ಚಾರ್ಮಾಡಿ ಘಾಟಿಯಲ್ಲಿ ರಸ್ತೆಗೆ ಅಡ್ಡ ನಿಂತ ಒಂಟಿ ಸಲಗ : ಕಿಲೋ ಮೀಟರ್‌ಗಟ್ಟಲೇ ಟ್ರಾಫಿಕ್‌ ಜಾಮ್‌!

10-01-26 03:00 pm       HK News Desk   ಕರ್ನಾಟಕ

ಇತ್ತೀಚಿಗೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟ್ ಅರಣ್ಯ ಪ್ರದೇಶದಲ್ಲಿ ಹಾಗೂ ಚಾರ್ಮಾಡಿ ಘಾಟ್​ನ ಪ್ರಮುಖ ರಾಜ್ಯ ಹೆದ್ದಾರಿಯಲ್ಲಿ ಸಂಜೆ ವೇಳೆ ಹಾಗೂ ರಾತ್ರಿ ವೇಳೆ ಕಾಡಾನೆಯ...

ಚಿಕ್ಕಮಗಳೂರು, ಜ 10 : ಇತ್ತೀಚಿಗೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟ್ ಅರಣ್ಯ ಪ್ರದೇಶದಲ್ಲಿ ಹಾಗೂ ಚಾರ್ಮಾಡಿ ಘಾಟ್​ನ ಪ್ರಮುಖ ರಾಜ್ಯ ಹೆದ್ದಾರಿಯಲ್ಲಿ ಸಂಜೆ ವೇಳೆ ಹಾಗೂ ರಾತ್ರಿ ವೇಳೆ ಕಾಡಾನೆಯೊಂದು ಕಾಣಿಸಿಕೊಂಡು ಜನರಲ್ಲಿ ಹಾಗೂ ವಾಹನ ಸವಾರರಲ್ಲಿ ಭಯ ಹಾಗೂ ಭೀತಿಯನ್ನು ಉಂಟು ಮಾಡಿತ್ತು. ಇದೀಗ ಮತ್ತೆ ಅದೇ ರಸ್ತೆಯಲ್ಲಿ ಕಾಡಾನೆಯೊಂದು ರಸ್ತೆಗೆ ಅಡ್ಡವಾಗಿ ಬಂದು ನಿಂತಿದ್ದರಿಂದಿ ದಾರಿಹೋಕರು ಭಯಭೀತರಾಗಿದ್ದಾರೆ.

ಸುಮಾರು ಎರಡು ತಿಂಗಳ ನಂತರ ಈ ಕಾಡಾನೆ ಮತ್ತೆ ಈ ರಸ್ತೆಯಲ್ಲಿ ಕಾಣಿಸಿಕೊಂಡಿದ್ದು, ರಾತ್ರಿ ವೇಳೆ ರಸ್ತೆ ಮಧ್ಯೆ ಬಂದು ನಿಲ್ಲುತ್ತಿದೆ. ಚಾರ್ಮಾಡಿ ಘಾಟಿಯ 2ನೇ ಹಾಗೂ 3ನೇ ತಿರುವಿನ ರಸ್ತೆ ಮೇಲೆ ಕಾಡಾನೆ ಪ್ರತ್ಯಕ್ಷವಾಗಿ ಭಾರಿ ಗಾತ್ರದ ಮರವೊಂದನ್ನು ಮುರಿದು ತನ್ನ ಖದರ್ ತೋರಿಸಿದೆ.

ಇದರಿಂದಾಗಿ ಸುಮಾರು ಒಂದು ತಾಸಿಗೂ ಅಧಿಕ ಕಾಲ ಟ್ರಾಫಿಕ್ ಜಾಮ್ ಉಂಟಾಗಿತ್ತು. ಇದರಿಂದಾಗಿ ವಾಹನ ಸವಾರರಲ್ಲಿ ಕ್ಷಣ ಕಾಲ ಆತಂಕ ಮನೆ ಮಾಡಿತ್ತು. ಮೊಬೈಲ್ ನೆಟ್ವರ್ಕ್ ಇಲ್ಲದೆ ಮಾಹಿತಿ ನೀಡಲು ಸಾರ್ವಜನಿಕರು ಪರದಾಡಬೇಕಾಯಿತು.

