Mangalore Sujith Madur: ಕೌನ್ಸಿಲರ್ ಸುಜಿತ್ ಮಾಡೂರು ಪರ ಶಕ್ತಿ ಪ್ರದರ್ಶನ ; ಕೋಟೆಕಾರು ಪ.ಪಂ ಸಭೆಗೆ ಬಿಜೆಪಿಯ ಆರು ಸದಸ್ಯರ ಗೈರು, ವಿಶ್ವಾಸ ಮತಕ್ಕೆ ವಿಪಕ್ಷ ಸದಸ್ಯರ ಆಗ್ರಹ, ಕಮಲ ಆಡಳಿತಕ್ಕೆ ಮಗ್ಗುಲ ಮುಳ್ಳಾದ ಉಚ್ಚಾಟನೆ ! 

27-02-26 08:52 pm       HK News Desk   ಕರಾವಳಿ

ಪಕ್ಷ ವಿರೋಧಿ ಚಟುವಟಿಕೆಯ ಆರೋಪದಡಿ ಕೋಟೆಕಾರು ಪಟ್ಟಣ ಪಂಚಾಯತ್ ಸದಸ್ಯ ಸುಜಿತ್ ಮಾಡೂರು ಅವರನ್ನ ಬಿಜೆಪಿಯಿಂದ ಉಚ್ಚಾಟನೆ ಮಾಡಿದ ಬೆನ್ನಲ್ಲೇ ಇಂದು ನಡೆದ ಪಟ್ಟಣ ಪಂಚಾಯತ್ ಸಾಮಾನ್ಯ ಸಭೆಗೆ ಆಡಳಿತ ಬಿಜೆಪಿ ಪಕ್ಷದ ಆರು ಮಂದಿ ಪ.ಪಂ ಸದಸ್ಯರು ಗೈರಾಗಿ ಸುಜಿತ್ ಮಾಡೂರು ಪರ ಶಕ್ತಿ ಪ್ರದರ್ಶನ ನಡೆಸಿದ್ದು.....

ಉಳ್ಳಾಲ, ಫೆ.27: ಪಕ್ಷ ವಿರೋಧಿ ಚಟುವಟಿಕೆಯ ಆರೋಪದಡಿ ಕೋಟೆಕಾರು ಪಟ್ಟಣ ಪಂಚಾಯತ್ ಸದಸ್ಯ ಸುಜಿತ್ ಮಾಡೂರು ಅವರನ್ನ ಬಿಜೆಪಿಯಿಂದ ಉಚ್ಚಾಟನೆ ಮಾಡಿದ ಬೆನ್ನಲ್ಲೇ ಇಂದು ನಡೆದ ಪಟ್ಟಣ ಪಂಚಾಯತ್ ಸಾಮಾನ್ಯ ಸಭೆಗೆ ಆಡಳಿತ ಬಿಜೆಪಿ ಪಕ್ಷದ ಆರು ಮಂದಿ ಪ.ಪಂ ಸದಸ್ಯರು ಗೈರಾಗಿ ಸುಜಿತ್ ಮಾಡೂರು ಪರ ಶಕ್ತಿ ಪ್ರದರ್ಶನ ನಡೆಸಿದ್ದು, ಅನಿರೀಕ್ಷಿತ ಬೆಳವಣಿಗೆಯು ಆಡಳಿತ ಬಿಜೆಪಿ ಪಕ್ಷದ ಬುಡ ಅಲ್ಲಾಡುವಂತೆ ಮಾಡಿದೆ.

ಕಳೆದ ಒಂದೂವರೆ ವರುಷದಿಂದ ನಿರಂತರವಾಗಿ ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿಸಿದ್ದಲ್ಲದೆ, ಇತ್ತೀಚಿಗೆ ನಡೆದ ಪ.ಪಂ ಸಾಮಾನ್ಯ ಸಭೆಯಲ್ಲಿ ಎಸ್ಡಿಪಿಐ ಸದಸ್ಯೆಯೊಂದಿಗೆ ಸೇರಿ ಆಡಳಿತ ಬಿಜೆಪಿಯ ವಿರುದ್ಧವೇ ಪ್ರತಿಭಟನೆ ನಡೆಸಿದ ಆರೋಪದಡಿ ಕೋಟೆಕಾರು ಪ.ಪಂ ಸದಸ್ಯ ಸುಜಿತ್ ಮಾಡೂರು ಅವರನ್ನ ಕಳೆದ ಫೆ.19 ರಂದು ಬಿಜೆಪಿಯಿಂದ ಉಚ್ಚಾಟಿಸಲಾಗಿತ್ತು.

