ತಾಲೂಕು ಆಸ್ಪತ್ರೆ ಖಾಸಗಿ ವಶಕ್ಕೆ ; ಆರೋಗ್ಯ ಸಚಿವರ ಉಸ್ತುವಾರಿ ಜಿಲ್ಲೆಯಲ್ಲೇ ಪ್ರಯೋಗ, ಉಸ್ತುವಾರಿ ಕಚೇರಿ ಚಲೋ ಕೈಗೊಂಡ ಡಿವೈಎಫ್ಐ, ಮುತ್ತಿಗೆ ಯತ್ನಿಸಿದ ಕಾರ್ಯಕರ್ತರ ಬಂಧನ

28-04-26 09:18 pm       Mangalore Correspondent   ಕರಾವಳಿ

ಸರಕಾರಿ ಆಸ್ಪತ್ರೆಗಳನ್ನು ಖಾಸಗಿ ಆಸ್ಪತ್ರೆಗಳ ವಶಕ್ಕೊಪ್ಪಿಸುವ ಒಪ್ಪಂದ ರದ್ದುಗೊಳಿಸಲು ಒತ್ತಾಯಿಸಿ ಮತ್ತು ಜಿಲ್ಲೆಗೊಂದು ಸರಕಾರಿ ಮೆಡಿಕಲ್ ಕಾಲೇಜು, ಕಿದ್ವಾಯಿ ಸ್ಮಾರಕ ಕ್ಯಾನ್ಸರ್,

ಮಂಗಳೂರು, ಎಪ್ರಿಲ್ 28: ಸರಕಾರಿ ಆಸ್ಪತ್ರೆಗಳನ್ನು ಖಾಸಗಿ ಆಸ್ಪತ್ರೆಗಳ ವಶಕ್ಕೊಪ್ಪಿಸುವ ಒಪ್ಪಂದ ರದ್ದುಗೊಳಿಸಲು ಒತ್ತಾಯಿಸಿ ಮತ್ತು ಜಿಲ್ಲೆಗೊಂದು ಸರಕಾರಿ ಮೆಡಿಕಲ್ ಕಾಲೇಜು, ಕಿದ್ವಾಯಿ ಸ್ಮಾರಕ ಕ್ಯಾನ್ಸರ್, ಜಯದೇವ ಹೃದ್ರೋಗ ಆಸ್ಪತ್ರೆ ಸ್ಥಾಪನೆ ಮಾಡಬೇಕೆಂಬ ಬೇಡಿಕೆ ಮುಂದಿಟ್ಟು ಡಿವೈಎಫ್ಐ ದ.ಕ. ಜಿಲ್ಲಾ ಸಮಿತಿ ನೇತೃತ್ವದಲ್ಲಿ ನೂರಾರು ಕಾರ್ಯಕರ್ತರು ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿ ಚಲೋ ಪಾದಯಾತ್ರೆ ನಡೆಸಿದ್ದು ಪಡೀಲಿನಲ್ಲಿ ಪೊಲೀಸರು ಅಡ್ಡಗಟ್ಟಿ ಪ್ರತಿಭಟನಕಾರರನ್ನು ವಶಕ್ಕೆ ಪಡೆದಿದ್ದಾರೆ. 