ಚಿಕ್ಕಮಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಗೆ ಸಂಪರ್ಕ ಕಲ್ಪಿಸುವ ಚಾರ್ಮಾಡಿ ಘಾಟ್​​ನಲ್ಲಿ ಪದೇ ಪದೆ ಆನೆ ಕಾಣಿಸಿಕೊಳ್ಳುತ್ತಿದೆ. ಪ್ರತಿನಿತ್ಯ ಈ ರಸ್ತೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ವಾಹನಗಳು, ಆಂಬುಲೆನ್ಸ್​ಗಳು, ಸರ್ಕಾರಿ ಬಸ್​​ಗಳು ಸಂಚರಿಸುತ್ತವೆ. ಹೀಗೆ ಪ್ರಯಾಣಿಸುವಾಗ ಒಮ್ಮಿಂದೊಮ್ಮೆಲೆ ಕಾಡಾನೆ ರಸ್ತೆಯಲ್ಲಿ ನಿಂತಿದ್ದರೆ ಪ್ರಯಾಣಿಕರು ಭಯಭೀತರಾಗುತ್ತಾರೆ.

ಒಂದು ವೇಳೆ ಈ ಕಾಡಾನೆ ತಿರುಗಿ ಬಿದ್ದರೆ ಪ್ರಯಾಣಿಕರು ಪ್ರಾಣಾಪಾಯದಿಂದ ತಪ್ಪಿಸಿಕೊಳ್ಳುವುದೇ ದುಸ್ತರವಾಗಲಿದೆ. ಅರಣ್ಯ ಇಲಾಖೆ ಕೂಡಲೇ ಈ ಕುರಿತು ಗಂಭೀರವಾಗಿ ಯೋಚಿಸಿ ಈ ಆನೆಯನ್ನು ಬೇರೆ ಕಡೆ ಸ್ಥಳಾಂತರ ಮಾಡಬೇಕು ಎಂದು ಸ್ಥಳೀಯರು ಒತ್ತಾಯಿಸುತ್ತಿದ್ದಾರೆ.

ಇತ್ತೀಚಿಗೆ ಚಿಕ್ಕಮಗಳೂರು ಜಿಲ್ಲೆಯ ಮುತ್ತೋಡಿ ಭದ್ರಾ ಅಭಯಾರಣ್ಯ ವ್ಯಾಪ್ತಿಯಲ್ಲಿ ಕಾಡಾನೆ ಹಿಂಡೊಂದು ಏಕಕಾಲಕ್ಕೆ ರಸ್ತೆ ದಾಟಿದ್ದವು. ಈ ಅಪರೂಪದ ದೃಶ್ಯವನ್ನು ಸ್ಥಳೀಯರು ಮೊಬೈಲ್​ನಲ್ಲಿ ಸೆರೆ ಹಿಡಿದಿದ್ದರು. ಸುಮಾರು 25ಕ್ಕೂ ಹೆಚ್ಚು ಕಾಡಾನೆಗಳು ಮುತ್ತೋಡಿ ರಸ್ತೆಯನ್ನು ದಾಟುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿತ್ತು. ಗಜಪಡೆ ರಸ್ತೆ ದಾಟುತ್ತಿರುವುದನ್ನು ಕಂಡ ವಾಹನ ಸವಾರರು, ಅಪರೂಪದ ದೃಶ್ಯವನ್ನು ರೆಕಾರ್ಡ್​ ಮಾಡಿದ್ದರು.

ಇತ್ತೀಚೆಗೆ ಅಭಯಾರಣ್ಯದಲ್ಲಿ ಆನೆಗಳ ಸಂಖ್ಯೆ ಹೆಚ್ಚಳವಾಗಿತ್ತು. ಹೀಗಾಗಿ, ಕಾಡಂಚಿನ ಗ್ರಾಮಗಳತ್ತ ಗಜಪಡೆ ದಾಂಗುಡಿ ಇಡುತ್ತಿವೆ. ಒಮ್ಮೆಲೇ ಇಷ್ಟೊಂದು ಆನೆಗಳನ್ನು ಕಂಡು ಸುತ್ತಮುತ್ತಲಿನ ಗ್ರಾಮಸ್ಥರಲ್ಲಿ ಆತಂಕ ನಿರ್ಮಾಣವಾಗಿತ್ತು. ತೋಟ, ಗದ್ದೆ ಹಾಗೂ ಮನೆಗಳ ಮೇಲೆ ಕಾಡಾನೆಗಳ ಹಿಂಡು ದಾಳಿ ಮಾಡುವ ಬಗ್ಗೆ ಜನರು ಭಯಭೀತರಾಗಿದ್ದರು. ಈ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳು ಕ್ರಮ ವಹಿಸಲಿ ಎಂದು ಆಗ್ರಹಿಸಿದ್ದರು.

Panic gripped commuters after a lone wild elephant stood blocking the main road in the Charmadi Ghat forest stretch of Chikkamagaluru district, causing a traffic jam stretching for kilometres. The elephant reportedly appeared near the second and third hairpin bends of the ghat road during night hours, even breaking a large tree and displaying aggressive behaviour.