ಎಂಬಿಎ ಲ್ಯಾಬ್ ಶುಲ್ಕ ಅಕ್ರಮ; ಮಂಗಳೂರು ವಿವಿಯ ಆಡಳಿತ ಸೌಧ ಎದುರಲ್ಲಿ ಎಬಿವಿಪಿ ವಿದ್ಯಾರ್ಥಿಗಳ ಪ್ರತಿಭಟನೆ

12-06-26 08:44 pm       HK News Staffer   ಕರಾವಳಿ

ಮಂಗಳೂರು ವಿಶ್ವವಿದ್ಯಾಲಯಯದಲ್ಲಿ ವಿದ್ಯಾರ್ಥಿಗಳ ಮೂಲಭೂತ ಸಮಸ್ಯೆಗಳನ್ನ ಬಗೆಹರಿಸಲು ಆಗ್ರಹಿಸಿ ಮತ್ತು ವಿವಿಧ ಬೇಡಿಕೆಗಳನ್ನು ಮುಂದಿಟ್ಟು ಎಬಿವಿಪಿ ವತಿಯಿಂದ ವಿದ್ಯಾರ್ಥಿಗಳು ಕೋಣಾಜೆ ಆಡಳಿತ ಸೌಧ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು. ‌ನೂರಾರು ವಿದ್ಯಾರ್ಥಿಗಳು ಸೇರಿ ವಿವಿಯ ಅಧಿಕಾರಿಗಳ ವಿರುದ್ಧ ಧಿಕ್ಕಾರ ಘೋಷಣೆ ಕೂಗಿದರು. ಬಳಿಕ ವಿದ್ಯಾರ್ಥಿಗಳನ್ನು ಪೊಲೀಸರು ವಶಕ್ಕೆ ಪಡೆದು ಧರಣಿ ನಿರತರನ್ನು ಚದುರಿಸಿದರು.

ಮಂಗಳೂರು, ಜೂನ್ 12: ಮಂಗಳೂರು ವಿಶ್ವವಿದ್ಯಾಲಯಯದಲ್ಲಿ ವಿದ್ಯಾರ್ಥಿಗಳ ಮೂಲಭೂತ ಸಮಸ್ಯೆಗಳನ್ನ ಬಗೆಹರಿಸಲು ಆಗ್ರಹಿಸಿ ಮತ್ತು ವಿವಿಧ ಬೇಡಿಕೆಗಳನ್ನು ಮುಂದಿಟ್ಟು ಎಬಿವಿಪಿ ವತಿಯಿಂದ ವಿದ್ಯಾರ್ಥಿಗಳು ಕೋಣಾಜೆ ಆಡಳಿತ ಸೌಧ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು. ‌ನೂರಾರು ವಿದ್ಯಾರ್ಥಿಗಳು ಸೇರಿ ವಿವಿಯ ಅಧಿಕಾರಿಗಳ ವಿರುದ್ಧ ಧಿಕ್ಕಾರ ಘೋಷಣೆ ಕೂಗಿದರು. ಬಳಿಕ ವಿದ್ಯಾರ್ಥಿಗಳನ್ನು ಪೊಲೀಸರು ವಶಕ್ಕೆ ಪಡೆದು ಧರಣಿ ನಿರತರನ್ನು ಚದುರಿಸಿದರು. 

ಇದೇ ವೇಳೆ, ಈ ಕೆಳಗಿನ ಬೇಡಿಕೆಗಳನ್ನು ಈಡೇರಿಸುವಂತೆ ವಿದ್ಯಾರ್ಥಿಗಳು ಆಗ್ರಹಿಸಿದರು. 

