Mangaluru Muscat Flight: ಮಂಗಳೂರು- ಮಸ್ಕತ್ ನಡುವೆ ಮಾ.1ರಿಂದ ನೇರ ವಿಮಾನ ಸೇವೆ ಪುನರಾರಂಭ ; ಸಂಸದ ಚೌಟ

27-02-26 08:59 pm       Mangalore Correspondent   ಕರಾವಳಿ

ದಕ್ಷಿಣ ಕನ್ನಡ, ಉಡುಪಿ ಹಾಗೂ ನೆರೆಯ ಕೇರಳ ರಾಜ್ಯದ ಪ್ರಯಾಣಿಕರು ಮತ್ತು ಅನಿವಾಸಿ ಭಾರತೀಯರ ಬಹುಕಾಲದ ಬೇಡಿಕೆಯಂತೆ ಮಂಗಳೂರು ಮತ್ತು ಮಸ್ಕತ್ ನಡುವಿನ ನೇರ ವಿಮಾನಯಾನ ಸೇವೆಯು ಮಾರ್ಚ್ 1 ರಿಂದ ಅಧಿಕೃತವಾಗಿ ಪುನರಾರಂಭಗೊಳ್ಳಲಿದೆ. 

ಮಂಗಳೂರು, ಫೆ.27: ದಕ್ಷಿಣ ಕನ್ನಡ, ಉಡುಪಿ ಹಾಗೂ ನೆರೆಯ ಕೇರಳ ರಾಜ್ಯದ ಪ್ರಯಾಣಿಕರು ಮತ್ತು ಅನಿವಾಸಿ ಭಾರತೀಯರ ಬಹುಕಾಲದ ಬೇಡಿಕೆಯಂತೆ ಮಂಗಳೂರು ಮತ್ತು ಮಸ್ಕತ್ ನಡುವಿನ ನೇರ ವಿಮಾನಯಾನ ಸೇವೆಯು ಮಾರ್ಚ್ 1 ರಿಂದ ಅಧಿಕೃತವಾಗಿ ಪುನರಾರಂಭಗೊಳ್ಳಲಿದೆ. 

ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌  ವತಿಯಿಂದ ಈ ವಿಮಾನ ಹಾರಾಟ ನಡೆಯಲಿದ್ದು, ಕರಾವಳಿ ಭಾಗದಿಂದ ಹೆಚ್ಚಿನ ಸಂಖ್ಯೆಯ ಜನರು ಉದ್ಯೋಗ ಮತ್ತು ವ್ಯಾಪಾರ ನಿಮಿತ್ತ ಮಸ್ಕತ್‌ಗೆ ಪ್ರಯಾಣಿಸುತ್ತಿರುವ ಹಿನ್ನೆಲೆಯಲ್ಲಿ ಈ ಸೇವೆಗೆ ಹೆಚ್ಚಿನ ಒತ್ತಾಯ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯಕ್ಕೆ ಪತ್ರ ವ್ಯವಹಾರ ನಡೆಸಿ, ವಿಮಾನಯಾನ ಪುನಾರಂಭಿಸುವಂತೆ ಮನವಿ ಸಲ್ಲಿಸಿದ್ದರು. 

ಸದ್ಯದ ವೇಳಾಪಟ್ಟಿಯ ಪ್ರಕಾರ, ವಾರದಲ್ಲಿ ಎರಡು ದಿನ ಅಂದರೆ ಪ್ರತಿ ಭಾನುವಾರ ಮತ್ತು ಮಂಗಳವಾರ ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ ವಿಮಾನ ಹಾರಾಟ ನಡೆಸಲಿದೆ. ಈ ನೇರ ಸೇವೆಯಿಂದಾಗಿ ಪ್ರಯಾಣದ ಸಮಯ ಉಳಿತಾಯವಾಗುವುದಲ್ಲದೆ, ಅನಿವಾಸಿ ಭಾರತೀಯರಿಗೆ ತಮ್ಮ ಊರುಗಳಿಗೆ ನೇರವಾಗಿ ಪ್ರಯಾಣಿಸಲು ಬಹಳಷ್ಟು ಅನುಕೂಲವಾಗಲಿದೆ. 

ಈ ಬಗ್ಗೆ ಪ್ರತಿಕ್ರಿಯಿಸಿರುವ ದಕ್ಷಿಣ ಕನ್ನಡ ಸಂಸದ ಕ್ಯಾ.ಬ್ರಿಜೇಶ್ ಚೌಟ "ಮಂಗಳೂರು- ಮಸ್ಕತ್ ನೇರ ವಿಮಾನಯಾನ ಸೇವೆಯು ಅಚಾನಕ್ ಆಗಿ ಸ್ಥಗಿತಗೊಂಡ ಕಾರಣ ಮಸ್ಕತ್‌ನಲ್ಲಿ ನೆಲೆಸಿರುವ ನಮ್ಮ ಕರಾವಳಿ ಭಾಗದ ಸಾವಿರಾರು ಪ್ರಯಾಣಿಕರಿಗೆ ತೀವ್ರ ಸಂಕಷ್ಟ ಎದುರಾಗಿತ್ತು. ಮಸ್ಕತ್‌ನಿಂದ ಮಂಗಳೂರಿಗೆ ಬರಬೇಕಾದವರು ದೆಹಲಿ, ಮುಂಬೈ ಅಥವಾ ಕಣ್ಣೂರು ಮೂಲಕ ಸುತ್ತಿ ಬಳಸಿ ಪ್ರಯಾಣಿಸಬೇಕಾಗಿತ್ತು. ಈ ಸಮಸ್ಯೆ ಬಗ್ಗೆ ನಿರಂತರ ಪ್ರಯತ್ನ ಹಾಗೂ ಮನವಿಗೆ ಸ್ಪಂದಿಸಿ, ಮಾರ್ಚ್ 1ರಿಂದ ಈ ಸೇವೆಯನ್ನು ಪುನರಾರಂಭಿಸಲು ಕ್ರಮ ಕೈಗೊಂಡ ಕೇಂದ್ರ ನಾಗರಿಕ ವಿಮಾನಯಾನ ಸಚಿವರಾದ ರಾಮಮೋಹನ್ ನಾಯ್ಡು ಅವರಿಗೆ ಸಮಸ್ತ ಅನಿವಾಸಿ ಕರಾವಳಿಗರ ಪರವಾಗಿ ಧನ್ಯವಾದ ಅರ್ಪಿಸುತ್ತೇನೆ ಎಂದು ಹೇಳಿದ್ದಾರೆ.