ಲಿವರ್ ಸಿರೋಸಿಸ್ ಕಾಯಿಲೆಗೆ ತುತ್ತಾಗಿದ್ದ ತಂದೆ ; ತನ್ನದೇ ಲಿವರ್ ದಾನ ಕೊಟ್ಟು ಅಪ್ಪನ ಜೀವ ಉಳಿಸಿದ ಪುತ್ರಿ ! ಕುಟುಂಬಕ್ಕೆ ಆಸ್ಪತ್ರೆ ಬಿಲ್ ಕಟ್ಟಲು ಪರದಾಟ

14-03-26 10:14 pm       HK News Staffer   ಕರ್ನಾಟಕ

ಲಿವರ್ ಸಿರೋಸಿಸ್ ಕಾಯಿಲೆಗೆ ತುತ್ತಾಗಿದ್ದ ತಂದೆಗೆ ಪುತ್ರಿಯೇ ತನ್ನ ಲಿವರ್ ದಾನ ಮಾಡಿರುವ ಅಪರೂಪದ ಘಟನೆ ದಾವಣಗೆರೆ ಜಿಲ್ಲೆಯ ಜಗಳೂರು ಪಟ್ಟಣದಲ್ಲಿ ನಡೆದಿದೆ.‌ ಕಂದಾಯ ಇಲಾಖೆಯ ಆಹಾರ ಶಾಖೆ ಶಿರಸ್ತೇದಾರ ಆಗಿರುವ ಅಜ್ಜಪ್ಪ ಪತ್ರಿ ಎಂಬವರಿಗೆ ಅವರ ಮಗಳು ಚಂದನಾ ತನ್ನ ಲಿವರ್ ಕೊಟ್ಟು ಅಪ್ಪನ ಜೀವ ಉಳಿಸಿದ್ದಾಳೆ.

ದಾವಣಗೆರೆ, ಮಾರ್ಚ್ 14 : ಲಿವರ್ ಸಿರೋಸಿಸ್ ಕಾಯಿಲೆಗೆ ತುತ್ತಾಗಿದ್ದ ತಂದೆಗೆ ಪುತ್ರಿಯೇ ತನ್ನ ಲಿವರ್ ದಾನ ಮಾಡಿರುವ ಅಪರೂಪದ ಘಟನೆ ದಾವಣಗೆರೆ ಜಿಲ್ಲೆಯ ಜಗಳೂರು ಪಟ್ಟಣದಲ್ಲಿ ನಡೆದಿದೆ.‌ ಕಂದಾಯ ಇಲಾಖೆಯ ಆಹಾರ ಶಾಖೆ ಶಿರಸ್ತೇದಾರ ಆಗಿರುವ ಅಜ್ಜಪ್ಪ ಪತ್ರಿ ಎಂಬವರಿಗೆ ಅವರ ಮಗಳು ಚಂದನಾ ತನ್ನ ಲಿವರ್ ಕೊಟ್ಟು ಅಪ್ಪನ ಜೀವ ಉಳಿಸಿದ್ದಾಳೆ.

ತಂದೆ ಅಜ್ಜಪ್ಪನ ವಿರೋಧದ ನಡುವೆಯೂ ಪುತ್ರಿ ಚಂದನಾ ತನ್ನ ಪ್ರೀತಿ ತೋರಿದ್ದಾಳೆ. ಇದೇ ವೇಳೆ, ಆಸ್ಪತ್ರೆಯ ಬಿಲ್ ಪಾವತಿಸಲಾಗದೆ ನಮ್ಮ ಕುಟುಂಬ ಸಂಕಷ್ಟಕ್ಕೆ ಸಿಲುಕಿದ್ದು, ಇದ್ದ ಮೂರು ಎಕರೆ ಜಮೀನು ಮಾರಾಟ ಮಾಡಿ ಆಸ್ಪತ್ರೆ ಶುಲ್ಕ ಪಾವತಿಸಿದ್ದೇವೆ. ಆದರೂ, ಇನ್ನೂ ಪಾವತಿಸಬೇಕಾದ ಮೊತ್ತ ಬಾಕಿ ಇದೆ ಎಂದು ಅಜ್ಜಪ್ಪನ ಕುಟುಂಬಸ್ಥರು ತಮ್ಮ ನೋವನ್ನು ತೋಡಿಕೊಂಡಿದ್ದಾರೆ.

