ಅಧಿವೇಶನ ಮಧ್ಯೆಯೂ ಡಿಕೆಶಿ ಆಪ್ತ ಶಾಸಕರು, ಸಚಿವರ ಡಿನ್ನರ್ ಮೀಟಿಂಗ್ ; ಖಾಸಗಿ ರೆಸಾರ್ಟ್ ನಲ್ಲಿ 40ಕ್ಕೂ ಹೆಚ್ಚು ಶಾಸಕರ ಸಭೆ, ಯತೀಂದ್ರ ಹೇಳಿಕೆ ಬಗ್ಗೆ ಆಕ್ರೋಶ, ಮತ್ತೆ ಕಾವೇರಿಸಿದ ನಾಯಕತ್ವ ಚರ್ಚೆ 

12-12-25 03:15 pm       Bangalore Correspondent   ಕರ್ನಾಟಕ

ಬೆಳಗಾವಿ ಅಧಿವೇಶನ ಮಧ್ಯೆಯೂ ಡಿಕೆಶಿ ಮತ್ತವರ ಪಟಾಲಂ ನಾಯಕತ್ವ ಬದಲಾವಣೆ ವಿಚಾರದಲ್ಲಿ ಶಾಸಕರನ್ನು ಸೇರಿಸಿ ಅಭಿಪ್ರಾಯ ಕ್ರೋಢೀಕರಿಸುವ ಯತ್ನದಲ್ಲಿ ತೊಡಗಿದೆ. ಸಿಎಂ ಪುತ್ರ ಯತೀಂದ್ರ ಸಿದ್ದರಾಮಯ್ಯ ಹೇಳಿಕೆ ಕೆಲದಿನಗಳಿಂದ ತಣ್ಣಗಾಗಿದ್ದ ರಾಜಕೀಯ ಬಿಸಿಯನ್ನು ಮತ್ತೆ ಚುರುಕಾಗಿಸಿದೆ‌.

ಬೆಂಗಳೂರು, ಡಿ.12 : ಬೆಳಗಾವಿ ಅಧಿವೇಶನ ಮಧ್ಯೆಯೂ ಡಿಕೆಶಿ ಮತ್ತವರ ಪಟಾಲಂ ನಾಯಕತ್ವ ಬದಲಾವಣೆ ವಿಚಾರದಲ್ಲಿ ಶಾಸಕರನ್ನು ಸೇರಿಸಿ ಅಭಿಪ್ರಾಯ ಕ್ರೋಢೀಕರಿಸುವ ಯತ್ನದಲ್ಲಿ ತೊಡಗಿದೆ. ಸಿಎಂ ಪುತ್ರ ಯತೀಂದ್ರ ಸಿದ್ದರಾಮಯ್ಯ ಹೇಳಿಕೆ ಕೆಲದಿನಗಳಿಂದ ತಣ್ಣಗಾಗಿದ್ದ ರಾಜಕೀಯ ಬಿಸಿಯನ್ನು ಮತ್ತೆ ಚುರುಕಾಗಿಸಿದೆ‌. ಡಿಸಿಎಂ ಡಿಕೆ ಶಿವಕುಮಾರ್‌ ತಮ್ಮ ಆಪ್ತರು ಮತ್ತು ಕೆಲವು ಸಚಿವರ ಜೊತೆ ಖಾಸಗಿ ರೆಸಾರ್ಟ್ ನಲ್ಲಿ ಗುರುವಾರ ರಾತ್ರಿ ಡಿನ್ನರ್ ಸಭೆ ನಡೆಸಿದ್ದಾರೆ. 

ಬುಧವಾರ ರಾತ್ರಿ ಮಾಜಿ ಶಾಸಕ ಫಿರೋಜ್ ಸೇಠ್ ಅವರ ನಿವಾಸದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಆಪ್ತ ವಲಯದ ಸಚಿವರು ಮತ್ತು ಶಾಸಕರು ಭಾಗವಹಿಸಿ ಡಿನ್ನರ್ ಸಭೆ ನಡೆಸಿದ್ದರು. ಇದರ ಬೆನ್ನಲ್ಲೇ ನಿನ್ನೆ ಗುರುವಾರ ರಾತ್ರಿ ಆಪ್ತ ಗಣಿ ಉದ್ಯಮಿ ದೊಡ್ಡಣ್ಣವರ್ ಅವರ ಫಾರ್ಮ್‌ ಹೌಸ್‌ನಲ್ಲಿ ತಮ್ಮ ಆಪ್ತ ವಲಯದ ಸಚಿವರು, ಶಾಸಕರ ಜೊತೆ ಡಿಕೆಶಿ ಸಭೆ ನಡೆಸಿದ್ದಾರೆ. ಡಿಕೆಶಿ ಸಹೋದರ ಡಿಕೆ ಸುರೇಶ್‌ ಅವರು ಈ ಡಿನ್ನರ್‌ ವ್ಯವಸ್ಥೆ ಮಾಡಿದ್ದರು ಎನ್ನಲಾಗಿದೆ. 