ನಗರದ ಸರಕಾರಿ ವೆನ್ಲಾಕ್ ಆಸ್ಪತ್ರೆ ಮುಂಭಾಗದಿಂದ ಪಾದಯಾತ್ರೆ ಆರಂಭಿಸಿದ್ದು ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಡಿವೈಎಫ್ಐ ದ.ಕ ಜಿಲ್ಲಾಧ್ಯಕ್ಷ ಬಿ.ಕೆ ಇಮ್ತಿಯಾಜ್, ಆರೋಗ್ಯ ಇಲಾಖೆ ಸರಕಾರಿ ಆಸ್ಪತ್ರೆಗಳನ್ನು ಬಲಪಡಿಸುವ ಬದಲು ಖಾಸಗಿ ಆಸ್ಪತ್ರೆಗಳ ಲಾಬಿಗೆ ಶರಣಾಗಿದೆ. ಆರೋಗ್ಯ ಸಚಿವರಾಗಿ ತನ್ನ ಉಸ್ತುವಾರಿ ಹೊಂದಿರುವ ಜಿಲ್ಲೆಯಲ್ಲೇ ತಾಲೂಕು ಆಸ್ಪತ್ರೆಗಳನ್ನು ಖಾಸಗಿಯವರ ವಶಕ್ಕೆ ನೀಡಿದ್ದಾರೆ. ಇದಕ್ಕೆ ವಿರೋಧ ಪಕ್ಷ ಬಿಜೆಪಿ ಶಾಸಕರು ಕೂಡ ಮೌನ ವಹಿಸಿದ್ದು ಖಾಸಗಿ ಆಸ್ಪತ್ರೆಗಳ ಲಾಬಿ ಪರವಾಗಿ ನಿಂತಿದೆ. ಆದರೆ ಡಿವೈಎಫ್ಐ ಈ ಪ್ರಸ್ತಾಪವನ್ನು ಸ್ಪಷ್ಟವಾಗಿ ವಿರೋಧಿಸಲಿದ್ದು ಸರ್ಕಾರಿ ಆಸ್ಪತ್ರೆಗಳನ್ನು ಖಾಸಗಿಯವರ ಕೈಗೆ ಕೊಟ್ಟರೆ ಅದರಿಂದ ಜನಸಾಮಾನ್ಯರಿಗೆ ಉಚಿತ ಚಿಕಿತ್ಸೆ ಲಭಿಸುವ ಭರವಸೆ ಇಲ್ಲ‌‌. ಹಾಗಾಗಿ ಈ ಒಪ್ಪಂದ ರದ್ದು ಆಗೋವರೆಗೂ ನಮ್ಮ ಹೋರಾಟ ಮುಂದುವರಿಯಲಿದೆ ಎಂದರು. ​​​​​​

ಡಿವೈಎಫ್ಐ ದ.ಕ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಮಾತನಾಡಿ, ಜಿಲ್ಲೆಯಲ್ಲಿ ಸರಕಾರಿ ಆಸ್ಪತ್ರೆಗಳಲ್ಲೇ ಹೃದಯ ಮತ್ತು ಕ್ಯಾನ್ಸರ್ ಕಾಯಿಲೆಗಳಿಗೆ ಒಳಗಾಗಿ ಚಿಕಿತ್ಸೆಗೆ ಬಂದವರ ಸಂಖ್ಯೆ ಒಂದೇ ವರುಷದಲ್ಲಿ ನೂರು ಪಟ್ಟು ಹೆಚ್ಚಳವಾಗಿದೆ. ಹೀಗಿದ್ದರೂ ಇಲ್ಲಿ ಕಿದ್ವಾಯಿ ಜಯದೇವ ಆಸ್ಪತ್ರೆಗಳ ಬೇಡಿಕೆ ಇದ್ದರೂ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಜಿಲ್ಲೆಯ ಜನರ ಆರೋಗ್ಯದ ಹಕ್ಕನ್ನು ಕಡೆಗಣಿಸಿದ್ದಾರೆ. ಸರಕಾರಿ ಆಸ್ಪತ್ರೆ ಬಲಪಡಿಸಲು ನಡೆಸುವ ಹೋರಾಟಗಳಿಗೆ ಅನುಮತಿ ನಿರಾಕರಿಸುವ ಮೂಲಕ ಹತ್ತಿಕ್ಕಲು ಯತ್ನಿಸಿದ್ದಾರೆ. ಜನರ ಆರೋಗ್ಯ ಹಕ್ಕನ್ನು ಖಾತ್ರಿಪಡಿಸಲು ಆರೋಗ್ಯ ಮಂತ್ರಿ ಗುಂಡುರಾವ್ ಸಾದ್ಯವಿಲ್ಲ ಎಂದಾದರೆ ರಾಜೀನಾಮೆ ಕೊಟ್ಟು ತೊಲಗಿ ಬಿಡಲಿ ಎಂದು ಹೇಳಿದರು. 

