ಶಂಕರಪುರದಲ್ಲಿ ಕಾರಿಗೆ ಡೀಸೆಲ್ ತುಂಬಿಸಿ ಹಣ ನೀಡದೆ ವಂಚನೆ ; ಪರಾರಿಯಾಗಿದ್ದ ಮೂವರು ಯುವಕರು ಬೆಂಗಳೂರಿನಲ್ಲಿ ಖಾಕಿ ಬಲೆಗೆ

02-07-26 08:40 pm       HK News Staffer   ಕ್ರೈಂ

ಶಂಕರಪುರ ಸಮೀಪದ ಕುರ್ಕಾಳು ಪೆಟ್ರೋಲ್ ಬಂಕ್‌ನಲ್ಲಿ ಏಕೋ ಸ್ಪೋರ್ಟ್ ಕಾರಿಗೆ 4,711ರೂ. ಡೀಸೆಲ್ ತುಂಬಿಸಿಕೊಂಡು ಹಣ ನೀಡದೆ ಪರಾರಿಯಾಗಿದ್ದ ಮೂವರು ಯುವಕರನ್ನ ಶಿರ್ವ ಪೊಲೀಸರು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ.

ಉಡುಪಿ, ಜು. 2: ಶಂಕರಪುರ ಸಮೀಪದ ಕುರ್ಕಾಲು ಪೆಟ್ರೋಲ್ ಬಂಕ್‌ನಲ್ಲಿ ಏಕೋ ಸ್ಪೋರ್ಟ್ ಕಾರಿಗೆ 4,711ರೂ. ಡೀಸೆಲ್ ತುಂಬಿಸಿಕೊಂಡು ಹಣ ನೀಡದೆ ಪರಾರಿಯಾಗಿದ್ದ ಮೂವರು ಯುವಕರನ್ನ ಶಿರ್ವ ಪೊಲೀಸರು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ. 

ಬಂಧಿತರನ್ನು ಶಿರ್ವದ ಕೋಟೆಕಾರ ನಿವಾಸಿ ಮೊಹಮ್ಮದ್ ರಿಯಾಜ್ (26), ಶಿರ್ವದ ಭೂತಬೆಟ್ಟು ನಿವಾಸಿ ಮೊಹಮ್ಮದ್ ಅಫ್ರಾಜ್ (23) ಹಾಗೂ ಉಡುಪಿಯ ಅಂಬಾಗಿಲು ನಿವಾಸಿ ಆಶಿಲ್ (21) ಎಂದು ಗುರುತಿಸಲಾಗಿದೆ.

ಜೂನ್ 27ರಂದು ರಾತ್ರಿ ಸುಮಾರು 9.10ಕ್ಕೆ ಕಾಪು ತಾಲೂಕಿನ ಕುರ್ಕಾಲು ಗ್ರಾಮದ ಸುಭಾಷ್ ನಗರದ ಪೆಟ್ರೋಲ್ ಪಂಪ್ ನಲ್ಲಿ ಈ ಘಟನೆ ನಡೆದಿದ್ದು, ಸಿಸಿಟಿಯಲ್ಲಿ ದೃಶ್ಯ ಸೆರೆಯಾಗಿತ್ತು.
4,711 ರೂ.ಗೆ ಡೀಸೆಲ್ ತುಂಬಿದ ಬಳಿಕ ಸಿಬ್ಬಂದಿ ಕ್ಯೂಆರ್ ಕೋಡ್ ತೋರಿಸಿದ್ದಾನೆ. ಆರೋಪಿಗಳು ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿದಂತೆ ನಾಟಕವಾಡಿ, ಬಿಲ್ ನೀಡುವಂತೆ ಕೇಳಿದ್ದಾರೆ. ಸಿಬ್ಬಂದಿ ಬಿಲ್ ಕೊಡುವಷ್ಟರಲ್ಲಿ ಹಣ ಪಾವತಿಸದೇ ಪರಾರಿಯಾಗಿದ್ರು. 

ತಾಂತ್ರಿಕ ಮಾಹಿತಿ, ಕಾರ್ ನಂಬರ್ ಆಧರಿಸಿ ಕಾರ್ಕಳ ಡಿವೈಎಸ್‌ಪಿ ವಿಜಯ ಪ್ರಸಾದ್, ಕಾಪು ವೃತ್ತ ನಿರೀಕ್ಷಕ ಅಜ್ಮತ್ ಅಲಿ ಮಾರ್ಗದರ್ಶನದಲ್ಲಿ, ಶಿರ್ವ ಪಿಎಸ್‌ಐ ಮಂಜುನಾಥ ಮರಬಾಡ, ಪಿಎಸ್‌ಐ ಲೋಹಿತ್ ಕುಮಾರ್ ಸಿ.ಎಸ್. ಹಾಗೂ ಸಿಬ್ಬಂದಿಗಳಾದ ಹರ್ಷ ಭಟ್, ಬಸವರಾಜ್ ಮತ್ತು ದಾರಿಯಪ್ಪ ತಂಡ ಬೆಂಗಳೂರಿನಲ್ಲಿ ಆರೋಪಿಗಳನ್ನು ಪತ್ತೆಹಚ್ಚಿ ಬಂಧಿಸಿದೆ.
ಪ್ರಕರಣಕ್ಕೆ ಬಳಸಲಾಗಿದ್ದ ಫೋರ್ಡ್ ಎಕೋಸ್ಪೋರ್ಟ್ ಕಾರನ್ನು  ವಶಕ್ಕೆ ಪಡೆದಿದ್ದು, ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.