ಡಿನ್ನರ್‌ ಸಭೆಯಲ್ಲಿ ಐದಕ್ಕೂ ಹೆಚ್ಚು ಸಚಿವರು, 30ಕ್ಕೂ ಹೆಚ್ಚು ಶಾಸಕರು ಸೇರಿದಂತೆ ಡಿಕೆಶಿ ಆಪ್ತರು ಭಾಗಿಯಾಗಿದ್ದರು. ಸಿಎಂ ಬಣದವರಿಗೆ ಆಹ್ವಾನ ನೀಡದೇ ಡಿಕೆಶಿ ಆಪ್ತರು ಮಾತ್ರ ಸಭೆಯಲ್ಲಿ ಪಾಲ್ಗೊಂಡಿದ್ದು ವಿಶೇಷ. ಸಚಿವರಾದ ಎಂ.ಸಿ ಸುಧಾಕರ್, ಮಂಕಾಳ ವೈದ್ಯ, ಕೆ.ಎಚ್. ಮುನಿಯಪ್ಪ, ಶರಣಪ್ರಕಾಶ್ ಪಾಟೀಲ್, ಡಿ.ಕೆ.ಸುರೇಶ್, ಎಂಎಲ್‌ಸಿ ಚನ್ನರಾಜ್ ಹಟ್ಟಿಹೊಳಿ, ಶಾಸಕರಾದ ಬಾಬಾಸಾಹೇಬ್ ಪಾಟೀಲ್, ಶಿವರಾಂ ಹೆಬ್ಬಾರ್, ಸಿ.ಪಿ ಯೋಗೀಶ್ವರ್, ಶ್ರೀನಿವಾಸ್ ಮಾನೆ, ಎನ್‌.ಎ ಹ್ಯಾರೀಸ್, ಇಕ್ಬಾಲ್ ಹುಸೇನ್, ಗಣೇಶ್ ಹುಕ್ಕೇರಿ, ಎಸ್.ಟಿ ಸೋಮಶೇಖರ್, ಎಂಎಲ್‌ಸಿ ರವಿ, ಸೇರಿ 40ಕ್ಕೂ ಹೆಚ್ಚು ಮಂದಿ ಭಾಗಿಯಾಗಿದ್ದರು ಎಂದು ತಿಳಿದುಬಂದಿದೆ.

ಪ್ರಮುಖವಾಗಿ ಸಿಎಂ ಪುತ್ರ ಯತೀಂದ್ರ ನೀಡಿರುವ ಪೂರ್ಣಾವಧಿ ಸಿಎಂ ಹೇಳಿಕೆ ಕುರಿತಾಗಿಯೇ ಡಿನ್ನರ್ ಮೀಟಿಂಗ್‌ನಲ್ಲಿ ಹೆಚ್ಚು ಚರ್ಚೆಯಾಗಿದೆ. ಯತೀಂದ್ರಗೆ ನೋಟೀಸ್ ಕೊಡಿ ಎಂದು ಕೆಲ ಶಾಸಕರು ಡಿಕೆಶಿಗೆ ಒತ್ತಡ ಹಾಕಿದ್ದಾರೆ. ಈ ವೇಳೆ ಎಲ್ಲದಕ್ಕೂ ಸರಿಯಾಗಿ ಉತ್ತರ ಕೊಡುತ್ತೇನೆ, ಕಾಯಿರಿ ಎಂದು ಡಿಕೆಶಿ ತಿಳಿಸಿದ್ದಾರೆ ಎನ್ನಲಾಗಿದೆ. ಇದೆಲ್ಲದರ ಮಧ್ಯೆ ಮುಂದಿನ ವಾರ ಡಿಸಿಎಂ ಡಿಕೆಶಿ ಅವರನ್ನು ದೆಹಲಿಗೆ ಹೈಕಮಾಂಡ್ ಕರೆದಿದೆ ಎಂದು ಹೇಳಲಾಗುತ್ತಿದೆ. ಸಿಎಂ ಬದಲಾವಣೆ ವಿಚಾರ ಡಿನ್ನರ್ ಮೀಟಿಂಗ್‌ನಲ್ಲಿ ಚರ್ಚೆಯಾಗಿದ್ದು, ಅಗತ್ಯ ಬಿದ್ದರೆ ಹೈಕಮಾಂಡ್ ಭೇಟಿಗೆ ಹೋಗುತ್ತೇವೆ ಎಂದು ಕೆಲವು ಶಾಸಕರು ಡಿಕೆ ಶಿವಕುಮಾರ್‌ಗೆ ಆಶ್ವಾಸನೆ ನೀಡಿದ್ದಾರೆ.

Even in the middle of the Belagavi Assembly session, Deputy Chief Minister D.K. Shivakumar and his close camp have intensified efforts to consolidate support on the issue of leadership change. The recent remarks of Chief Minister Siddaramaiah’s son Dr. Yathindra Siddaramaiah have once again heated up the political atmosphere.