Mangalore Suicide: ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಗೊಂದಲದಲ್ಲಿ ತಂಗಿ ಆತ್ಮಹತ್ಯೆ ; ದುಬೈನಲ್ಲಿ ಇಂಜಿನಿಯರ್ ಆಗಿದ್ದ ಅಣ್ಣನೂ ಮಂಗಳೂರಿಗೆ ಬಂದು ಸಾವಿಗೆ ಶರಣು ! ಇಬ್ಬರು ಹರೆಯದ ಮಕ್ಕಳ ದಾರುಣ ಅಂತ್ಯ

10-08-26 11:00 pm       HK News Desk   ಕರಾವಳಿ

ನೀಟ್ ಪ್ರಶ್ನೆ ಪತ್ರಿಕೆ ಲೀಕ್ ಆಗಿದ್ದರಿಂದ ನೊಂದು ಮರು ಪರೀಕ್ಷೆಗೆ ಸಿದ್ಧತೆಯಲ್ಲಿದ್ದಾಗಲೇ ಕೋಚಿಂಗ್ ಸೆಂಟರ್‌ ಹಾಸ್ಟೆಲ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ ತಂಗಿಯ ಸಾವಿನಿಂದ ನೊಂದಿದ್ದ ಅಣ್ಣ ಎರಡೇ ತಿಂಗಳಲ್ಲಿ ದುಬೈನಲ್ಲಿದ್ದ ಆಟೊಮೊಬೈಲ್ ಇಂಜನಿಯರ್ ಕೆಲಸವನ್ನೇ ಬಿಟ್ಟು ಬಂದು ಮಂಗಳೂರಿನಲ್ಲಿ ಆತ್ಮಹತ್ಯೆಗೆ ಶರಣಾದ ಹೃದಯ ವಿದ್ರಾವಕ ಘಟನೆ ನಡೆದಿದೆ.

ಮಂಗಳೂರು, ಆ.10: ನೀಟ್ ಪ್ರಶ್ನೆ ಪತ್ರಿಕೆ ಲೀಕ್ ಆಗಿದ್ದರಿಂದ ನೊಂದು ಮರು ಪರೀಕ್ಷೆಗೆ ಸಿದ್ಧತೆಯಲ್ಲಿದ್ದಾಗಲೇ ಕೋಚಿಂಗ್ ಸೆಂಟರ್‌ ಹಾಸ್ಟೆಲ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ ತಂಗಿಯ ಸಾವಿನಿಂದ ನೊಂದಿದ್ದ ಅಣ್ಣ ಎರಡೇ ತಿಂಗಳಲ್ಲಿ ದುಬೈನಲ್ಲಿದ್ದ ಆಟೊಮೊಬೈಲ್ ಇಂಜನಿಯರ್ ಕೆಲಸವನ್ನೇ ಬಿಟ್ಟು ಬಂದು ಮಂಗಳೂರಿನಲ್ಲಿ ಆತ್ಮಹತ್ಯೆಗೆ ಶರಣಾದ ಹೃದಯ ವಿದ್ರಾವಕ ಘಟನೆ ನಡೆದಿದೆ. 

ಕಾಸರಗೋಡು ಜಿಲ್ಲೆಯ ಬೇಕಲ ಬಳಿಯ ಪಳ್ಳಿಕ್ಕರ ನಿವಾಸಿ ಮಹೇಶ್ ಎಂಬವರ ಪುತ್ರ ಅರ್ಜುನ್ (24) ಮೃತ ದುರ್ದೈವಿ. ದುಬೈನಲ್ಲಿ ಆಟೊಮೊಬೈಲ್ ಇಂಜಿನಿಯರ್ ಆಗಿದ್ದ ಅರ್ಜುನ್, ಆ.9ರ ಬೆಳಗ್ಗೆ ವಿಮಾನದಲ್ಲಿ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿದ್ದ. ಈ ವಿಷಯ ಮನೆಯವರಿಗೂ ತಿಳಿಸಿರಲಿಲ್ಲ. ಸ್ನೇಹಿತರಿಗೆ ಮೆಸೇಜ್ ಮಾಡಿ ಮಂಗಳೂರಿನಲ್ಲಿ ಲಾಡ್ಜ್ ಮಾಡಿ ಉಳಿದುಕೊಂಡಿದ್ದೇನೆಂದು ತಿಳಿಸಿದ್ದ. ಮಧ್ಯಾಹ್ನ ತಾಯಿಗೆ ಫೋನ್ ಮಾಡಿ ಮಾತನಾಡಿ ಬಳಿಕ ಸ್ವಿಚ್ ಆಫ್ ಮಾಡಿಕೊಂಡಿದ್ದ. 