ತಾನು ಪ.ಪಂ ವ್ಯಾಪ್ತಿಯ ಬಡ ನಿವೇಶನ ರಹಿತರಿಗೆ ಸರಕಾರಿ ಭೂಮಿ ಹಂಚದ ಅಧಿಕಾರಿಗಳ ವಿರುದ್ಧ ಪ್ರತಿಭಟಿಸಿದ್ದೇನೆಯೇ ಹೊರತು ಬಿಜೆಪಿ ಆಡಳಿತದ ವಿರುದ್ಧ ಹೋಗಿಲ್ಲವೆಂದು ಸುಜಿತ್ ಮಾಡೂರು ಅವರು ಮಾಧ್ಯಮಗಳಲ್ಲಿ ಸ್ಪಷ್ಟನೆ ಹೇಳಿಕೊಂಡಿದ್ದರು. ಇಂದು ಕೋಟೆಕಾರು ಪ.ಪಂ ಆಡಳಿತ ಸೌಧದಲ್ಲಿ ನಡೆದ ಸಾಮಾನ್ಯ ಸಭೆಗೆ ಸುಜಿತ್ ಸೇರಿದಂತೆ ಆಡಳಿತ ಬಿಜೆಪಿ ಪಕ್ಷದ ಕೌನ್ಸಿಲರ್ಗಳಾದ ಭವಾನಿ ದೇವದಾಸ್, ಕಿರಣ್, ಅನಿತಾ, ಜಗದೀಶ್, ನವೀನ್ ಕೊಂಡಾಣ ಅವರು ಗೈರಾಗಿ ಸುಜಿತ್ ಪರ ಶಕ್ತಿ ಪ್ರದರ್ಶನ ನಡೆಸಿದ್ದಾರೆ. ಸುಜಿತ್ ಮಾಡೂರು ಅವರು ಸಾಮಾನ್ಯ ಸಭೆಗಳಲ್ಲಿ ಯಾವುದೇ ಪಕ್ಷ ವಿರೋಧಿ ಚಟುವಟಿಕೆ ನಡೆಸಿಲ್ಲ. ಅದಕ್ಕೆ ನಾವೇ ಸಾಕ್ಷಿ. ಅವರು ಸಭೆಗಳಲ್ಲಿ ಬಡ ನಿವೇಶನ ರಹಿತರ ಪರವಾಗಿ ನಿರಂತರ ಧ್ವನಿ ಎತ್ತಿರುವ ಬಗ್ಗೆ ಆರು ಮಂದಿ ಬಿಜೆಪಿ ಸದಸ್ಯರು ಪಕ್ಷದ ನಾಯಕರಲ್ಲಿ ವಿವರಿಸಿದ್ದರೂ ಸಹ ಕೌನ್ಸಿಲರ್ಗಳ ಮಾತಿಗೂ ಕಿಮ್ಮತ್ತು ನೀಡದೆ ಸುಜಿತ್ ಅವರನ್ನ ಏಕಾಏಕಿ ಪಕ್ಷದಿಂದ ಉಚ್ಚಾಟನೆಗೊಳಿಸಿರುವುದು ಬಿಜೆಪಿ ಕೌನ್ಸಿಲರ್ಗಳು ಸುಜಿತ್ ಪರ ಶಕ್ತಿಪ್ರದರ್ಶನ ನಡೆಸಲು ಕಾರಣವಾಗಿದೆಯೆಂದು ತಿಳಿದುಬಂದಿದೆ.

ಒಟ್ಟು ಹದಿನೇಳು ಸದಸ್ಯ ಬಲವಿರುವ ಕೋಟೆಕಾರು ಪ.ಪಂ ನಲ್ಲಿ ಹನ್ನೊಂದು ಸದಸ್ಯರನ್ನೊಳಗೊಂಡಿದ್ದ ಬಿಜೆಪಿ ಕಳೆದ 2024ರ ಆಗಸ್ಟ್ ತಿಂಗಳಲ್ಲಿ ಆಡಳಿತದ ಚುಕ್ಕಾಣಿ ಹಿಡಿದಿತ್ತು. ಇದೀಗ ಸುಜಿತ್ ಉಚ್ಚಾಟನೆಯ ಬಳಿಕ ಬಿಜೆಪಿಯ ಆರು ಮಂದಿ ಸದಸ್ಯರು ಸಭೆಗೆ ಗೈರಾಗಿದ್ದು, ಅಧ್ಯಕ್ಷರಾದ ದಿವ್ಯ ಶೆಟ್ಟಿ, ಉಪಾಧ್ಯಕ್ಷರಾದ ಪ್ರವೀಣ್ ಬಗಂಬಿಲ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಧೀರಜ್ ಕುಸಾಲ್ ನಗರ, ಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷರಾದ ಉದಯ ಶೆಟ್ಟಿ ಸೇರಿ ಕೇವಲ ನಾಲ್ಕು ಮಂದಿ ಆಡಳಿತ ಪಕ್ಷದ ಪರವಾಗಿ ಸಭೆಯಲ್ಲಿ ಭಾಗವಹಿಸಿದ್ದರು. 