MBA ಲ್ಯಾಬ್ ಶುಲ್ಕ ಅಕ್ರಮ 

ಕ್ರಿಯಾಶೀಲ ಲ್ಯಾಬ್ ಸೌಲಭ್ಯ ಇಲ್ಲದಿದ್ದರೂ MBA ವಿದ್ಯಾರ್ಥಿಗಳಿಂದ ₹12,000 ಲ್ಯಾಬ್ ಶುಲ್ಕ ವಸೂಲಿ ಮಾಡಲಾಗುತ್ತಿದೆ. ಈ ಶುಲ್ಕವನ್ನು ತಕ್ಷಣ ರದ್ದುಗೊಳಿಸಿ ಈಗಾಗಲೇ ವಸೂಲಿ ಮಾಡಿದ ಹಣವನ್ನು ವಾಪಸ್ ನೀಡಬೇಕು. ಬೋಟನಿ, ಅರ್ಥಶಾಸ್ತ್ರ, ಪ್ರಾಣಿಶಾಸ್ತ್ರ ವಿಭಾಗ ಮತ್ತು ಸಭಾಂಗಣದಲ್ಲಿ ವಾಟರ್ ಪ್ಯೂರಿಫೈಯರ್ ಇಲ್ಲ. ಸೈನ್ಸ್ ಬ್ಲಾಕ್ 2ನೇ ಮಹಡಿಯ ಸುಮಾರು 240 ವಿದ್ಯಾರ್ಥಿಗಳಿಗೆ ಕೇವಲ ಒಂದೇ ಫಿಲ್ಟರ್ ಅವಲಂಬಿತವಾಗಿದೆ. ಪ್ರತಿ ವಿಭಾಗಕ್ಕೂ ಸಾಕಷ್ಟು ಸಂಖ್ಯೆಯಲ್ಲಿ RO ಫಿಲ್ಟರ್ ಅಳವಡಿಸಬೇಕು. 

ಕಂಪ್ಯೂಟರ್ ಮತ್ತು ಲ್ಯಾಬ್ ಮೂಲಸೌಕರ್ಯ 

ಲೈಬ್ರರಿ ಸೈನ್ಸ್, ಕಂಪ್ಯೂಟರ್ ಸೈನ್ಸ್, ಕಂಪ್ಯೂಟರ್ ಅಪ್ಲಿಕೇಶನ್ ವಿಭಾಗಗಳಲ್ಲಿ ಕಾರ್ಯ ನಿರ್ವಹಿಸುವ ಕಂಪ್ಯೂಟರ್‌ಗಳ ಕೊರತೆಯಿದೆ. PM-USHA ಯೋಜನೆಯಡಿ ಮಂಜೂರಾದ 64 ಕಂಪ್ಯೂಟರ್‌ಗಳನ್ನು ತಕ್ಷಣ ಪೂರೈಸಬೇಕು. ಲ್ಯಾಬ್ ಕುರ್ಚಿ, AC ಸೇರಿದಂತೆ ಹಾನಿಗೊಂಡ ಪೀಠೋಪಕರಣಗಳನ್ನು ದುರಸ್ತಿ/ಬದಲಿಸಬೇಕು. 

ರಸಾಯನಶಾಸ್ತ್ರ ಮತ್ತು ಜೀವ ವಿಜ್ಞಾನ ವಿಭಾಗಗಳ ಲ್ಯಾಬ್ ಉಪಕರಣಗಳು ನಿರ್ವಹಣೆಯ ಕೊರತೆಯಿಂದ ಹಾನಿಗೊಂಡಿವೆ. ಇವುಗಳ ನಿಯಮಿತ ನಿರ್ವಹಣೆ ಮತ್ತು ರಿಪೇರಿಗೆ ವ್ಯವಸ್ಥೆ ಮಾಡಬೇಕು. ಕಳೆದ 4 ವರ್ಷಗಳಿಂದ ಕ್ರೀಡಾ ಸೌಕರ್ಯ ನಿರ್ಲಕ್ಷ್ಯಕ್ಕೊಳಗಾಗಿದೆ. ಬಜೆಟ್‌ನಲ್ಲಿ ಮೀಸಲಿಟ್ಟ ಹಣವನ್ನು ಸರಿಯಾಗಿ ಬಳಸಿ, ಹಾನಿಗೊಂಡ ಒಳಾಂಗಣ ಮರದ ಕೋರ್ಟ್ ಸೇರಿದಂತೆ ಎಲ್ಲಾ ಕ್ರೀಡಾ ಸೌಕರ್ಯಗಳನ್ನು ಪುನಶ್ಚೇತನಗೊಳಿಸಬೇಕು.

