Gadag Murder, Arrest; ಗದಗ ನಾಲ್ವರ ಹತ್ಯೆ ಪ್ರಕರಣಕ್ಕೆ ಮೇಜರ್ ಟ್ವಿಸ್ಟ್ ; ಆಸ್ತಿಗಾಗಿ ತಂದೆ, ತಾಯಿ ಕೊಲೆಗೆ ಮನೆ ಮಗನಿಂದಲೇ ಸುಪಾರಿ, ಗುರಿ ತಪ್ಪಿ ಸಂಬಂಧಿಕರನ್ನು ಮುಗಿಸಿದ್ದ ಕಿಲ್ಲರ್ ಗ್ಯಾಂಗ್ ! ಸಾವಿನ ದವಡೆಯಿಂದ ಪಾರಾದ ನಗರಸಭೆ ಉಪಾಧ್ಯಕ್ಷೆ 

22-04-24 10:14 pm       HK NEWS   ಕ್ರೈಂ

ಇಡೀ ರಾಜ್ಯದ ಜನರನ್ನು ಬೆಚ್ಚಿಬೀಳುವಂತೆ ಮಾಡಿದ್ದ ಗದಗ ಜಿಲ್ಲೆಯ ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣಕ್ಕೆ ಸ್ಪೋಟಕ ತಿರುವು ಸಿಕ್ಕಿದೆ. ಪೊಲೀಸರ ವಿಚಾರಣೆಯಲ್ಲಿ ಮನೆಯ ಮಗನೇ ಇಡೀ ಕುಟುಂಬವನ್ನು ಮುಗಿಸಲು ಸುಪಾರಿ ನೀಡಿರುವುದು ಬೆಳಕಿಗೆ ಬಂದಿದೆ. 

ಗದಗ, ಎ.22: ಇಡೀ ರಾಜ್ಯದ ಜನರನ್ನು ಬೆಚ್ಚಿಬೀಳುವಂತೆ ಮಾಡಿದ್ದ ಗದಗ ಜಿಲ್ಲೆಯ ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣಕ್ಕೆ ಸ್ಪೋಟಕ ತಿರುವು ಸಿಕ್ಕಿದೆ. ಪೊಲೀಸರ ವಿಚಾರಣೆಯಲ್ಲಿ ಮನೆಯ ಮಗನೇ ಇಡೀ ಕುಟುಂಬವನ್ನು ಮುಗಿಸಲು ಸುಪಾರಿ ನೀಡಿರುವುದು ಬೆಳಕಿಗೆ ಬಂದಿದೆ. 

ಮನೆಯ ಹಿರಿಯ ಮಗನೇ ಆಸ್ತಿ ಮೇಲಿನ ದಾಹದಿಂದ ತನ್ನ ತಂದೆ, ತಾಯಿಯನ್ನು ಕೊಲೆ ಮಾಡಲು ಸುಪಾರಿ ನೀಡಿರುವುದು ಪೊಲೀಸರ ತನಿಖೆಯಲ್ಲಿ ಬಯಲಾಗಿದೆ. ಆದರೆ, ಸುಪಾರಿ ಕಿಲ್ಲರ್‌ಗಳ ಎಡವಟ್ಟಿನಿಂದಾಗಿ, ಆ ದಿನ ಮನೆಗೆ ಬಂದು ಉಳಿದುಕೊಂಡಿದ್ದ ಅಮಾಯಕ ನೆಂಟರು ಜೀವ ತೆತ್ತಿದ್ದಾರೆ! 

