Uchila Fire, Mangalore: ಹೊತ್ತಿ ಉರಿದ ಉಚ್ಚಿಲದ ಗುಜರಿ ಅಂಗಡಿ ; ಸಮೀಪದಲ್ಲೇ ಇತ್ತು ಎರಡು ಪೆಟ್ರೋಲ್ ಬಂಕ್, ಸಕಾಲಿಕ ನೆರವಿನಿಂದ ತಪ್ಪಿದ ಅನಾಹುತ, ಉಳ್ಳಾಲ ನಗರಕ್ಕಿಡೀ ಆವರಿಸಿದ ಕಪ್ಪು ಹೊಗೆ ! 

12-10-25 05:46 pm       Mangalore Correspondent   ಕರಾವಳಿ

ಗುಜರಿ ಅಂಗಡಿಯೊಂದರಲ್ಲಿ ಬೆಂಕಿ ಅವಘಡ ಸಂಭವಿಸಿದ ಪರಿಣಾಮ ಭಾರೀ ದಾಸ್ತಾನು ಇರಿಸಲಾಗಿದ್ದ ಗುಜರಿ ವಸ್ತುಗಳು ಸುಟ್ಟು ಕರಕಲಾಗಿದ್ದು, ಸಮೀಪದಲ್ಲೇ ಎರಡು ಪೆಟ್ರೋಲ್ ಬಂಕ್ ಗಳು ಕಾರ್ಯಾಚರಿಸುತ್ತಿದ್ದು, ಸ್ಥಳೀಯರ ಸಮಯ ಪ್ರಜ್ಞೆ ಮತ್ತು ಅಗ್ನಿಶಾಮಕ ದಳದ ಕಾರ್ಯಾಚರಣೆಯಿಂದಾಗಿ ಅದೃಷ್ಟವಶಾತ್ ಭಾರೀ ಅನಾಹುತ ತಪ್ಪಿರುವ ಘಟನೆ ರಾ.ಹೆ. 66ರ ತಲಪಾಡಿ ಸಮೀಪದ ಉಚ್ಚಿಲ ಹೆದ್ದಾರಿಯಲ್ಲಿ ಭಾನುವಾರ ಮಧ್ಯಾಹ್ನ ನಡೆದಿದೆ. 

ಉಳ್ಳಾಲ, ಅ.12 : ಗುಜರಿ ಅಂಗಡಿಯೊಂದರಲ್ಲಿ ಬೆಂಕಿ ಅವಘಡ ಸಂಭವಿಸಿದ ಪರಿಣಾಮ ಭಾರೀ ದಾಸ್ತಾನು ಇರಿಸಲಾಗಿದ್ದ ಗುಜರಿ ವಸ್ತುಗಳು ಸುಟ್ಟು ಕರಕಲಾಗಿದ್ದು, ಸಮೀಪದಲ್ಲೇ ಎರಡು ಪೆಟ್ರೋಲ್ ಬಂಕ್ ಗಳು ಕಾರ್ಯಾಚರಿಸುತ್ತಿದ್ದು, ಸ್ಥಳೀಯರ ಸಮಯ ಪ್ರಜ್ಞೆ ಮತ್ತು ಅಗ್ನಿಶಾಮಕ ದಳದ ಕಾರ್ಯಾಚರಣೆಯಿಂದಾಗಿ ಅದೃಷ್ಟವಶಾತ್ ಭಾರೀ ಅನಾಹುತ ತಪ್ಪಿರುವ ಘಟನೆ ರಾ.ಹೆ. 66ರ ತಲಪಾಡಿ ಸಮೀಪದ ಉಚ್ಚಿಲ ಹೆದ್ದಾರಿಯಲ್ಲಿ ಭಾನುವಾರ ಮಧ್ಯಾಹ್ನ ನಡೆದಿದೆ. 

ಇಂದು ಮಧ್ಯಾಹ್ನ ಉಚ್ಚಿಲದ ಅಂಡರ್ ಪಾಸ್ ಬಳಿಯ ಇಕ್ಬಾಲ್ ಹಾಗೂ ಇಬ್ರಾಹಿಂ ಅವರಿಗೆ ಸೇರಿದ ಗುಜರಿ ಅಂಗಡಿಯಲ್ಲಿ ಕಾರ್ಮಿಕರು ಕೆಲಸ ಮಾಡುತ್ತಿರುವಾಗಲೇ ಬೆಂಕಿ ಕಾಣಿಸಿಕೊಂಡಿದೆ. ಕೆಲವೇ ಹೊತ್ತಲ್ಲಿ ಭಾರೀ ಪ್ರಮಾಣದಲ್ಲಿ ಬೆಂಕಿಯ ಕೆನ್ನಾಲಿಗೆ ವ್ಯಾಪಿಸಿದ್ದು ದಟ್ಟ ಹೊಗೆಯು ಉಚ್ಚಿಲ, ತಲಪಾಡಿ, ತೊಕ್ಕೊಟ್ಟು ಪ್ರದೇಶಗಳಿಗೆ ವ್ಯಾಪಿಸಿದೆ. ಅಗ್ನಿಶಾಮಕ ದಳದ ವಾಹನವು ಸ್ಥಳಕ್ಕೆ ವಿಳಂಬವಾಗಿ ಆಗಮಿಸಿ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದೆ. ಘಟನೆಯಿಂದ‌ ಗುಜರಿ ಅಂಗಡಿಯಲ್ಲಿ ದಾಸ್ತಾನು ಇರಿಸಲಾಗಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಗುಜರಿ ವಸ್ತುಗಳು ಸುಟ್ಟು ಕರಕಲಾಗಿವೆ. ಗುಜರಿಯಲ್ಲಿ ಕೆಲಸಕ್ಕೆ ಬಳಸುವ ಗ್ಯಾಸ್ ಕಟ್ಟರ್ ನಿಂದ ಅನಾಹುತ ಸಂಭವಿಸಿರುವುದಾಗಿ ಸ್ಥಳೀಯ ಮುಖಂಡರಾದ ಸಲಾಮ್ ಉಚ್ಚಿಲ್ ಆರೋಪಿಸಿದ್ದಾರೆ.

