ಬೆಂಗಳೂರು ಬಿಟ್ಟು ಮಂಗಳೂರಿನತ್ತ ಐಟಿ ಉದ್ಯೋಗಿಗಳ ಚಿತ್ತ ; ಏನಿದು ಹೊಸ ಟ್ರೆಂಡ್? 'ಬಿಯಾಂಡ್ ಬೆಂಗಳೂರು' ಯೋಜನೆಗೆ ಭಾರೀ ಸ್ಪಂದನೆ

25-02-26 09:42 am       Richard, Headline Karnataka   ಕರಾವಳಿ

ಸಿಲಿಕಾನ್ ಸಿಟಿ ಬೆಂಗಳೂರಿನ ಟ್ರಾಫಿಕ್ ಕಿರಿಕಿರಿ ಮತ್ತು ದುಬಾರಿ ಜೀವನ ಶೈಲಿಯಿಂದ ಬೇಸತ್ತಿರುವ ಐಟಿ ಉದ್ಯೋಗಿಗಳು ಮತ್ತು ಬಹುರಾಷ್ಟ್ರೀಯ ಐಟಿ ಕಂಪನಿಗಳು ಕರ್ನಾಟಕದ ಕರಾವಳಿಯತ್ತ ಮುಖ ಮಾಡುತ್ತಿವೆ. ಕರ್ನಾಟಕ ಸರ್ಕಾರದ 'ಬಿಯಾಂಡ್ ಬೆಂಗಳೂರು' ಯೋಜನೆಯಡಿ ಮಂಗಳೂರು ವೇಗವಾಗಿ ಬೆಳೆಯುತ್ತಿದ್ದು ತಂತ್ರಜ್ಞಾನ ಕೇಂದ್ರವಾಗಿ ಹೊರಹೊಮ್ಮುತ್ತಿದೆ. ಕಳೆದ 2-3 ವರ್ಷಗಳಲ್ಲಿ ಐಟಿ ವೃತ್ತಿಪರರು ಹಲವಾರು ಕಾರಣಕ್ಕೆ ಮಂಗಳೂರನ್ನು ಆಯ್ಕೆ ಮಾಡುತ್ತಿದ್ದಾರೆ.

ಮಂಗಳೂರು, ಫೆ.24: ಸಿಲಿಕಾನ್ ಸಿಟಿ ಬೆಂಗಳೂರಿನ ಟ್ರಾಫಿಕ್ ಕಿರಿಕಿರಿ ಮತ್ತು ದುಬಾರಿ ಜೀವನ ಶೈಲಿಯಿಂದ ಬೇಸತ್ತಿರುವ ಐಟಿ ಉದ್ಯೋಗಿಗಳು ಮತ್ತು ಬಹುರಾಷ್ಟ್ರೀಯ ಐಟಿ ಕಂಪನಿಗಳು ಕರ್ನಾಟಕದ ಕರಾವಳಿಯತ್ತ ಮುಖ ಮಾಡುತ್ತಿವೆ. ಕರ್ನಾಟಕ ಸರ್ಕಾರದ 'ಬಿಯಾಂಡ್ ಬೆಂಗಳೂರು' ಯೋಜನೆಯಡಿ ಮಂಗಳೂರು ವೇಗವಾಗಿ ಬೆಳೆಯುತ್ತಿದ್ದು ತಂತ್ರಜ್ಞಾನ ಕೇಂದ್ರವಾಗಿ ಹೊರಹೊಮ್ಮುತ್ತಿದೆ. ಕಳೆದ 2-3 ವರ್ಷಗಳಲ್ಲಿ ಐಟಿ ವೃತ್ತಿಪರರು ಹಲವಾರು ಕಾರಣಕ್ಕೆ ಮಂಗಳೂರನ್ನು ಆಯ್ಕೆ ಮಾಡುತ್ತಿದ್ದಾರೆ.

ಐಟಿ ಪಾರ್ಕ್‌ಗಳ ನಿರ್ಮಾಣಕ್ಕಾಗಿ ರಾಜ್ಯ ಸರ್ಕಾರ ಸಬ್ಸಿಡಿ, ರಿಯಾಯ್ತಿಗಳನ್ನು ನೀಡುತ್ತಿದ್ದು ಐಟಿ ಕಂಪನಿಗಳನ್ನು ಆಕರ್ಷಿಸಲು ಕಾರಣವಾಗಿದೆ. ಐಟಿ ಸಚಿವ ಪ್ರಿಯಾಂಕ್ ಖರ್ಗೆ, ಡಿಸಿಎಂ ಡಿಕೆ ಶಿವಕುಮಾರ್ ಅವರು ಮಂಗಳೂರನ್ನು ಮುಂದಿನ ಪ್ರಮುಖ ಟೆಕ್ ತಾಣವೆಂದು ಗುರುತಿಸಿ ಪ್ರೋತ್ಸಾಹಿಸುತ್ತಿದ್ದಾರೆ. ಪ್ರವಾಸೋದ್ಯಮ ದೃಷ್ಟಿಯಿಂದ ಮಂಗಳೂರನ್ನು ಗೋವಾ ರೀತಿ ಬೆಳೆಸಬೇಕೆಂದು ಪ್ರೋತ್ಸಾಹ ನೀಡುತ್ತಿರುವುದು ಐಟಿ ಕಂಪನಿಗಳನ್ನು ಆಕರ್ಷಿಸಿದೆ.