ಗದಗ ನಗರದ ದಾಸರ ಓಣಿಯಲ್ಲಿ ಎರಡು ದಿನಗಳ ಹಿಂದೆ ನಾಲ್ವರ ಭೀಕರ ಹತ್ಯೆ ನಡೆದಿತ್ತು. ಶುಕ್ರವಾರ ಬೆಳಗಿನ ಜಾವ ಮೂರು ಗಂಟೆಗೆ ಕೊಲೆ ನಡೆದಿತ್ತು. ಬೆಟಗೇರಿ ನಗರಸಭೆ ಮಾಜಿ ಅಧ್ಯಕ್ಷ ಪ್ರಕಾಶ್ ಬಾಕಳೆ, ಹಾಲಿ ಉಪಾಧ್ಯಕ್ಷೆ ಸುನಂದಾ ಬಾಕಳೆ ಟಾರ್ಗೆಟ್ ಮಾಡಿ ಕೃತ್ಯ ನಡೆದಿತ್ತು. ಆದರೆ ಹಂತಕರು ಮನೆಗೆ ನುಗ್ಗಿ ಮೇಲಿನ ಮಹಡಿಯಲ್ಲಿ ಮಲಗಿದ್ದ ಪ್ರಕಾಶ್ ಅವರ ಕಿರಿಯ ಮಗ ಕಾರ್ತಿಕ್ ಬಾಕಳೆ (28), ಸಂಬಂಧಿಕರಾಗಿ ಮನೆಗೆ ಬಂದಿದ್ದ ಪರಶುರಾಮ್ ಹಾದಿಮನಿ (55), ಲಕ್ಷ್ಮೀ ಹಾದಿಮನಿ (45) ಮತ್ತು ಅವರ ಮಗಳು ಆಕಾಂಕ್ಷಾ (16) ಅವರನ್ನು ಹತ್ಯೆ ಮಾಡಿದ್ದರು. ಮಹಡಿಯಲ್ಲಿ ಸದ್ದು ಕೇಳಿ ಆತಂಕಗೊಂಡ ಪ್ರಕಾಶ್‌ ಬಾಕಳೆ ಪೊಲೀಸರಿಗೆ ಫೋನ್‌ ಮಾಡಿದಾಗ ಕೊಲೆಗಾರರು ಪರಾರಿಯಾಗಿದ್ದರು.

ಕೊಲೆಯಾದ ದಿನ ಸ್ಥಳದಲ್ಲಿಯೇ ಆರೋಪಿ ಹಿರಿಯ ಮಗ ವಿನಾಯಕ ಇದ್ದ. ಆತನೇ ಪೊಲೀಸರಿಗೆ ಖುದ್ದಾಗಿ ಮಾಹಿತಿಗಳನ್ನು ಕೊಟ್ಟಿದ್ದ. ಈ ವೇಳೆ ತನಗೆ ಏನೂ ಗೊತ್ತಿಲ್ಲದಂತೆ ನಟಿಸಿದ್ದ. ಆರೋಪಿ ವಿನಾಯಕ, ಪ್ರಕಾಶ್ ಬಾಕಳೆ ಅವರ ಮೊದಲ ಹೆಂಡತಿಯ ಮಗನಾಗಿದ್ದು, ಆಸ್ತಿ ವಿಚಾರದ ವೈಷಮ್ಯದಿಂದ ಮಹಾರಾಷ್ಟ್ರ ಮೂಲದ ಫಯಾಜ್ ಗ್ಯಾಂಗ್‍ಗೆ ಸುಪಾರಿ ಕೊಟ್ಟಿದ್ದ ಎಂದು ತಿಳಿದುಬಂದಿದೆ. 

ಆರೋಪಿಗಳಾದ ವಿನಾಯಕ ಫೈರೋಜ್ ಖಾಜಿ, ಜಿಶಾನ್ ಖಾಜಿ, ಸಾಹಿಲ್ ಖಾಜಿ, ಸೊಹೇಲ್ ಖಾಲಿ, ಸುಲ್ತಾನ್ ಶೇಖ್, ಮಹೇಶ್ ಸಾಳಂಕಿ, ವಾಹಿದ್ ಬೇಪಾರಿ ಎಂಬವರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. 

 

