ದಾವಣಗೆರೆ ಫಲಿತಾಂಶ ಏನಾಗುತ್ತೆಂದು ಹೇಳಲು ನಾನು ಜ್ಯೋತಿಷಿಯಲ್ಲ, ಮಹಿಳಾ ಮೀಸಲು ಕಾಯ್ದೆ ಸೋಲಿಗೆ ಬಿಜೆಪಿ ಸಂಚು ಕಾರಣ ; ದಿನೇಶ್ ಗುಂಡೂರಾವ್

18-04-26 08:10 pm       HK News Staffer   ಕರಾವಳಿ

ದಾವಣಗೆರೆ ಉಪ ಚುನಾವಣೆ ಸಂಬಂಧಿಸಿ ಪಕ್ಷ ಕೈಗೊಂಡ ಕ್ರಮಗಳಿಗೂ, ಚುನಾವಣಾ ಫಲಿತಾಂಶಕ್ಕೂ ಯಾವುದೇ ಸಂಬಂಧ ಇಲ್ಲ. ಫಲಿತಾಂಶ ಏನಾಗುತ್ತೆ ಎಂದು ಯಾರಿಗೂ ಗೊತ್ತಿಲ್ಲ. ಅದರ ಬಗ್ಗೆ ಹೇಳಲು ನಾನು ಜ್ಯೋತಿಷಿ ಅಲ್ಲ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

ಮಂಗಳೂರು, ಎಪ್ರಿಲ್ 18: ದಾವಣಗೆರೆ ಉಪ ಚುನಾವಣೆ ಸಂಬಂಧಿಸಿ ಪಕ್ಷ ಕೈಗೊಂಡ ಕ್ರಮಗಳಿಗೂ, ಚುನಾವಣಾ ಫಲಿತಾಂಶಕ್ಕೂ ಯಾವುದೇ ಸಂಬಂಧ ಇಲ್ಲ. ಫಲಿತಾಂಶ ಏನಾಗುತ್ತೆ ಎಂದು ಯಾರಿಗೂ ಗೊತ್ತಿಲ್ಲ. ಅದರ ಬಗ್ಗೆ ಹೇಳಲು ನಾನು ಜ್ಯೋತಿಷಿ ಅಲ್ಲ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ. 

ಪಕ್ಷ ವಿರೋಧಿ ಚಟುವಟಿಕೆ ಬಗ್ಗೆ ಪಕ್ಷದ ಚೌಕಟ್ಟಿನಲ್ಲಿ ಕೆಲವು ಕ್ರಮಗಳನ್ನು ಕೈಗೊಳ್ಳಲಾಗಿದೆ. ಜಮೀರ್ ಅಹಮ್ಮದ್ ಅವರನ್ನು ಸಚಿವ ಸ್ಥಾನದಿಂದ ಇಳಿಸೋದು ಕೇವಲ ಉಹಾಪೋಹ. ಜಮೀರ್ ಅಹಮ್ಮದ್ ಪಕ್ಷದ ಹಿರಿಯ ಮುಖಂಡ. ಪ್ರಾಮಾಣಿಕವಾಗಿ ಪಕ್ಷಕ್ಕಾಗಿ‌ ದುಡಿಯುತ್ತಿದ್ದಾರೆ.‌ ಆದ್ರೆ ಕೆಲವರು ಅದಕ್ಕೆ ಬಣ್ಣ ಕಟ್ಟಲು ಹೊರಟಿರಬಹುದು. ಈ‌ ವಿಚಾರಗಳು ಪಕ್ಷದ ಚೌಕಟ್ಟಿನಲ್ಲಿ ಚರ್ಚೆ ಆಗುತ್ತದೆ. 

ಸಿದ್ದರಾಮಯ್ಯ ಟೀಮನ್ನು ಟಾರ್ಗೆಟ್ ಮಾಡಿದ್ದಾರೆಂಬ ರಾಜಣ್ಣ ಹೇಳಿಕೆ ಬಗ್ಗೆ ನನಗೆ ಗೊತ್ತಿಲ್ಲ. ಅದನ್ನು ರಾಜಣ್ಣ ಅವರ ಬಳಿಯೇ ಕೇಳಬೇಕು. ಇದೆಲ್ಲ ಪಕ್ಷದ ಶಿಸ್ತಿನ ವಿಚಾರ. ಕಾಂಗ್ರೆಸ್ ನಲ್ಲಿ ಯಾರನ್ನು‌ ಟಾರ್ಗೆಟ್ ಮಾಡುವ ಪ್ರಶ್ನೆ ಬರಲ್ಲ. ಕಾಂಗ್ರೆಸ್ ನಲ್ಲಿ ಎಲ್ಲಾ ಧರ್ಮದವರು ಒಂದೇ ಸಮಾನ. ಏನೋ ತಪ್ಪಾಗಿದ್ದರೆ ಪಕ್ಷ ಕ್ರಮ ತೆಗೆದುಕೊಳ್ಳುತ್ತದೆ ಎಂದು ದಿನೇಶ್ ಗುಂಡೂರಾವ್ ಹೇಳಿದರು. 

