ಬೆಂಗಳೂರಿನಲ್ಲಿ ಡೇಂಜರ್ ಡೇ ಕೇರ್ ; ಪುಟ್ಟ ಮಕ್ಕಳನ್ನ ವಾಷಿಂಗ್ ಮೆಷಿನ್‌ ಒಳಗೆ ಹಾಕಿ ಹಿಂಸೆ, ಶೌಚಾಲಯದಲ್ಲಿ ಬಾಯಿಗೆ ಜೆಟ್ ಸ್ಪ್ರೇ ಇಟ್ಟು ಕ್ರೌರ್ಯ, ವಿಡಿಯೋ ವೈರಲ್ ಬೆನ್ನಲ್ಲೇ ಇಬ್ಬರು ರಾಕ್ಷಸಿಯರ ಬಂಧನ !

03-07-26 02:41 pm       HK News Staffer   ಕ್ರೈಂ

ರಾಜಧಾನಿ ಬೆಂಗಳೂರಿನ ಪ್ರತಿಷ್ಠಿತ ಬ್ರೂಕ್‌ಫೀಲ್ಡ್ ಪ್ರದೇಶದಲ್ಲಿರುವ ಸೊಸೈಟಿ ಜನರಲ್ ಬೇಬಿ ಡೇ ಕೇರ್ ಸೆಂಟರ್ನಲ್ಲಿ ಪುಟ್ಟ ಮಕ್ಕಳ ಮೇಲೆ ನಡೆದಿರುವ ಅಮಾನವೀಯ ದೌರ್ಜನ್ಯ ಪ್ರಕರಣ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದೆ. ಪ್ರಕರಣ ಸಂಬಂಧ ಹೆಚ್‌ಎಎಲ್ ಪೊಲೀಸ್ ಠಾಣೆ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದು, ಪ್ರಮುಖ ಆರೋಪಿ ವಿಜಯಲಕ್ಷ್ಮಿ ಸೇರಿದಂತೆ ಇಬ್ಬರನ್ನು ಬಂಧಿಸಿದ್ದಾರೆ.

ಬೆಂಗಳೂರು, ಜುಲೈ 03: ರಾಜಧಾನಿ ಬೆಂಗಳೂರಿನ ಪ್ರತಿಷ್ಠಿತ ಬ್ರೂಕ್‌ಫೀಲ್ಡ್ ಪ್ರದೇಶದಲ್ಲಿರುವ ಸೊಸೈಟಿ ಜನರಲ್ ಬೇಬಿ ಡೇ ಕೇರ್ ಸೆಂಟರ್ನಲ್ಲಿ ಪುಟ್ಟ ಮಕ್ಕಳ ಮೇಲೆ ನಡೆದಿರುವ ಅಮಾನವೀಯ ದೌರ್ಜನ್ಯ ಪ್ರಕರಣ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದೆ. ಪ್ರಕರಣ ಸಂಬಂಧ ಹೆಚ್‌ಎಎಲ್ ಪೊಲೀಸ್ ಠಾಣೆ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದು, ಪ್ರಮುಖ ಆರೋಪಿ ವಿಜಯಲಕ್ಷ್ಮಿ ಸೇರಿದಂತೆ ಇಬ್ಬರನ್ನು ಬಂಧಿಸಿದ್ದಾರೆ. 

ಸಿಸಿಟಿವಿ ವಿಡಿಯೋ ವೈರಲ್; 

ಡೇ ಕೇರ್‌ನೊಳಗೆ ಮಕ್ಕಳ ಮೇಲಿನ ಹಲ್ಲೆಯ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬೆನ್ನಲ್ಲೇ ಪೊಲೀಸರು ಕಾರ್ಯಾಚರಣೆ ಆರಂಭಿಸಿದರು. ವಿಡಿಯೋದಲ್ಲಿ ಕಾಣಿಸಿಕೊಂಡ ಮೂವರು ಸಿಬ್ಬಂದಿಗೆ ನೋಟಿಸ್ ನೀಡಿ ವಿಚಾರಣೆ ನಡೆಸಿದಾಗ, “ನಮಗೆ ಈ ಬಗ್ಗೆ ಯಾವುದೇ ಮಾಹಿತಿ ಇಲ್ಲ” ಎಂದು ಆರೋಪಿಗಳು ಉಡಾಫೆಯ ಉತ್ತರ ನೀಡಿದ್ದಾರೆ ಎನ್ನಲಾಗಿದೆ.