ವರ್ಕ್ ಫ್ರಮ್ ಹೋಮ್ ಪ್ರಭಾವ: 

ಕೋವಿಡ್ ಸಮಯದಲ್ಲಿ ಮಂಗಳೂರು- ಉಡುಪಿ ಭಾಗದ ಸುಮಾರು 1ರಿಂದ 1.5 ಲಕ್ಷ ವೃತ್ತಿಪರರು ತಮ್ಮ ಊರುಗಳಿಗೆ ಮರಳಿದ್ದರು. ಶಾಂತಿಯುತ ವಾತಾವರಣ ಮತ್ತು ಗುಣಮಟ್ಟದ ಜೀವನದ ಕಾರಣಕ್ಕೆ ಅನೇಕರು ಇಲ್ಲಿಯೇ ಉಳಿಯಲು ನಿರ್ಧರಿಸಿದ್ದಾರೆ. ಕಂಪನಿಗಳು ಮರಳಿ ಕರೆದರೂ ಬೆಂಗಳೂರಿಗೆ ತೆರಳದೆ ಮಂಗಳೂರಿನ ಕಂಪನಿಯನ್ನೇ ಸೇರಿಕೊಳ್ಳುತ್ತಿದ್ದಾರೆ.

ಐಟಿ ಕಂಪನಿಗಳಿಗೆ ಬೆಂಗಳೂರು ಹೋಲಿಸಿದರೆ ನಿರ್ವಹಣಾ ವೆಚ್ಚವೂ ಕಡಿಮೆ ಇರುವುದರಿಂದ, ಕಳೆದ ಎರಡು ವರ್ಷಗಳಲ್ಲಿ 40ಕ್ಕೂ ಹೆಚ್ಚು ಕಂಪನಿಗಳು ಮಂಗಳೂರಿನಲ್ಲಿ ಕಾರ್ಯಾಚರಣೆ ಆರಂಭಿಸಿವೆ. ಇದರಿಂದಾಗಿ 2023ರಲ್ಲಿ 15,000 ದಷ್ಟಿದ್ದ ಐಟಿ ಉದ್ಯೋಗಿಗಳ ಸಂಖ್ಯೆ ಇಂದು 30 ಸಾವಿರಕ್ಕೆ ಏರಿಕೆಯಾಗಿದೆ. ಬೆಂಗಳೂರಿನಿಂದ ಹೊರಗೆ ಆರಂಭವಾಗುವ ಕಂಪನಿಗಳಿಗೆ ಬಾಡಿಗೆ ಸಬ್ಸಿಡಿ ಸೇರಿದಂತೆ ಅನೇಕ ರಿಯಾಯಿತಿಗಳು ಸರ್ಕಾರದ ಕಡೆಯಿಂದ ಸಿಗುತ್ತಿವೆ. ಇದರ ಫಲವಾಗಿ 2035ರ ವೇಳೆಗೆ ಮಂಗಳೂರು ಸಂಪೂರ್ಣ ಬದಲಾಗಲಿದ್ದು, ರಾಜ್ಯದ ಎರಡನೇ ಅತಿ ದೊಡ್ಡ ಮತ್ತು ಐಟಿ ವೃತ್ತಿಪರರ ನೆಚ್ಚಿನ ತಾಣವಾಗಿ ಬದಲಾಗಲಿದೆ.

ಇದಲ್ಲದೆ, ಮಂಗಳೂರು ಮತ್ತು ಕೇರಳದ ನಡುವಿನ ಸಾಂಸ್ಕೃತಿಕ ಸಾಮ್ಯತೆ ಮತ್ತು ರಸ್ತೆ- ರೈಲಿನ ಹತ್ತಿರದ ಸಂಪರ್ಕಗಳು ಹೆಚ್ಚಿನ ಉದ್ಯೋಗಿಗಳನ್ನು ಆಕರ್ಷಿಸಲು ಪೂರಕವಾಗಿದೆ. ಹೀಗಾಗಿ ನೆರೆಯ ಕೇರಳದ ವೃತ್ತಿಪರರಿಗೂ ಬೆಂಗಳೂರು ಬದಲು ಮಂಗಳೂರು ನೆಚ್ಚಿನ ತಾಣವಾಗಲಿದೆ.