ಸ್ನೇಹಿತರು ಅರ್ಜುನ್ ಫೋನ್ ಸ್ವಿಚ್ ಆಫ್ ಆಗಿದ್ದುದನ್ನು ತಿಳಿದು ಆತಂಕದಿಂದ ಮನೆಯವರಿಗೆ ತಿಳಿಸಿದ್ದರು. ಮನೆಯವರು ಹುಡುಕಾಟಕ್ಕಾಗಿ ಪೊಲೀಸರ ನೆರವು ಕೇಳಿದ್ದರು. ಫೋನ್ ಕಾವೂರು ಪರಿಸರದಲ್ಲಿ ಲೊಕೇಶನ್ ತೋರಿಸಿದ್ದು ಇಂದು ಬೆಳಗ್ಗೆ ಲಾಡ್ಜ್ ಮೂರನೇ ಮಹಡಿಯ ಕೊಠಡಿಗೆ ತೆರಳಿದಾಗ ನೇಣು ಬಿಗಿದುಕೊಂಡಿದ್ದು ಪತ್ತೆಯಾಗಿದೆ. ಅಲ್ಲಿ ಸಣ್ಣ ಪತ್ರ ಸಿಕ್ಕಿದ್ದು ಐ ಲವ್ ಅಮ್ಮಾ.. ಮಿಸ್ ಯೂ.. ಸ್ನೇಹಿತರಿಗೆ ತಿಳಿಸು ಎಂದಷ್ಟೇ ಬರೆದಿತ್ತು. ಇದ್ದೊಬ್ಬ ಮಗನೂ ಸಾವಿಗೆ ಶರಣಾಗಿದ್ದರಿಂದ ಹೆತ್ತವರು ತೀವ್ರ ಆಘಾತಕ್ಕೀಡಾಗಿದ್ದಾರೆ.‌

ಕಳೆದ ಜೂನ್ ತಿಂಗಳಿನಲ್ಲಿ ಕಣ್ಣೂರಿನ ತರಬೇತಿ ಕೇಂದ್ರ ಒಂದರ ಹಾಸ್ಟೆಲ್‌ನಲ್ಲಿ ಅರ್ಜುನ್ ತಂಗಿ ಐಜಾ (19) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಳು. ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಯಿಂದ ನೊಂದು ಬಳಿಕ ಮರು ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದಾಗಲೇ ಮಾನಸಿಕ ಒತ್ತಡದಿಂದ ಸಾವಿಗೆ ಶರಣಾಗಿದ್ದರು ಎನ್ನಲಾಗಿತ್ತು. ತಂಗಿಯ ಮರಣದ ಸುದ್ದಿ ತಿಳಿದು ಗಲ್ಫ್‌ನಿಂದ ಮನೆಗೆ ಬಂದಿದ್ದ ಅರ್ಜುನ್, ಬಳಿಕ ಮತ್ತೆ ಉದ್ಯೋಗಕ್ಕೆ ತೆರಳಿದ್ದರು. ಅದಾಗಿ ಎರಡು ತಿಂಗಳು ಆಗುವಷ್ಟರಲ್ಲೇ ಭಾನುವಾರ ಅಬುಧಾಬಿ ಮೂಲಕ ವಿಮಾನದಲ್ಲಿ ಮಂಗಳೂರಿಗೆ ಬಂದಿದ್ದ ಅರ್ಜುನ್, ಮನೆಗೆ ವಾಪಸಾಗುತ್ತಿರುವುದನ್ನು ಸ್ನೇಹಿತರಿಗೆ ತಿಳಿಸಿದ್ದರೂ, ಮನೆಯವರಿಗೆ ತಿಳಿಸಿರಲಿಲ್ಲ ಎನ್ನಲಾಗಿದೆ. ‌

ಇಬ್ಬರು ಮಕ್ಕಳು ಕೂಡ ಎರಡು ತಿಂಗಳ ಅಂತರದಲ್ಲಿ ಸಾವಿಗೆ ಶರಣಾಗಿರುವುದು ಕುಟುಂಬಸ್ಥರನ್ನು ಕಂಗೆಡಿಸಿದೆ. ಅರ್ಜುನ್ ಸಾವಿನ ಬಗ್ಗೆ ಬಜ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.