ಶಿವಮೊಗ್ಗದಲ್ಲಿ ಸ್ಫೋಟ; ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಎಂದ ಸಿಎಂ, ಮೃತಪಟ್ಟವರಿಗೆ ಸಂತಾಪ ಸೂಚಿಸಿದ ಮೋದಿ

22-01-21 11:09 am       Headline Karnataka News Network   ಕರ್ನಾಟಕ

ಶಿವಮೊಗ್ಗದಲ್ಲಿ ಉಂಟಾದ ಡೈನಾಮೈಟ್ ಸ್ಫೋಟದಿಂದ ಸಾವನ್ನಪಿರುವ ಕಾರ್ಮಿಕರಿಗೆ ಸಂತಾಪ ಸೂಚಿಸಿರುವ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ.

ಶಿವಮೊಗ್ಗ , ಜ.22: ಶಿವಮೊಗ್ಗದಲ್ಲಿ ಉಂಟಾದ ಡೈನಾಮೈಟ್ ಸ್ಫೋಟದಿಂದ ಸಾವನ್ನಪಿರುವ ಕಾರ್ಮಿಕರಿಗೆ ಸಂತಾಪ ಸೂಚಿಸಿರುವ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ, “ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು” ಎಂದು ಹೇಳಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಯಡಿಯೂರಪ್ಪ, “ಶಿವಮೊಗ್ಗದ ಹುಣಸೋಡು ಬಳಿ ನಿನ್ನೆ ರಾತ್ರಿ ಸಂಭವಿಸಿದ ಭಾರೀ ಅನಾಹುತದಲ್ಲಿ ಅನೇಕ ಮಂದಿ ಸಾವನ್ನಪ್ಪಿದ್ದ ಸುದ್ದಿ ತೀವ್ರ ಆಘಾತಕಾರಿ ಹಾಗೂ ದುರದೃಷ್ಟಕರ. ಹಿರಿಯ ಅಧಿಕಾರಿಗಳೊಂದಿಗೆ ನಿನ್ನೆ ತಡರಾತ್ರಿಯಿಂದಲೇ ಸಂಪರ್ಕದಲ್ಲಿದ್ದು, ಅಗತ್ಯ ರಕ್ಷಣಾ ಕಾರ್ಯಾಚರಣೆಗೆ ತಂಡಗಳನ್ನು ಈಗಾಗಲೇ ರವಾನಿಸಲಾಗಿದೆ” ಎಂದು ಬರೆದುಕೊಂಡಿದ್ದಾರೆ.

“ಮೃತರ ಆತ್ಮಕ್ಕೆ ಚಿರಶಾಂತಿಯನ್ನು ಕೋರುತ್ತಾ, ಅವರ ಕುಟುಂಬದವರಲ್ಲಿ ತೀವ್ರ ಸಂತಾಪಗಳನ್ನು ವ್ಯಕ್ತಪಡಿಸುತ್ತೇನೆ. ಗಾಯಗೊಂಡವರಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಅವರೆಲ್ಲರೂ ಶೀಘ್ರದಲ್ಲೇ ಚೇತರಿಸಿಕೊಳ್ಳಲಿ ಎಂದು ಹಾರೈಸುತ್ತೇನೆ. ಈ ದುರ್ಘಟನೆಯ ಉನ್ನತ ಮಟ್ಟದ ತನಿಖೆಗೆ ಆದೇಶಿಸಲಾಗಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ನಿಶ್ಚಿತ” ಎಂದು ಸ್ಪಷ್ಟಪಡಿಸಿದ್ದಾರೆ.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, “ಜೆಲಾಟಿನ್ ಸಾಗಿಸುತ್ತಿದ್ದ ಟ್ರಕ್ ಸ್ಫೋಟದಿಂದಾಗಿ ಶಿವಮೊಗ್ಗದಲ್ಲಿ ಸಂಭವಿಸಿದ ಕಾರ್ಮಿಕರ ಸಾವಿನ ಬಗ್ಗೆ ತಿಳಿದು ತುಂಬಾ ನೋವಾಗಿದೆ. ಘಟನೆಯ ಬಗ್ಗೆ ನಿಷ್ಪಕ್ಷಪಾತ ಮತ್ತು ಕಠಿಣ ತನಿಖೆ ಪ್ರಾರಂಭಿಸಲು ಮತ್ತು ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸಬೇಕು ಎಂದು ಮುಖ್ಯಮಂತ್ರಿಯವರನ್ನು ಒತ್ತಾಯಿಸುತ್ತೇನೆ. ಸಂತ್ರಸ್ತ ಕುಟುಂಬಗಳಿಗೆ ನನ್ನ ಸಂತಾಪಗಳು” ಎಂದು ಟ್ವೀಟ್ ಮಾಡಿದ್ದಾರೆ.

