

ಇನ್ನು ಸಾರಿಗೆ ಸಚಿವ ಬೈರತಿ ಸುರೇಶ್ ಅವರು ಆಸ್ಪತ್ರೆಗೆ ಭೇಟಿ ನೀಡಿ, ರೋಗಿಗಳ ಆರೋಗ್ಯವನ್ನು ವಿಚಾರಿಸಿದ್ದಾರೆ. ಬಳಿಕ ಮಾತನಾಡಿದ ಅವರು, ಕೆ.ಆರ್ ಸರ್ಕಲ್‌ನಲ್ಲಿ ಬೆಳಗ್ಗೆ ಎರಡು ಇವಿ ಬಿಎಂಟಿಸಿ ನಡುವೆ ಅಪಘಾತ ಸಂಭವಿಸಿದೆ. ಅವಘಡದಲ್ಲಿ 16 ಜನ ಗಾಯಗೊಂಡಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ದೇವರ ದಯೆಯಿಂದ ಕೆಲವರು ಡಿಸ್ಚಾರ್ಜ್ ಆಗ್ತಿದ್ದಾರೆ. ಮೂವರಿಗೆ ಎಂಆರ್‌ಐ, ಸಿಟಿ ಸ್ಕ್ಯಾನ್ ಮಾಡಿದಾರೆ. ಒಂದು ಬಸ್ ಸಿಗ್ನಲ್‌ನಲ್ಲಿ ನಿಂತಿತ್ತು. ಈ ವೇಳೆ ಮತ್ತೊಂದು ಬಸ್ ಹಿಂದಿನಿಂದ ಬಂದು ಗುದ್ದಿದೆ. ನಮ್ಮ ಸಿಬ್ಬಂದಿ ಗಾಯಾಳುಗಳನ್ನು ಕರೆತಂದು ಅಡ್ಮಿಟ್ ಮಾಡಿಸಿದ್ದಾರೆ. ಗಾಯಾಳುಗಳ ಚಿಕಿತ್ಸಾ ವೆಚ್ಚ ಸರ್ಕಾರದಿಂದ ಭರಿಸುತ್ತೇವೆ ಎಂದು ಹೇಳಿದ್ದಾರೆ.

ಚಾಲಕ ಅಜಾಗರೂಕತೆಯಿಂದ ಚಾಲನೆ ಮಾಡಿದ್ದರಾ ಎಂದು ಪರಿಶೀಲನೆ ಮಾಡ್ತೇವೆ. ಇವಿ ಬಸ್‌ಗಳ ಅಪಘಾತ ಹೆಚ್ಚಾಗುತ್ತಿವೆ. ಇದರ ಸ್ಥಿತಿಗತಿ ಬಗ್ಗೆ ವರದಿ ತರಿಸಿಕೊಳ್ಳುತ್ತೇವೆ ಎಂದರು.