ಆಸ್ತಿ ಮೇಲಿನ ದ್ವೇಷದಲ್ಲಿ ಸುಪಾರಿ 

ಪ್ರಕಾಶ ಬಾಕಳೆಗೆ ಇಬ್ಬರು ಹೆಂಡತಿಯರು. ಮೊದಲನೇ ಹೆಂಡತಿ ಮಕ್ಕಳು ಮೂರು ಜನ. ಹಿರಿಯ ಮಗ ವಿನಾಯಕ, ಎರಡನೇ ಮಗ ದತ್ತಾತ್ರೇಯ, ಮತ್ತೊಬ್ಬಳು ಮಗಳು. ಆಕೆಯನ್ನು ಮದುವೆ ಮಾಡಿಕೊಟ್ಟಿದ್ದು ಹಿರಿಯ ಮಗ ಜೊತೆಯಲ್ಲಿದ್ದುಕೊಂಡೇ ಮರ್ಡರ್ ಸ್ಕೆಚ್ ಹಾಕಿದ್ದಾನೆ. ಎರಡನೇ ಮಗ ದತ್ತಾತ್ರೇಯ ಬಾಕಳೆ ವಿರುದ್ಧ ನಕಲಿ ಗೋಲ್ಡ್ ಅಡವಿಟ್ಟು ಬ್ಯಾಂಕ್‌ಗೆ ಫ್ರಾಡ್ ಮಾಡಿರುವ ಆರೋಪ ಇದೆ. ಗದಗ, ಮುಂಡರಗಿ, ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಬ್ಯಾಂಕ್‌ಗಳಲ್ಲಿ ನಕಲಿ ಗೋಲ್ಡ್ ಅಡವಿಟ್ಟು ಹಣ ಪಡೆಯಲು ದತ್ತಾತ್ರೇಯ ಪ್ಲಾನ್ ಮಾಡಿದ್ದ. ಅಮಾಯಕರ ಹೆಸರಲ್ಲಿ ಖಾತೆ ತೆಗೆದು, ಬ್ಯಾಂಕ್‌ಗೆ ಮೋಸ ಎಸಗಿದ್ದಾನೆ. ದತ್ತಾತ್ರೇಯ ಸೇರಿ 18 ಜನರ ಟೀಮ್‌ ಗದಗಿನ ಐಡಿಎಫ್‌ಸಿ ಬ್ಯಾಂಕಿನಲ್ಲಿ‌ 4 ಕೆಜಿ ನಕಲಿ ಚಿನ್ನ ಅಡವಿಟ್ಟು ಬ್ಯಾಂಕ್‌ನಿಂದ 45 ಕೋಟಿ ರೂಪಾಯಿ ಹಣ ಪಡೆಯಲು ಮುಂದಾಗಿತ್ತು. ವಿವಿಧೆಡೆ ಬ್ಯಾಂಕ್ ಫ್ರಾಡ್ ಕೇಸ್‌ನಲ್ಲಿ ಭಾಗಿಯಾಗಿ ದತ್ತಾತ್ರೇಯ ಅಲಿಯಾಸ್ ದತ್ತು ಅಲಿಯಾಸ್ ಯಶ್ ಬಾಕಳೆ ತಲೆಮರೆಸಿಕೊಂಡಿದ್ದು, ಹೀಗಾಗಿ ಆತನನ್ನು ತಂದೆ ಪ್ರಕಾಶ್ ಬಾಕಳೆ ದೂರ ಇಟ್ಟಿದ್ದರು. ಆತನ ಮೇಲೆಯೇ ಅನುಮಾನವನ್ನೂ ಪಟ್ಟಿದ್ದರು.‌ 

ಆದರೆ ಹಿರಿಯ ಮಗ ಎಲ್ಲ ಆಸ್ತಿಯೂ ತನಗೇ ಸಿಗಬೇಕು ಎಂದು ಮಲತಾಯಿ ಸುನಂದಾ ಮತ್ತು ತಂದೆಯನ್ನು ಮುಗಿಸಲು ಪ್ಲಾನ್ ಹಾಕಿದ್ದ. ದತ್ತಾತ್ರೇಯ ಮೇಲೆ ಆರೋಪ ಹೊರಿಸಿ ತಾನು ಪಾರಾಗಬಹುದು ಎಂದು ಉಪಾಯ ಹೂಡಿದ್ದ.‌ ಆದರೆ ಸಿಸಿಟಿವಿಯಲ್ಲಿ ಆರೋಪಿಗಳ ಚಹರೆ ಸಿಕ್ಕಿದ್ದು ಮಹಾರಾಷ್ಟ್ರದ ಸುಪಾರಿ ಗ್ಯಾಂಗ್ ಎನ್ನುವ ಸುಳಿವು ಸಿಕ್ಕಿತ್ತು. ‌ಪೊಲೀಸರು ಆರೋಪಿಗಳ ಬೆನ್ನು ಹತ್ತಿದಾಗ ಸುಪಾರಿ ಪ್ರಕರಣ ಬಯಲಾಗಿದೆ.

The ghastly murder of four people in Gadag has been solved with the arrest of eight accused, including the eldest son of the family, as the crime turned out to be a case of supari killing with the son hiring killers to eliminate his father, stepmother and brother for the sake of property. It has been revealed in the police investigation that the son of the family gave 'supari' to kill his father and stepmother due to a dispute over the sale of a property. But the relatives and his brother were murdered. On April 19, in the wee hours, four persons were killed in Dasaragalli of Gadag city, police said.