Crime News, Bangalore: ಕುಡಿದ ಮತ್ತಿನಲ್ಲಿ ತಾಯಿಯನ್ನೇ ಹೊಡೆದು ಕೊಂದ ಮಗ ; ಆರೋಪಿಗೆ ಸಂಪಾಜೆ ಶಾಲೆಯಲ್ಲಿ ಸಮುದಾಯ ಸೇವೆ ಶಿಕ್ಷೆ 

07-05-24 12:14 pm       Bangalore Correspondent   ಕ್ರೈಂ

ಕುಡಿದ ಮತ್ತಿನಲ್ಲಿ ಹೆತ್ತ ತಾಯಿಯನ್ನೇ ಹೊಡೆದು ಕೊಂದಿದ್ದ ಮಗನನ್ನು ಖುಲಾಸೆಗೊಳಿಸಿದ್ದ ಮಡಿಕೇರಿ ನ್ಯಾಯಾಲಯದ ಆದೇಶವನ್ನು ರದ್ದುಪಡಿಸಿರುವ ಹೈಕೋರ್ಟ್‌, ಆರೋಪಿಗೆ ಸಮುದಾಯ ಸೇವೆಯ ಶಿಕ್ಷೆ ವಿಧಿಸಿದೆ. 

ಬೆಂಗಳೂರು, ಮೇ.7: ಕುಡಿದ ಮತ್ತಿನಲ್ಲಿ ಹೆತ್ತ ತಾಯಿಯನ್ನೇ ಹೊಡೆದು ಕೊಂದಿದ್ದ ಮಗನನ್ನು ಖುಲಾಸೆಗೊಳಿಸಿದ್ದ ಮಡಿಕೇರಿ ನ್ಯಾಯಾಲಯದ ಆದೇಶವನ್ನು ರದ್ದುಪಡಿಸಿರುವ ಹೈಕೋರ್ಟ್‌, ಆರೋಪಿಗೆ ಸಮುದಾಯ ಸೇವೆಯ ಶಿಕ್ಷೆ ವಿಧಿಸಿದೆ. 

ಆರೋಪಿ ಈ ಮೊದಲೇ ಎರಡು ವರ್ಷ ಜೈಲು ಶಿಕ್ಷೆ ಅನುಭವಿಸಿದ ಹಿನ್ನೆಲೆಯಲ್ಲಿ ಸುಧಾರಣಾ ಕ್ರಮವಾಗಿ ಕೊಡಗು - ದಕ್ಷಿಣ ಕನ್ನಡ ಗಡಿಭಾಗದ ಸಂಪಾಜೆಯ ಸರಕಾರಿ ಶಾಲೆಯಲ್ಲಿ ಆವರಣ ಸ್ವಚ್ಛಗೊಳಿಸುವುದು, ಅದರ ನಿರ್ವಹಣೆ ಮಾಡುವುದು, ತೋಟ ನೋಡಿಕೊಳ್ಳುವುದನ್ನು ಶಿಕ್ಷೆಯ ರೂಪದಲ್ಲಿ ಸಮುದಾಯ ಸೇವೆ ಸಲ್ಲಿಸುವಂತೆ ಹೈಕೋರ್ಟ್ ಆದೇಶ ನೀಡಿದೆ. ಈ ಹಿಂದೆ ಅಧೀನ ನ್ಯಾಯಾಲಯ ಆರೋಪಿ ಖುಲಾಸೆಗೊಳಿಸಿದ್ದನ್ನು ಪ್ರಶ್ನಿಸಿ ಮಡಿಕೇರಿ ಪೊಲೀಸರು ಸಲ್ಲಿಸಿದ್ದ ಮೇಲ್ಮನವಿಯನ್ನು ಆಲಿಸಿದ ನ್ಯಾಯಮೂರ್ತಿಗಳಾದ ಕೆ.ಎಸ್‌.ಮುದ್ಗಲ್‌ ಮತ್ತು ಟಿ.ಜಿ. ಶಿವಶಂಕರೇಗೌಡ ಅವರಿದ್ದ ವಿಭಾಗೀಯ ಪೀಠ ಈ ಆದೇಶ ನೀಡಿದೆ. 

File:High Court of Karnataka, Bangalore MMK.jpg - Wikipedia

ಆರೋಪಿ ಒಂದು ವೇಳೆ ಸಮುದಾಯ ಸೇವೆ ಮಾಡದಿದ್ದರೆ ಹೆಚ್ಚುವರಿಯಾಗಿ 25 ಸಾವಿರ ದಂಡ ಮತ್ತು ಮೂರು ತಿಂಗಳು ಸೆರೆವಾಸ ಅನುಭವಿಸಬೇಕು ಎಂದು ನ್ಯಾಯಾಲಯ ಆದೇಶಿಸಿದೆ. 