ಪುಟ್ಟ ಮಕ್ಕಳ ಮೇಲೆ ಅಮಾನವೀಯ ಕ್ರೌರ್ಯ
ತನಿಖೆಯಲ್ಲಿ ಹೊರಬಿದ್ದಿರುವ ವಿವರಗಳು ಬೆಚ್ಚಿಬೀಳಿಸುವಂತಿವೆ. ಡೇ ಕೇರ್‌ನಲ್ಲಿ ಅಳುತ್ತಿದ್ದ ಎರಡು ವರ್ಷದ ಮಕ್ಕಳನ್ನು ವಾಷಿಂಗ್ ಮಷಿನ್ ಒಳಗೆ ಕೂರಿಸಿ ವಾಟರ್ ಜೆಟ್ ಸ್ಪ್ರೇ ಮಾಡುವುದು, ಬಾತ್‌ರೂಮ್‌ನಲ್ಲಿ ಕೂಡಿಹಾಕುವುದು ಸೇರಿದಂತೆ ಅಮಾನವೀಯ ಕೃತ್ಯಗಳು ನಡೆದಿರುವ ಆರೋಪ ಕೇಳಿಬಂದಿದೆ. ಮಕ್ಕಳನ್ನು ಹೆದರಿಸಿ, ಮಾನಸಿಕ ಹಾಗೂ ದೈಹಿಕವಾಗಿ ಹಿಂಸಿಸುವ ಘಟನೆಗಳು ದೀರ್ಘಕಾಲದಿಂದ ನಡೆಯುತ್ತಿದ್ದವು ಎಂಬ ಮಾಹಿತಿ ತನಿಖೆಯಲ್ಲಿ ಬಹಿರಂಗವಾಗಿದೆ.

ಇದಕ್ಕೂ ಮೊದಲು ಈ ಕೃತ್ಯಗಳ ವಿರುದ್ಧ ಧ್ವನಿ ಎತ್ತಿದ್ದ ಸಿಬ್ಬಂದಿಯನ್ನೇ ಕೆಲಸದಿಂದ ವಜಾಗೊಳಿಸಿ, ಪ್ರಕರಣವನ್ನು ಮುಚ್ಚಿಹಾಕಲು ಯತ್ನಿಸಲಾಗಿದೆ ಎಂಬ ಆಘಾತಕಾರಿ ಸಂಗತಿಯೂ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಐವರು ಸಿಬ್ಬಂದಿ ವಿರುದ್ಧ ಎಫ್‌ಐಆರ್; ಡೇ ಕೇರ್ ಕೇಂದ್ರ ಸೀಲ್

ಪ್ರಕರಣಕ್ಕೆ ಸಂಬಂಧಿಸಿದಂತೆ ಡೇ ಕೇರ್‌ನ ಐವರು ಸಿಬ್ಬಂದಿ ವಿರುದ್ಧ ಎಫ್‌ಐಆರ್ ದಾಖಲಾಗಿದ್ದು, ಕೇಂದ್ರವನ್ನು ಮುಚ್ಚಲಾಗಿದೆ. ಮಕ್ಕಳ ಸಹಾಯವಾಣಿಗೆ (ಚೈಲ್ಡ್ ಹೆಲ್ಪ್‌ಲೈನ್) ವಿಡಿಯೋ ಸಮೇತ ದೂರು ಸಲ್ಲಿಕೆಯಾಗಿದ್ದು, ಅದರ ಆಧಾರದಲ್ಲಿ ಅಧಿಕಾರಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಹೆಚ್‌ಎಎಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ವೈರಲ್ ವಿಡಿಯೋಗಳ ಸತ್ಯಾಸತ್ಯತೆ ಹಾಗೂ ಆರೋಪಿಗಳ ಪಾತ್ರವನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ.

