ಮಲೆನಾಡನ್ನೇ ಕಂಪಿಸಿದ ಭಾರೀ ಸ್ಪೋಟ ; ಕ್ರಷರ್ ಗೆ ತಂದಿದ್ದ ಡೈನಮೈಟ್ ಲೋಡ್ ಲಾರಿಯಲ್ಲೇ ಬ್ಲಾಸ್ಟ್ !! ಹತ್ತಕ್ಕೂ ಹೆಚ್ಚು ಸಾವು

22-01-21 09:10 am       Santosh   ಕರ್ನಾಟಕ

ಶಿವಮೊಗ್ಗದ ಹುಣಸೋಡಿನಲ್ಲಿ ರೈಲ್ವೇ ಕ್ರಷರ್‌ನಲ್ಲಿ ಉಂಟಾದ ಭಾರಿ ಸ್ಫೋಟದಲ್ಲಿ ಕನಿಷ್ಠ 8 ಕಾರ್ಮಿಕರು ಮೃತಪಟ್ಟಿದ್ದಾರೆ.

ಶಿವಮೊಗ್ಗ, ಜನವರಿ 22: ಇಲ್ಲಿನ ಹುಣಸವಾಡಿಯ ಅಬ್ಬಲಗೇರಿ ಎಂಬಲ್ಲಿ ರೈಲ್ವೆ ಇಲಾಖೆಗೆ ಸೇರಿದ ಕ್ರಷರ್‌ನಲ್ಲಿ ಭಾರಿ ಸ್ಪೋಟ ಸಂಭವಿಸಿದ್ದು ಹತ್ತಕ್ಕೂ ಹೆಚ್ಚು ಕಾರ್ಮಿಕರು ಸಾವನ್ನಪ್ಪಿದ್ದಾರೆ.

ಕಲ್ಲು ಗಣಿಗಾರಿಕೆಗೆಂದು ಲಾರಿಯಲ್ಲಿ ಲೋಡ್ ಗಟ್ಟಲೆ ಡೈನಾಮೈಟ್ ಸಾಗಿಸುತ್ತಿದ್ದ ವೇಳೆ ನಿನ್ನೆ ರಾತ್ರಿ ಹತ್ತು ಗಂಟೆ ಸುಮಾರಿಗೆ ಸ್ಫೋಟಗೊಂಡಿದೆ. ಸ್ಫೋಟಗೊಂಡ ಲಾರಿಯಲ್ಲಿ ಎಷ್ಟು ಮಂದಿ ಇದ್ದರು, ಕ್ರಷರ್ ಬಳಿ ಎಷ್ಟು ಮಂದಿ ಇದ್ದರು ಎಂಬ ಸರಿಯಾದ ಮಾಹಿತಿ ಯಾರಲ್ಲೂ ಇಲ್ಲ. ಸ್ಫೋಟದ ತೀವ್ರತೆಗೆ ದೇಹ ಛಿದ್ರಗೊಂಡು ಕಿಮೀ ದೂರಕ್ಕೆ ಎಸೆಯಲ್ಪಟ್ಟಿದೆ. ಈವರೆಗೆ 8 ಜನರ ಮೃತದೇಹ ಪತ್ತೆಯಾಗಿದೆ. 

ಸ್ಫೋಟದ ಸದ್ದು ಇಡೀ ಶಿವಮೊಗ್ಗ , ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಕೇಳಿಬಂದಿದ್ದು ಭೂಕಂಪ ಆಗಿದೆ ಎಂದು ಜನ ಹೆದರಿ ಮನೆಯಿಂದ ಹೊರಗೆ ಓಡಿಬಂದಿದ್ದರು. ತೀರ್ಥಹಳ್ಳಿ, ಕೊಪ್ಪ , ಕಡೂರು ಹೀಗೆ ಮಲೆನಾಡಿನಾದ್ಯಂತ ನಿನ್ನೆ ರಾತ್ರಿ ಈ ಭಾರೀ ಸದ್ದು ಆತಂಕಕ್ಕೆ ಕಾರಣವಾಗಿತ್ತು. 

ರೈಲ್ವೆ ಕ್ರಷರ್‌ನಲ್ಲಿ ಕಲ್ಲು ಗಣಿಗಾರಿಕೆಗೆಂದು ಲಾರಿಯಲ್ಲಿ ತರಲಾಗಿದ್ದ ಡೈನಮೈಟ್ ಸ್ಪೋಟಕ ಅನ್ ಲೋಡಿಂಗ್ ವೇಳೆ ಸ್ಫೋಟಗೊಂಡಿದೆ ಎನ್ನಲಾಗುತ್ತಿದೆ.‌ ಘಟನೆಯಲ್ಲಿ ಸಾವನ್ನಪ್ಪಿದವರ ಸಂಖ್ಯೆ ಕ್ಷಣ ಕ್ಷಣಕ್ಕೂ ಹೆಚ್ಚುತ್ತಿದೆ.‌ ಮೃತದೇಹಗಳು ಛಿದ್ರವಾಗಿ ಬಿದ್ದಿದ್ದು ಗುರುತು ಸಿಗದಂತಾಗಿದೆ. 

ಸ್ಪೋಟ ನಡೆದ ಸ್ಥಳಕ್ಕೆ ರಾತ್ರಿಯೇ ಬಾಂಬ್ ಸ್ಕ್ವಾಡ್ ಆಗಮಿಸಿದೆ. ಸ್ಫೋಟದ ಸಾಧ್ಯತೆ ಇರುವ ಡೈನಮೈಟ್ ಪತ್ತೆಗಾಗಿ ಮಂಗಳೂರು ಮತ್ತು ಬೆಂಗಳೂರಿನಿಂದ ಎರಡು ಬಾಂಬ್ ಸ್ಕ್ವಾಡ್ ಆಗಮಿಸಿದೆ. ಸದ್ಯ ಘಟನಾ ಸ್ಥಳದ ಸುತ್ತ ಬ್ಯಾರಿಕೇಡ್ ಹಾಕಿ ನಿಷೇಧಿತ ಪ್ರದೇಶವೆಂದು ಗುರುತಿಸಲಾಗಿದೆ. ಸ್ಥಳಕ್ಕೆ ಯಾರನ್ನೂ ಒಳ ಬರದಂತೆ ನಿರ್ಬಂಧ ಹೇರಿದ್ದು ಪೊಲೀಸರು ಸರ್ಪಗಾವಲು ಹಾಕಿದ್ದಾರೆ.

Eight people were killed in an explosion at a stone mining quarry in at Hunasondi near village Abbalagere of Shivamogga district.