ಎರಡೂ ಕಡೆಯ ವಾದ ಆಲಿಸಿದ ವಿಭಾಗೀಯ ಪೀಠ, ಮೃತ ಗಂಗಮ್ಮ ಅಲ್ಕೋಹಾಲಿಕ್‌ ಅಲ್ಸರ್‌ನಿಂದ ಬಳಲುತ್ತಿದ್ದರು ಎಂಬುದಕ್ಕೆ ಯಾವುದೇ ಸಾಕ್ಷ್ಯವಿಲ್ಲ. ವಿಚಾರಣಾ ನ್ಯಾಯಾಲಯ ಮೃತರು ಸಾಯುವ ಮುನ್ನ ನೀಡಿರುವ ಹೇಳಿಕೆ (ಡೈಯಿಂಗ್‌ ಡಿಕ್ಲರೇಷನ್‌) ನಂಬಿದೆಯೇ ಹೊರತು, ಅವರು ಆ ಹೇಳಿಕೆ ನೀಡುವಷ್ಟು ಫಿಟ್‌ ಆಗಿದ್ದರು ಎಂಬುದನ್ನು ಪರಿಗಣಿಸಿಲ್ಲ. ಜತೆಗೆ ಪ್ರಾಸಿಕ್ಯೂಷನ್‌ ಹೇಳಿಕೆಯನ್ನು ಪ್ರತ್ಯಕ್ಷದರ್ಶಿಗಳು ಮತ್ತು ಸಂತ್ರಸ್ತೆಯ ಕುಟುಂಬದವರು ಬೆಂಬಲಿಸಿಲ್ಲ. ಹಾಗಾಗಿ ವಿಚಾರಣಾ ನ್ಯಾಯಾಲಯದ ತೀರ್ಪು ರದ್ದುಗೊಳಿಸಲಾಗುತ್ತಿದೆ ಎಂದು ಹೇಳಿದೆ. 

ಪ್ರಾಸಿಕ್ಯೂಷನ್‌ ಪರ ವಾದ ಮಂಡಿಸಿದ್ದ ವಕೀಲರು, ಡೈಯಿಂಗ್‌ ಡಿಕ್ಲರೇಷನ್‌ ಅನ್ನು ವೈದ್ಯರು ಪ್ರಮಾಣೀಕರಿಸಿಲ್ಲ ಎಂದ ಮಾತ್ರಕ್ಕೆ ಅದನ್ನು ಸುಳ್ಳು ಎಂದು ಹೇಳಬೇಕಿಲ್ಲ. ಸಾಕ್ಷಿಯ ದಾಖಲೆಗಳು ಸಂತ್ರಸ್ತೆ ಹೇಳಿಕೆ ನೀಡುವಷ್ಟು ದೈಹಿಕವಾಗಿ ಸದೃಢರಾಗಿದ್ದರು. ಸಾಕ್ಷಿಗಳು ಮತ್ತು ಸಂತ್ರಸ್ತೆಯ ಕುಟುಂಬದವರೆಲ್ಲ ಅವರ ಸಂಬಂಧಿಗಳೇ ಆಗಿರುವುದರಿಂದ ಅವರೆಲ್ಲ ಪ್ರತಿಕೂಲ ಸಾಕ್ಷಿಗಳಾಗಿದ್ದಾರೆ ಎಂದು ವಾದಿಸಿದ್ದರು. 

2015ರ ಏ. 4ರಂದು ಘಟನೆ ನಡೆದಿತ್ತು.‌ ದುಶ್ಚಟಗಳಿಂದ ದಾರಿ ತಪ್ಪಿದ್ದ ಮಗ ಅನಿಲ್‌ನನ್ನು ತಾಯಿ ಗಂಗಮ್ಮ ಬೈಯ್ದಿದ್ದರು. ಸಿಟ್ಟಿಗೆದ್ದ ಮಗ ದೊಣ್ಣೆಯಿಂದ ಥಳಿಸಿದ್ದರಿಂದ ಅವರು ಗಂಭೀರ ಗಾಯಗೊಂಡಿದ್ದರು. ಚಿಕಿತ್ಸೆಗಾಗಿ ಗಂಗಮ್ಮ ಅವರನ್ನು ಸುಳ್ಯದ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಗಿತ್ತು. ಬಳಿಕ ಅವರನ್ನು ಮಂಗಳೂರಿನ ವೆನ್‌ಲಾಕ್‌ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಚಿಕಿತ್ಸೆ ಫಲಿಸದೆ ಏ.5ರಂದು ಸಾವನ್ನಪ್ಪಿದ್ದರು. ಪೊಲೀಸರು ಪುತ್ರನ ವಿರುದ್ಧ ಕೊಲೆ ಪ್ರಕರಣ ದಾಖಲಿಸಿ ಬಂಧಿಸಿದ್ದರು.

The Karnataka High Court sentenced an alcohol addict to imprisonment for the period of detention of two years already undergone by him, and payment of Rs 10,000 as fine for murdering his 60-year-old mother for advising him to go to work, by kicking and attacking her with a wooden club, at Chadav village of Sampaje in Madikeri taluk.