'ಬ್ರ್ಯಾಂಡ್ ಬೆಂಗಳೂರಿಗೂ ಧಕ್ಕೆ' – ಗೃಹ ಸಚಿವರ ಆಕ್ರೋಶ

ಘಟನೆಯ ಕುರಿತು ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ರಾಜ್ಯ ಗೃಹ ಸಚಿವರು, ಡೇ ಕೇರ್ ಕೇಂದ್ರಗಳ ನಿರ್ವಹಣೆ ಮತ್ತು ಮಕ್ಕಳ ಸುರಕ್ಷತೆಗೆ ಸಂಬಂಧಿಸಿದಂತೆ ಕಟ್ಟುನಿಟ್ಟಿನ ನಿಯಮಗಳು ಹಾಗೂ ಮಾರ್ಗಸೂಚಿಗಳಿದ್ದರೂ, ಈ ಸಂಸ್ಥೆ ಅವುಗಳನ್ನು ಸಂಪೂರ್ಣವಾಗಿ ಉಲ್ಲಂಘಿಸಿದೆ ಎಂದು ಹೇಳಿದ್ದಾರೆ.

ಇಂತಹ ಅಮಾನವೀಯ ಘಟನೆಗಳು ಸಂಬಂಧಪಟ್ಟ ಸಂಸ್ಥೆಯ ಪ್ರತಿಷ್ಠೆಗೆ ಮಾತ್ರವಲ್ಲ, ಇಡೀ 'ಬ್ರ್ಯಾಂಡ್ ಬೆಂಗಳೂರು ಹೆಸರಿಗೂ ಕಳಂಕ ತರುತ್ತವೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು, ಎಂದು ಖರ್ಗೆ ಸ್ಪಷ್ಟಪಡಿಸಿದ್ದಾರೆ.

ಇನ್ನೊಂದೆಡೆ, ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವೂ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಮುಖ್ಯಮಂತ್ರಿ ಅವರಿಗೆ ಪತ್ರ ಬರೆದು ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಹಾಗೂ ರಾಜ್ಯದ ಎಲ್ಲಾ ಡೇ ಕೇರ್ ಕೇಂದ್ರಗಳ ಸಮಗ್ರ ಪರಿಶೀಲನೆ ನಡೆಸುವಂತೆ ಒತ್ತಾಯಿಸಿದೆ.

ಇಂದಿನ ನಗರ ಜೀವನದಲ್ಲಿ ಉದ್ಯೋಗ ನಿರತ ಪೋಷಕರಿಗೆ ಡೇ ಕೇರ್ ಕೇಂದ್ರಗಳು ಅಗತ್ಯವಾಗಿದ್ದರೂ, ಮಕ್ಕಳ ಸುರಕ್ಷತೆ ಯಾವುದೇ ಕಾರಣಕ್ಕೂ ನಿರ್ಲಕ್ಷ್ಯವಾಗಬಾರದು. ಪೋಷಕರು ಡೇ ಕೇರ್ ಆಯ್ಕೆ ಮಾಡುವ ಮೊದಲು ಅದರ ಪರವಾನಗಿ, ಸಿಬ್ಬಂದಿಯ ಹಿನ್ನೆಲೆ, ಸಿಸಿಟಿವಿ ವ್ಯವಸ್ಥೆ, ಸುರಕ್ಷತಾ ಕ್ರಮಗಳು ಹಾಗೂ ಮೇಲ್ವಿಚಾರಣೆಯ ಬಗ್ಗೆ ಸಮಗ್ರ ಮಾಹಿತಿ ಪಡೆಯುವುದು ಅತ್ಯಗತ್ಯ. ಮಕ್ಕಳ ಮೇಲಿನ ಯಾವುದೇ ರೀತಿಯ ದೌರ್ಜನ್ಯ ಅಥವಾ ಅನುಮಾನಾಸ್ಪದ ಘಟನೆ ಕಂಡುಬಂದರೆ ತಕ್ಷಣವೇ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಮಕ್ಕಳ ಸಹಾಯವಾಣಿಗೆ ದೂರು ನೀಡುವುದು ಪ್ರತಿಯೊಬ್ಬರ ಸಾಮಾಜಿಕ ಹೊಣೆಗಾರಿಕೆಯಾಗಿದೆ.