ಕಾರು ಮಾರಾಟ ಪ್ರಕರಣ ; ಡಿಜಿಪಿಗೆ ವರದಿ, ಮೂವರು ಅಧಿಕಾರಿಗಳ ವಿರುದ್ಧ ಕ್ರಮ ಸಾಧ್ಯತೆ

09-02-21 09:25 pm       Mangaluru Correspondent   ಕರಾವಳಿ

ಮಂಗಳೂರಿನ ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದ ಐಷಾರಾಮಿ ಕಾರನ್ನು ಮೂವರು ಅಧಿಕಾರಿಗಳು ಸೇರಿ ಮಾರಾಟ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಡಿಸಿಪಿ ವಿನಯ ಗಾಂವ್ಕರ್ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ವರದಿ ನೀಡಿದ್ದಾರೆ.

ಮಂಗಳೂರು, ಫೆ.9: ಮಂಗಳೂರಿನ ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದ ಐಷಾರಾಮಿ ಕಾರನ್ನು ಮೂವರು ಅಧಿಕಾರಿಗಳು ಸೇರಿ ಮಾರಾಟ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಡಿಸಿಪಿ ವಿನಯ ಗಾಂವ್ಕರ್ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ವರದಿ ನೀಡಿದ್ದಾರೆ.

ಮೇಲ್ನೋಟಕ್ಕೆ ಕಾರು ಮಾರಾಟ ಮಾಡಿದ್ದು ಸತ್ಯ ಎನ್ನುವುದು ದೃಢಪಟ್ಟಿದ್ದು ಈ ಬಗ್ಗೆ ಕಾರು ಸದ್ಯಕ್ಕೆ ಎಲ್ಲಿದೆ, ಯಾರ ಕೈಯಲ್ಲಿದೆ ಎನ್ನುವುದನ್ನೂ ಪತ್ತೆ ಮಾಡಿದ್ದಾರೆ. ಕಾರು ಮಾರಾಟ ಸಂಪೂರ್ಣವಾಗಿ ಕಾನೂನು ರೀತಿ ಆಗಿದೆ ಎನ್ನಲಾಗುತ್ತಿದ್ದು, ಮಾರಾಟ ಆಗಿರುವ ಜಾಗ್ವಾರ್ ಕಾರು ಸದ್ಯಕ್ಕೆ ಹೈದರಾಬಾದ್ ನಲ್ಲಿ ಇರುವುದನ್ನು ಪತ್ತೆ ಮಾಡಿದ್ದಾರೆ.

ಕಾರು ಮಾರಾಟ ಪ್ರಕರಣದಲ್ಲಿ ಅಂದು ಪ್ರಮುಖ ಹುದ್ದೆಗಳಲ್ಲಿದ್ದ ಮೂವರು ಅಧಿಕಾರಿಗಳ ಪಾತ್ರದ ಬಗ್ಗೆ ವರದಿಯಲ್ಲಿ ಉಲ್ಲೇಖ ಆಗಿದೆ ಎನ್ನಲಾಗುತ್ತಿದೆ. ವಿನಯ ಗಾಂವ್ಕರ್, ಯಾವುದೇ ಅಪರಾಧಗಳಲ್ಲಿ ವರದಿ ಬರೆಯುವುದರಲ್ಲಿ ಎತ್ತಿದ ಕೈ ಆಗಿರುವುದರಿಂದ ಈ ಬಗ್ಗೆ ಖಚಿತವಾಗಿ ಬರೆದಿದ್ದರೆ ತಪ್ಪಿತಸ್ಥರ ವಿರುದ್ಧ ಕ್ರಮ ಖಚಿತ. ಆದರೆ, ಈ ಬಗ್ಗೆ ದೂರು ದಾಖಲಾಗುವುದು ಸೇರಿದಂತೆ ಯಾವುದೇ ಕ್ರಮ ಆಗಬೇಕಿದ್ದರೂ, ಮೇಲಿನಿಂದ ಸೂಚನೆ ಬರಬೇಕು. ಯಾಕಂದ್ರೆ, ಸ್ವತಃ ಡಿಜಿಪಿ ವರದಿ ಕೇಳಿರುವುದರಿಂದ ಅವರ ಸೂಚನೆಯಿಲ್ಲದೆ ಕ್ರಮ ಜರುಗಿಸುವಂತಿಲ್ಲ.

ಮನಿ ಡಬ್ಲಿಂಗ್ ಪ್ರಕರಣದಲ್ಲಿ ಕೇರಳ ಮೂಲದ ಇಬ್ಬರನ್ನು ಕಳೆದ ಅಕ್ಟೋಬರ್ ನಲ್ಲಿ ಸಿಸಿಬಿ ಪೊಲೀಸರು ಬಂಧಿಸಿದ್ದರು. ಆರೋಪಿಗಳನ್ನು ಪಾರು ಮಾಡಲು ಅವರಿಂದ ಹಣ ಪಡೆದಿದ್ದ ಪೊಲೀಸ್ ಅಧಿಕಾರಿಗಳು, ಬಳಿಕ ಮತ್ತಷ್ಟು ಹಣಕ್ಕಾಗಿ ಪೀಡಿಸಿ ಐಷಾರಾಮಿ ಕಾರುಗಳನ್ನೇ ಮಾರಾಟ ಮಾಡಿದ್ದರು. ಈ ವಿಷಯ ಮಾಧ್ಯಮಗಳಲ್ಲಿ ಬಂದ ಬಳಿಕ ಬಿಎಂಡಬ್ಲ್ಯು ಮತ್ತು ಪೋಷ್ ಕಾರುಗಳು ಕಮಿಷನರ್ ಕಚೇರಿ ಬಳಿ ಹಿಂತಿರುಗಿ ಬಂದಿದ್ದರೆ, ಜಾಗ್ವಾರ್ ಕಾರು ಮಾತ್ರ ನಾಪತ್ತೆಯಾಗಿದೆ. ರಾಜ್ಯ ಮಟ್ಟದಲ್ಲಿ ಮಂಗಳೂರು ಪೊಲೀಸರ ಮಾನ ಹರಾಜು ಆಗಿರುವ ಹಿನ್ನೆಲೆಯಲ್ಲಿ ಡಿಜಿಪಿ ಮಂಗಳೂರು ಕಮಿಷನರ್ ಬಳಿಯಿಂದ ವರದಿ ಕೇಳಿದ್ದರು. ಕಮಿಷನರ್ ಶಶಿಕುಮಾರ್, ತನಿಖೆ ನಡೆಸಿ ವರದಿ ನೀಡಲು ಅಪರಾಧ ವಿಭಾಗದ ಡಿಸಿಪಿ ವಿನಯ ಗಾಂವ್ಕರ್ ಗೆ ಹೊಣೆ ನೀಡಿದ್ದರು. 

DCP crime Vinay Gaonkar, Mangalore has sent a detailed probe report of the luxury car missing from CCB police custody to DGP, Karnataka. Three police officers to be in big-time trouble.