ಶಾಶ್ವತ ಬೋಧಕರ ನೇಮಕಾತಿ ಆಗ್ರಹ 

2013ರಿಂದ ಶಾಶ್ವತ ಬೋಧಕರ ನೇಮಕಾತಿಯೇ ಆಗಿಲ್ಲ. ಇದರಿಂದ ಶೈಕ್ಷಣಿಕ ಗುಣಮಟ್ಟ ಕುಸಿತವಾಗಿದ್ದು ವಿದ್ಯಾರ್ಥಿಗಳಿಗೆ ಉತ್ತಮ ಮಾರ್ಗದರ್ಶನ ಸಿಗದಂತಾಗಿದೆ. ಹೀಗಾಗಿ ಖಾಲಿ ಇರುವ ಎಲ್ಲಾ ಹುದ್ದೆಗಳಿಗೆ ಕೂಡಲೇ ಶಾಶ್ವತ ಬೋಧಕರನ್ನು ನೇಮಿಸಬೇಕು.

ಕನ್ವೊಕೇಶನ್ ಶುಲ್ಕ ಅತಿಯಾಗಿದ್ದು ಇದರ ನೆಪದಲ್ಲಿ ಟಾಪರ್‌ಗಳಿಗೆ ಸುಲಿಗೆ ಮಾಡಲಾಗುತ್ತಿದೆ. ಸೈಬರ್ ಸೆಕ್ಯೂರಿಟಿ, ಮರೈನ್ ಜಿಯಾಲಜಿ, ಇಂಡಸ್ಟ್ರಿಯಲ್ ಕೆಮಿಸ್ಟ್ರಿ, ಕಂಪ್ಯೂಟರ್ ಸೈನ್ಸ್, ಕಂಪ್ಯೂಟರ್ ಅಪ್ಲಿಕೇಶನ್, ಅನಾಲಿಟಿಕಲ್ ಕೆಮಿಸ್ಟ್ರಿ ಇಂಟರ್ನ್‌ಶಿಪ್ ಬ್ಯಾಚ್ ವಿದ್ಯಾರ್ಥಿಗಳಿಂದ ಪರೀಕ್ಷೆಯೇ ಇಲ್ಲದಿದ್ದರೂ ₹3,650 ಪರೀಕ್ಷಾ ಶುಲ್ಕ ವಸೂಲಿ ಮಾಡಲಾಗುತ್ತಿದೆ. ಇದನ್ನು ತಕ್ಷಣ ನಿಲ್ಲಿಸಬೇಕು 

ಪ್ಲೇಸ್‌ಮೆಂಟ್ ಮತ್ತು ಪ್ರವೇಶ ತಾರತಮ್ಯ 

ಕ್ಯಾಂಪಸ್ ನೇಮಕಾತಿ ಸಂಪೂರ್ಣ ಸ್ಥಗಿತಗೊಂಡಿದೆ. ಸಂಶೋಧನಾ ವಿದ್ಯಾರ್ಥಿ ಮತ್ತು ಬೋಧಕರಿಗೆ ಮಧ್ಯರಾತ್ರಿಯ ವರೆಗೆ ಪ್ರವೇಶವಿದ್ದು, ಸಾಮಾನ್ಯ ವಿದ್ಯಾರ್ಥಿಗಳಿಗೆ ನಿರ್ಬಂಧ ಹೇರಲಾಗಿದೆ. ಈ ತಾರತಮ್ಯವನ್ನು ಕೂಡಲೇ ನಿಲ್ಲಿಸಬೇಕು. ಮಾರ್ಕ್ಸ್ ಕಾರ್ಡ್ ವಿತರಣೆ ವಿಳಂಬ, SC/ST ವಿದ್ಯಾರ್ಥಿಗಳ EBL ವಿದ್ಯಾರ್ಥಿವೇತನ ಸಮಸ್ಯೆ, ರಾಸಾಯನಿಕ ಖರೀದಿ ಟೆಂಡರ್ ವಿಳಂಬ ಇತ್ಯಾದಿ ಸಮಸ್ಯೆಗಳನ್ನು ತಕ್ಷಣ ಪರಿಹರಿಸಬೇಕು.