ಪ್ರಧಾನ ಮಂತ್ರಿಯವರ ಕಛೇರಿ, “ಶಿವಮೊಗ್ಗದಲ್ಲಿ ಜೀವಗಳು ಬಲಿಗಿರುವುದು ನೋವು ತಂದಿದೆ. ಅವರ ಕುಟುಂಬಗಳಿಗೆ ಸಂತಾಪ ತಿಳಿಸುವೆ. ಗಾಯಗೊಂಡಿರುವವರು ಶೀಘ್ರ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತೇನೆ. ರಾಜ್ಯ ಸರ್ಕಾರವು ಸಾಧ್ಯವಾಗುವ ಎಲ್ಲ ರೀತಿಯ ಸಹಕಾರಗಳನ್ನೂ ನೀಡುತ್ತಿದೆ- ಪ್ರಧಾನಿ ಮೋದಿ” ಎಂದು ಟ್ವೀಟ್ ಮಾಡಿದೆ.

ಶಿವಮೊಗ್ಗದ ಹುಣಸೋಡಿನ ರೈಲ್ವೆ ಕ್ರಷರ್ ನಲ್ಲಿ ಉಂಟಾದ ಡೈನಾಮೈಟ್ ಸ್ಪೋಟದಿಂದಾಗಿ ಬಿಹಾರ ಮೂಲದ 8 ಕಾರ್ಮಿಕರು ಮೃತಪಟ್ಟಿದ್ದು, ಸ್ಫೋಟದ ಶಬ್ದವನ್ನು ಕೇಳಿದ ಜನರು ಭೂಕಂಪ ಉಂಟಾಗಿದೆ ಎಂದು ಬೆದರಿ ಮನೆಯಿಂದ ಹೊರಬಂದಿರುವ ಘಟನೆ ನಡೆದಿದೆ.

ಈ ಮುಂಚೆ ಶಿವಮೊಗ್ಗ ಜಿಲ್ಲೆಯಾದ್ಯಂದ ಭೂಕಂಪದ ಅನುಭವಾಗಿತ್ತು. ಈಗ ಶಿವಮೊಗ್ಗ ತಾಲೂಕಿನ ಅಬ್ಬಲಗೆರೆಯಲ್ಲಿ ರೈಲ್ವೆ ಕ್ವಾರಿಯಲ್ಲಿ ಸಂಭವಿಸಿದ ಭಾರೀ ಸ್ಪೋಟದ ಪರಿಣಾಮ ಕಂಪನ ಸಂಭವಿಸಿದೆ. 50 ಡೈನಾಮೆಟ್ ಏಕಕಾಲದಲ್ಲಿ ಸ್ಫೋಟಗೊಂಡ ಪರಿಣಾಮ ಘಟನೆ ಸಂಭವಿಸಿದೆ.

As many as eight people were killed in a mysterious blast that shook Karnataka's Shivamogga district on Thursday night and sent shockwaves in neighbouring Chikkamagaluru and Davangere districts.