ಅಜ್ಜಪ್ಪ ಅವರು ಜಗಳೂರು ಪಟ್ಟಣದ ತಾಲೂಕು ಕಚೇರಿಯಲ್ಲಿ ರಾಜಸ್ವ ನಿರೀಕ್ಷಕರಾಗಿ ಸೇವೆ ಸಲ್ಲಿಸಿದ್ದರು. ಇತ್ತೀಚೆಗೆ ಆಹಾರ ಶಾಖೆಯಲ್ಲಿ ಶಿರಸ್ತೇದಾರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಅಜ್ಜಪ್ಪ ತಮ್ಮ ಅನಾರೋಗ್ಯದ ಹಿನ್ನೆಲೆಯಲ್ಲಿ ಇತ್ತೀಚೆಗೆ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ಭೇಟಿ ನೀಡಿದ್ದರು. ಅಜ್ಜಪ್ಪನನ್ನು ತಪಾಸಣೆ ನಡೆಸಿದ ಆಸ್ಪತ್ರೆಯ ವೈದ್ಯರು, ಅವರಿಗೆ ಆಲ್ಕೋಹಾಲ್ ರಹಿತ ಲಿವರ್ ಸಿರೋಸಿಸ್ (ನಾನ್ ಆಲ್ಕೋಹಾಲ್ ಡಿಸೀಜ್) ಇರುವುದಾಗಿ ದೃಢಪಡಿಸಿದ್ದರು. ಬಳಿಕ ಲಿವರ್ ಟ್ರಾನ್ಸ್‌ಪ್ಲಾಂಟ್ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಆರೋಗ್ಯ ಸ್ಥಿತಿ ಗಂಭೀರವಾದ ಹಿನ್ನೆಲೆ ಪುತ್ರಿ ಚಂದನಾ ತನ್ನ ಲಿವರ್ (ಯಕೃತ್) ನ ಒಂದು ಭಾಗವನ್ನು ದಾನ ಮಾಡುವ ಮೂಲಕ ತಂದೆಯ ಜೀವವನ್ನು ಉಳಿಸಿದ್ದಾರೆ.

ಲಿವರ್ ಟ್ರಾನ್ಸ್‌ಪ್ಲಾಂಟ್ ಯಶಸ್ವಿ ಆಯಿತು. ಆದರೆ, ಆಸ್ಪತ್ರೆಯ ಚಿಕಿತ್ಸಾ ವೆಚ್ಚವು ಲಕ್ಷಾಂತರ ರೂಪಾಯಿ ಆಯಿತು. ಅದನ್ನು ಭರಿಸಲು ನನ್ನ ತಂದೆ ಇಲಾಖೆಯಲ್ಲಿ ಸೇವೆಗೈದ 29 ವರ್ಷದ ಸರ್ಕಾರಿ ಸಂಬಳ ಕೂಡಿಸಿ ಕಳೆದರೂ ಆಸ್ಪತ್ರೆ ವೆಚ್ಚಕ್ಕೆ ಸಾಲುತ್ತಿಲ್ಲ. ತಾನು ಕೂಡ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ಸಾಧ್ಯವಾದಷ್ಟು ಕಟ್ಟಿದ್ದೇವೆ ಎಂದು ಚಂದನಾ ಹೇಳಿದ್ದಾರೆ. ತನ್ನ ಲಿವರ್ ದಾನ ಮಾಡಿ ತಂದೆಯ ಪ್ರಾಣ ಉಳಿಸಿದ್ದಕ್ಕಾಗಿ ಸಾರ್ವಜನಿಕ ವಲಯದಲ್ಲಿ ಚಂದನಾ ಬಗ್ಗೆ ಪ್ರಶಂಸೆ ವ್ಯಕ್ತವಾಗುತ್ತಿದೆ.‌