ಸಾಮಾನ್ಯ ಸಭೆಯನ್ನುದ್ಧೇಶಿಸಿ ಮಾತನಾಡಿದ ಪಕ್ಷೇತರ ಕೌನ್ಸಿಲರ್ ಹರೀಶ್ ರಾವ್, ಬಿಜೆಪಿ ಪಕ್ಷದಿಂದ ಉಚ್ಚಾಟಿತ ಸದಸ್ಯರಾದ ಸುಜಿತ್ ಮಾಡೂರು ಅವರು ಬಡ ನಿವೇಶನ ರಹಿತರ ಪರವಾಗಿ ಪ.ಪಂ ಸಭೆಯೊಳಗೆ ಮಾತನಾಡಿರುವುದು ನಾವೆಲ್ಲರೂ ಕಂಡ ಸತ್ಯವಾಗಿದೆ. ಆ ವಿಚಾರದಲ್ಲಿ ವಿಪಕ್ಷದ ನೆಲೆಯಲ್ಲಿ ನಾವೂ ಕೂಡ ನಿರಂತರವಾಗಿ ಧ್ವನಿ ಎತ್ತುತ್ತಾ ಬಂದಿದ್ದೇವೆ. ಆಡಳಿತ ಪಕ್ಷದ ಓರ್ವ ಸದಸ್ಯನು ನಿವೇಶನ ರಹಿತರ ಪರ ನಡೆಸುತ್ತಿರುವ ಹೋರಾಟಕ್ಕೆ ನಾವೆಲ್ಲರೂ ಜತೆಯಾಗಿ ನಿಲ್ಲಬೇಕಿತ್ತು. ಕಳೆದ ಒಂದೂವರೆ ವರ್ಷದಿಂದ ನಿವೇಶನದ ಬಗ್ಗೆ ಪ್ರತೀ ಸಾಮಾನ್ಯ ಸಭೆಯಲ್ಲಿ ಪ್ರಸ್ತಾಪಿಸಿದಾಗ ತಹಶೀಲ್ದಾರ್ ಬಳಿ ಹೋಗುವ, ಶಾಸಕರಲ್ಲಿ ಮಾತುಕತೆ ನಡೆಸುವ ಎಂಬ ಸಬೂಬುಗಳನ್ನ ನೀಡಿದ್ದೀರಿ ಹೊರತು ಯಾವುದನ್ನೂ ಕಾರ್ಯಗತಗೊಳಿಸಿಲ್ಲ. ಪಟ್ಟಣದ ನಿವೇಶನ ರಹಿತರಿಗೆ ನಿವೇಶನ ಸಿಗುತ್ತದೋ ಇಲ್ಲವೋ ಎಂಬುದರ ಬಗ್ಗೆ ಅಧ್ಯಕ್ಷರು ಸ್ಪಷ್ಟ ನಿಲುವನ್ನು ಘೋಷಣೆ ಮಾಡಿ. ಜನರಿಗೆ ನಾವು ಉತ್ತರ ಕೊಟ್ಟು ಸಾಕಾಗಿದೆಯೆಂದು ಹರೀಶ್ ರಾವ್ ಅಸಮಧಾನ ವ್ಯಕ್ತಪಡಿಸಿದರು.

ಆಡಳಿತ ಪಕ್ಷದ ನಾಲ್ಕು ಸದಸ್ಯರಿಂದ ಸಾಮಾನ್ಯ ಸಭೆ ನಡೆಸಲು ಸಾಧ್ಯವಿಲ್ಲ. ನಿಯಮ ಪ್ರಕಾರ ಕನಿಷ್ಟ ಆರು ಮಂದಿ ಸದಸ್ಯರ ಇರುವಿಕೆ ಸಾಮಾನ್ಯ ಸಭೆಯಲ್ಲಿ ಇರಬೇಕು. ಕಳೆದ ಬಜೆಟ್ ಸಭೆಯಲ್ಲೂ ಆಡಳಿತದ ನಾಲ್ಕೇ ಜನ ಸದಸ್ಯರ ಇರುವಿಕೆ ಇತ್ತು. ನಾವು ವಿಪಕ್ಷದ ಆರು ಮಂದಿ ಗೈರಾದರೆ ಆಡಳಿತದ ನಾಲ್ಕು ಮಂದಿ ಸಭೆ ನಡೆಸಲು ಸಾಧ್ಯವೇ. ಹಾಗಾಗಿ ಅಧ್ಯಕ್ಷರು ವಿಶ್ವಾಸ ಮತಕ್ಕೆ ನಿರ್ಣಯ ಮಾಡಬೇಕು. ಪಂಚಾಯತ್ ಸದಸ್ಯರ ವಿಶ್ವಾಸ ಗಳಿಸಿದವರೇ ಆಡಳಿತ ಮಾಡಲೆಂದು ಹರೀಶ್ ರಾವ್ ಆಗ್ರಹಿಸಿದರು. ಅಧ್ಯಕ್ಷೆ ದಿವ್ಯಾ ಶೆಟ್ಟಿ ಪ್ರತಿಕ್ರಿಯಿಸಿ, ಸುಜಿತ್ ಉಚ್ಚಾಟನೆ ಪಕ್ಷದ ಆಂತರಿಕ ವಿಚಾರ, ಆ ಬಗ್ಗೆ ಇಲ್ಲಿ ಚರ್ಚೆ ಬೇಡ ಎಂದಷ್ಟೇ ಹೇಳಿದರು.