ಪುತ್ತೂರು ಜಾತ್ರೆ ಅಂಗಡಿ ಹಂಚಿಕೆಯಲ್ಲಿ ಭ್ರಷ್ಟಾಚಾರ ; 400ಕ್ಕೂ ಹೆಚ್ಚು ಅಂಗಡಿಗಳಿಗೆ ಅಕ್ರಮ ಹಂಚಿಕೆ, ವ್ಯಾಪಾರಸ್ಥರ ಸಂಘದಿಂದ ಆರೋಪ

20-04-26 05:28 pm       HK News Staffer   ಕರಾವಳಿ

ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಾರ್ಷಿಕ ಜಾತ್ರೋತ್ಸವದ ಅಂಗಡಿ ಏಲಂ ಪ್ರಕ್ರಿಯೆಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದೆ ಎಂದು ಕರ್ನಾಟಕ ರಾಜ್ಯ ಹಿಂದೂ ಜಾತ್ರಾ ವ್ಯಾಪಾರಸ್ಥರ ಸಂಘ ಗಂಭೀರ ಆರೋಪ ಮಾಡಿದೆ.

ಪುತ್ತೂರು, ಎಪ್ರಿಲ್ 20: ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಾರ್ಷಿಕ ಜಾತ್ರೋತ್ಸವದ ಅಂಗಡಿ ಏಲಂ ಪ್ರಕ್ರಿಯೆಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದೆ ಎಂದು ಕರ್ನಾಟಕ ರಾಜ್ಯ ಹಿಂದೂ ಜಾತ್ರಾ ವ್ಯಾಪಾರಸ್ಥರ ಸಂಘ ಗಂಭೀರ ಆರೋಪ ಮಾಡಿದೆ. 

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಮಹೇಶ್ ದಾಸ್, ದೇವಸ್ಥಾನದ ಆಡಳಿತ ಮಂಡಳಿ ಮತ್ತು ಅಧಿಕಾರಿಗಳ ವಿರುದ್ಧ ಹರಿಹಾಯ್ದರು. ಜಾತ್ರೆಯ ಸಂದರ್ಭದಲ್ಲಿ ದೇವಸ್ಥಾನದ ಗದ್ದೆಯಲ್ಲಿ ವ್ಯಾಪಾರಕ್ಕೆ ಕೇವಲ 320 ಅಂಗಡಿಗಳಿಗೆ ಮಾತ್ರ ಅಧಿಕೃತವಾಗಿ ಏಲಂ ಮೂಲಕ ಅವಕಾಶ ನೀಡಲಾಗಿತ್ತು. ಆದರೆ, ಪ್ರಸ್ತುತ 700ಕ್ಕೂ ಅಧಿಕ ಅಂಗಡಿಗಳು ಕಾರ್ಯಾಚರಿಸುತ್ತಿವೆ ಎಂದು ಅವರು ದೂರಿದರು.

“ಅಧಿಕೃತವಾಗಿ ನಿಗದಿಪಡಿಸಿದ 320 ಅಂಗಡಿಗಳಿಗಿಂತ ಹೆಚ್ಚುವರಿಯಾಗಿ ಇರುವ 400ಕ್ಕೂ ಹೆಚ್ಚು ಅಂಗಡಿಗಳಿಂದ ಅನಧಿಕೃತವಾಗಿ ಹಣ ವಸೂಲಿ ಮಾಡಲಾಗಿದೆ. ಈ ಹಣವು ದೇವಸ್ಥಾನದ ಬೊಕ್ಕಸಕ್ಕೆ ಸೇರುವ ಬದಲು ಭ್ರಷ್ಟರ ಪಾಲಾಗಿದೆ. ಇದರಲ್ಲಿ ದೇವಸ್ಥಾನದ ಆಡಳಿತ ಮಂಡಳಿ, ಕಾರ್ಯ ನಿರ್ವಹಣಾಧಿಕಾರಿ ಹಾಗೂ ಅಧಿಕಾರಿ ವರ್ಗದವರು ಭಾಗಿಯಾಗಿದ್ದಾರೆ,” ಎಂದು ಮಹೇಶ್ ದಾಸ್ ಆರೋಪಿಸಿದರು.

ಹಣ ವಸೂಲಿಗೆ ಸಂಬಂಧಿಸಿದಂತೆ ದೇವಸ್ಥಾನದ ಅಧಿಕೃತ ಲೆಟರ್ ಹೆಡ್ ಬದಲಾಗಿ, ಸಾಮಾನ್ಯ ಬಿಳಿ ಕಾಗದದ ಚೂರುಗಳಲ್ಲಿ ದೇವಸ್ಥಾನದ ಸೀಲ್ ಹಾಕಿ ಹಣ ಪಡೆದುಕೊಳ್ಳಲಾಗುತ್ತಿದೆ. ಈ ಮೂಲಕ ಕೋಟ್ಯಂತರ ರೂಪಾಯಿ ಅವ್ಯವಹಾರ ನಡೆದಿದೆ ಎಂದು ಅವರು ಆಕ್ಷೇಪ ವ್ಯಕ್ತಪಡಿಸಿದರು. 

ಹಗರಣದ ಬಗ್ಗೆ ಸಂಪೂರ್ಣ ತನಿಖೆ ನಡೆಸುವಂತೆ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ಸಲ್ಲಿಸಲಾಗುವುದು. ಕಷ್ಟಪಟ್ಟು ವ್ಯಾಪಾರ ಮಾಡುವ ಹಿಂದೂ ವ್ಯಾಪಾರಿಗಳಿಗೆ ನ್ಯಾಯ ಸಿಗಬೇಕು ಮತ್ತು ಭ್ರಷ್ಟ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.