ಪಾದಯಾತ್ರೆಗೆ ಹಿರಿಯ ವಿಚಾರವಾದಿ ಪ್ರೊ. ನರೇಂದ್ರ ನಾಯಕ್ ಚಾಲನೆ ನೀಡಿ ಮಾತನಾಡಿದರು. ಸರಕಾರಿ ವೆನ್ಲಾಕ್ ಆಸ್ಪತ್ರೆಯಿಂದ ಚಾಲನೆಗೊಂಡ ಯುವಜನರ ನಡಿಗೆ ಖಾಸಗಿ ಆಸ್ಪತ್ರೆಗಳ ಕಾರಿಡಾರ್ ಅಥೆನಾ, ಇಂದಿರಾ, ಯುನಿಟಿ, ಹೈಲ್ಯಾಂಡ್ ಆಸ್ಪತ್ರೆಗಳ ಮುಂಭಾಗದಿಂದ ಸಾಗಿತು. ಉಸ್ತುವಾರಿ ಮಂತ್ರಿಗಳ ಕಚೇರಿ ತಲುಪುವ ಮೊದಲೇ ಪಡೀಲಿನಲ್ಲಿ ಪೊಲೀಸರು ಯುವಜನರ ನಡಿಗೆಯನ್ನು ತಡೆದಿದ್ದು ಪೊಲೀಸರ ಮತ್ತು ಹೋರಾಟಗಾರರ ನಡುವೆ ತಿಕ್ಕಾಟ ನಡೆದು ನೂರಾರು ಕಾರ್ಯಕರ್ತರನ್ನು ಬಂಧಿಸಿದರು. ಈ ವೇಳೆ ಪ್ರತಿಭಟನಾಕಾರರು ಉಸ್ತುವಾರಿ ಮಂತ್ರಿ ದಿನೇಶ್ ಗುಂಡುರಾವ್, ಮುಖ್ಯಮಂತ್ರಿ ಸಿದ್ದರಾಮಯ್ಯರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. 

ಪ್ರತಿಭಟನೆಯಲ್ಲಿ ಡಿವೈಎಫ್ಐ ಜಿಲ್ಲಾ ಮುಖಂಡರಾದ ಮನೋಜ್ ವಾಮಂಜೂರು, ನಿತಿನ್ ಕುತ್ತಾರ್, ರಿಜ್ವಾನ್ ಹರೇಕಳ, ನವೀನ್ ಕೊಂಚಾಡಿ, ಜಗದೀಶ್ ಬಜಾಲ್, ಅಶ್ರಫ್ ಹರೇಕಳ, ರಜಾಕ್ ಮುಡಿಪು, ಹನೀಫ್ ಬೆಂಗರೆ, ಕಾರ್ಮಿಕ ಮುಖಂಡರಾದ ಸುನೀಲ್ ಕುಮಾರ್ ಬಜಾಲ್, ಬಿ.ಎಮ್ ಭಟ್, ಶಶಿಧರ್ ಶಕ್ತಿನಗರ, ಮಹಿಳಾ ಸಂಘಟನೆಯ ಮುಖಂಡರಾದ ಕಿರಣ ಪ್ರಭ, ಪ್ರಮಿಳಾ ಶಕ್ತಿನಗರ, ಅಸುಂತ ಡಿಸೋಜ, ರೋಹಿಣಿ ಜಲ್ಲಿಗುಡ್ಡೆ, ದಲಿತ ಹಕ್ಕುಗಳ ಸಮಿತಿಯ ಕೃಷ್ಣ ತಣ್ಣೀರುಬಾವಿ, ಕೃಷ್ಣ ಇನ್ನಾ, ಸಮುದಾಯದ ವಾಸುದೇವ ಉಚ್ಚಿಲ, ರಮೇಶ್ ಉಳ್ಳಾಲ, ಮಹಾಬಲ ಟಿ ದೆಪ್ಪೆಲಿಮಾರ್, ಶೇಖರ್ ಕುಂದರ್, ಇಬ್ರಾಹಿಂ ಮದಕ, ಅಬೂಬಕ್ಕರ್ ಜಲ್ಲಿ, ನಾಸಿರ್ ಬಾಸ್, ಬಿಲಾಲ್, ಸುನೀಲ್ ತೇವುಲ, ಶ್ರೀನಾಥ್ ಕಾಟಿಪಳ್ಳ ಮುಂತಾದವರು ಉಪಸ್ಥಿತರಿದ್ದರು.