ಸ್ಥಳೀಯ ಮುಖಂಡರಾದ ರಹೀಂ ಉಚ್ಚಿಲ್ ಮಾತನಾಡಿ ಉಚ್ಚಿಲದ ಗುಜರಿ ಅಂಗಡಿಯಿಂದ ಸಾಕಷ್ಟು ಸಮಸ್ಯೆ ಉಂಟಾಗಿದೆ. ಇಂದಿನ ಬೆಂಕಿ ಅವಘಡದಿಂದ ಊರೇ ಹೊತ್ತಿ ಉರಿಯುವ ಸ್ಥಿತಿ ಉಂಟಾಗಿತ್ತು. ಭಾರೀ ಪ್ರಮಾಣದ ಗುಜರಿಯ ಪ್ಲಾಸ್ಟಿಕ್ ಸೊತ್ತುಗಳು ಸುಟ್ಟು ಹೋದುದರಿಂದ ತೊಕ್ಕೊಟ್ಟು, ತಲಪಾಡಿ ಪ್ರದೇಶಗಳಲ್ಲಿ ದಟ್ಟ ಹೊಗೆ ಆವರಿಸಿದ್ದು ದೊಡ್ಡ ಮಟ್ಟದ ವಾಯು ಮಾಲಿನ್ಯ ಉಂಟಾಗಿದೆ. ಇದರಿಂದ ಜನಸಾಮಾನ್ಯರಿಗೆ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಎದುರಾಗಿದೆ. ಅಗ್ನಿಶಾಮಕ ದಳಕ್ಕೆ ಮಧ್ಯಾಹ್ನ 1.30 ಕ್ಕೆ ಕರೆ ಮಾಡಿದ್ದು 2.15 ಕ್ಕೆ ವಿಳಂಬವಾಗಿ ತಲುಪಿದ್ದಾರೆ. ಕಳೆದ ಆರು ವರ್ಷಗಳಿಂದ ಮಹಾಕಾಳಿ ಪಡ್ಪುವಿನ ರೈಲ್ವೆ ಅಂಡರ್ ಪಾಸ್  ಕಾಮಗಾರಿ ಕುಂಟುತ್ತಾ ಸಾಗಿರುವ ಪರಿಣಾಮ  ಪಾಂಡೇಶ್ವರದಿಂದ ಅಗ್ನಿಶಾಮಕ ವಾಹನಗಳು ಮಂಗಳೂರು ನಗರದಿಂದ ಸುತ್ತಿಕೊಂಡು ಬರುವಾಗ ವಿಳಂಬವಾಗುತ್ತಿದೆ. ಶಾಸಕ ಯು.ಟಿ.ಖಾದರ್ ಅವರು ಆದಷ್ಟು ಬೇಗನೆ‌ ಕಂಬಳಪದವಿನ ಅಗ್ನಿಶಾಮಕ ಠಾಣೆಯನ್ನ ಪೂರ್ಣಗೊಳಿಸಬೇಕಾಗಿ ಒತ್ತಾಯಿಸಿದ್ದಾರೆ.

ಘಟನಾ ಸ್ಥಳಕ್ಕೆ ಸೋಮೇಶ್ವರ ಪುರಸಭಾ ಉಪಾಧ್ಯಕ್ಷರಾದ ರವಿಶಂಕರ್ ಸೋಮೇಶ್ವರ ಭೇಟಿ ನೀಡಿದ್ದು ಪರಿಸ್ಥಿತಿ ಅವಲೋಕಿಸಿದ್ದಾರೆ. ಉಚ್ಚಿಲದ ಹೆದ್ದಾರಿಯಲ್ಲಿರುವ ಎರಡು ಪೆಟ್ರೋಲ್ ಬಂಕ್ ನ ಮುಂಭಾಗದಲ್ಲೇ ಗುಜರಿ ಅಂಗಡಿ ಕಾರ್ಯಾಚರಿಸುತ್ತಿದ್ದು ಸೋಮೇಶ್ವರ ಪುರಸಭೆಯು ಗುಜರಿ ಅಂಗಡಿ ಮಾಲೀಕರಿಗೆ ಸುರಕ್ಷತೆಯ ಬಗ್ಗೆ ನೋಟೀಸುಗಳನ್ನ ಸಾಕಷ್ಟು ಬಾರಿ ನೀಡಿತ್ತು. ಪುರಸಭೆಯ ನಿರ್ದೇಶನಗಳನ್ನ ಗುಜರಿ ಅಂಗಡಿಯವರು ಧಿಕ್ಕರಿಸಿದ್ದರಿಂದಲೇ ಅಗ್ನಿ ಅವಘಡ ಸಂಭವಿಸಿದೆ ಎಂದು ರವಿಶಂಕರ್ ಹೇಳಿದ್ದಾರೆ. ಘಟನಾ ಸ್ಥಳಕ್ಕೆ ಉಳ್ಳಾಲ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

A major fire broke out at a scrap shop near the underpass on NH-66 in Uchila, close to Talapady, on Sunday afternoon. The blaze, which started while workers were on duty, quickly spread through the scrap materials stored in large quantities, producing thick black smoke that engulfed Uchila, Talapady, and Thokkottu areas. Fortunately, a major tragedy was averted as the fire was brought under control by the fire brigade and alert locals, despite two petrol bunks being located nearby.