ಮಹಿಳಾ‌ ಮೀಸಲಾತಿ ಮಸೂದೆಗೆ ಸಂಸತ್ತಿನಲ್ಲಿ ಸೋಲಾದ ಬಗ್ಗೆ ಪ್ರತಿಕ್ರಿಯಿಸಿದ ಗುಂಡೂರಾವ್, ಕೇಂದ್ರ ಸರ್ಕಾರ ಮಹಿಳೆಯರ ಹೆಸರಿನಲ್ಲಿ ವಂಚನೆ ಮಾಡಲು ಹೊರಟಿದೆ. ವಿಶೇಷ ಅಧಿವೇಶನ ಕರೆದು ಮುಖಭಂಗ ಆಗಿರೋದಕ್ಕೆ ಅವರೇ ಕಾರಣ. ಮಹಿಳೆಯರಿಗೆ ವಾಸ್ತವದಲ್ಲಿ ವಿರೋಧ ಮಾಡಿರೋದು ಬಿಜೆಪಿಯವರು.‌ ಮಹಿಳಾ‌ ಮೀಸಲಾತಿಗೆ ಯಾರೂ ವಿರೋಧ ಇಲ್ಲ. 2023ರಲ್ಲಿ ಈ ಮಸೂದೆ ತಂದಾಗ ಸರ್ವಾನುಮತದಿಂದ ನಾವು ಒಪ್ಪಿಕೊಂಡಿದ್ದೆವು. ಮಹಿಳಾ‌ ಮೀಸಲಾತಿಗೂ ಕ್ಷೇತ್ರ ಪುನರ್ ವಿಂಗಡನೆಗೂ ಸಂಬಂಧ ಇಲ್ಲ. ಮಹಿಳೆಯರಿಗೆ 33% ಮೀಸಲಾತಿ ನೀಡುವ ಬಗ್ಗೆ ತೀರ್ಮಾನಿಸಿದರೆ ನಾವು‌ ಸ್ವಾಗತಿಸುತ್ತೇವೆ. ರಾಜ್ಯದ 224 ಕ್ಷೇತ್ರಗಳ ಪೈಕಿ‌ 33% ಮಹಿಳೆಯರಿಗೆ ಮೀಸಲಾತಿ‌ ಕೊಟ್ರೆ ನಮಗೆ ಸಮಸ್ಯೆ ಇಲ್ಲ. ನಾವೆಲ್ಲರೂ ಆ ಮಸೂದೆಯ ಪರವಾಗಿ ಇದ್ದೇವೆ. 

ಈಗ ಕೆಲವು ಕಡೆ‌ ಚುನಾವಣೆ ನಡೆಯುತ್ತಿದೆ.‌ ಈ ಮಸೂದೆ ಹಿಂದೆಯೆ ಜಾರಿಗೆ ತಂದಿದ್ರೆ ಚುನಾವಣೆಯಲ್ಲಿ 33% ಮಹಿಳೆಯರಿಗೆ ಸೀಟು‌ ಸಿಗ್ತಿತ್ತು. ಮಹಿಳೆಯರ ಹೆಸರಿನಲ್ಲಿ ತಮ್ಮ ಅಧಿಕಾರ ಉಳಿಸಿಕೊಳ್ಳಲು ಕ್ಷೇತ್ರ ಪುನರ್ ವಿಂಗಡನೆ ಮಾಡಬೇಕೆಂಬ ಹುನ್ನಾರ ಇವರದ್ದು. ದಕ್ಷಿಣ ಭಾರತದ ರಾಜ್ಯಗಳಿಗೆ ಇದರಿಂದ ದೊಡ್ಡ ಸಮಸ್ಯೆ ಆಗಲಿದೆ ಮತ್ತು ಇದರ ಬಗ್ಗೆ ಅನೇಕ ಅನುಮಾನಗಳಿವೆ. ಮಹಿಳೆಯರ ಹೆಸರಿನಲ್ಲಿ ಅಧಿಕಾರ ಹಿಡಿಯಬೇಕೆಂದು ಮಾಡಿದ ಪ್ರಯತ್ನ ಈಗ ವಿಫಲವಾಗಿದೆ. ಇದೊಂದು ಮೋದಿ ಮತ್ತು ಬಿಜೆಪಿಯವರ ಸಂಚು‌ ಎಂದು ಸಚಿವ ದಿನೇಶ್ ಗುಂಡೂರಾವ್ ವಾಗ್ದಾಳಿ ನಡೆಸಿದರು. 

ಪಂಚಾಯತ್ ಚುನಾವಣೆ ಪ್ರಕ್ರಿಯೆ ಆರಂಭ 

ಸ್ಥಳೀಯಾಡಳಿತ ಚುನಾವಣೆ ನಡೆಸುವ ಬಗ್ಗೆ ಈಗಾಗಲೇ ಪ್ರಕ್ರಿಯೆಗಳು ಆರಂಭವಾಗಿದೆ. ಹೈಕೋರ್ಟ್ ಆದೇಶದ ಪ್ರಕಾರ ಜೂನ್ ಮೊದಲು ಚುನಾವಣೆ ನಡೆಸಬೇಕು. ಈಗಾಗಲೇ ಅದರ ಬಗ್ಗೆ ತಯಾರಿಗಳು ಆರಂಭವಾಗಿದೆ. ಚುನಾವಣೆ ನಡೆಸಲು ಕಾಲಾವಕಾಶ ಕೇಳಿದ ಬಗ್ಗೆ ನನಗೆ ಮಾಹಿತಿಯಿಲ್ಲ.‌ ಚುನಾವಣೆ ನಡೆದೇ ನಡೆಯುತ್ತದೆ. ಸೆಪ್ಟೆಂಬರ್ ನಲ್ಲಿ ನಡೆಸಲು ಹೈಕೋರ್ಟ್ ಕಾಲಾವಕಾಶ ಕೊಟ್ರೆ ಮಾಡ್ತೇವೆ. ಜೂನ್ ಒಳಗೆ ಮಾಡಬೇಕಂದ್ರೆ ಜೂನ್ ನಲ್ಲಿ ನಡೆಸುತ್ತೇವೆ ಎಂದರು.