ಧರ್ಮಸ್ಥಳ ಪ್ರಕರಣದಲ್ಲಿ ಶವದ ಕುರುಹು ಸಿಗದಿದ್ದರೆ ದೂರುದಾರನ ವಿರುದ್ಧ ಕ್ರಮ ; ಸಚಿವ ರಾಮಲಿಂಗಾರೆಡ್ಡಿ 

15-08-25 07:15 pm       Bangalore Correspondent   ಕರ್ನಾಟಕ

ಧರ್ಮಸ್ಥಳ ಪ್ರಕರಣದಲ್ಲಿ ದೂರುದಾರ ಹೇಳಿದಂತೆ, ಶವ ಹೂತಿಟ್ಟ ಸ್ಥಳದಲ್ಲಿ ಯಾವುದೇ ಕುರುಹು ಸಿಗದಿದ್ದಲ್ಲಿ ಆತನ ವಿರುದ್ಧ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎಂದು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ. 

ಬೆಂಗಳೂರು, ಆ.16 : ಧರ್ಮಸ್ಥಳ ಪ್ರಕರಣದಲ್ಲಿ ದೂರುದಾರ ಹೇಳಿದಂತೆ, ಶವ ಹೂತಿಟ್ಟ ಸ್ಥಳದಲ್ಲಿ ಯಾವುದೇ ಕುರುಹು ಸಿಗದಿದ್ದಲ್ಲಿ ಆತನ ವಿರುದ್ಧ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎಂದು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ. 

ಎಸ್‌ಐಟಿ ತನಿಖೆ ಮಾಡಲ್ಲ ಅನ್ನುತ್ತಿದ್ದ ಸಿದ್ದರಾಮಯ್ಯ ಅವರಿಗೆ ಎಸ್‌ಐಟಿ ರಚಿಸುವಂತೆ ಯಾವ ಶಕ್ತಿಗಳು ಒತ್ತಡ ಹೇರಿದ್ದು ಎಂಬುದನ್ನು ಸದನದಲ್ಲಿ ಬಹಿರಂಗಪಡಿಸಬೇಕು‌. ಸರ್ಕಾರ ಧರ್ಮಸ್ಥಳ ತನಿಖೆಯ ಮಧ್ಯಂತರ ವರದಿಯನ್ನು ನೀಡಬೇಕು ಎಂದು ವಿಧಾನಸಭೆ ಕಲಾಪದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ವಿಪಕ್ಷ ನಾಯಕ ಆರ್‌. ಅಶೋಕ್‌ ಆಗ್ರಹದ ವಿಚಾರದಲ್ಲಿ ರಾಮಲಿಂಗಾ ರೆಡ್ಡಿ ಪ್ರತಿಕ್ರಿಯೆ ನೀಡಿದ್ದಾರೆ. 

ನಾವು ಕೂಡ ಮಂಜುನಾಥನ ಭಕ್ತರು‌. ಬಿಜೆಪಿಯವರಿಗಿಂತ ಕಾಂಗ್ರೆಸಿಗರೇ ಹೆಚ್ಚು ಧರ್ಮಸ್ಥಳಕ್ಕೆ ಹೋಗುತ್ತಾರೆ. ಈ ಬಗ್ಗೆ ಸ್ಪಷ್ಟನೆ ಸಿಕ್ಕರೆ ಅಪಪ್ರಚಾರ ತಪ್ಪುತ್ತದೆ. ಯೂಟ್ಯೂಬರ್‌ಗಳು ತಮಗೆ ತೋಚಿದಂತೆ ಮಾತನಾಡುತ್ತಾರೆ. ಈ ವಿಚಾರದಲ್ಲಿ ಬಿಜೆಪಿಯವರು ರಾಜಕೀಯ ಮಾಡುವುದು ಸರಿಯಲ್ಲ. ಧರ್ಮಸ್ಥಳ ಮತ್ತು ಧರ್ಮಾಧಿಕಾರಿಗಳನ್ನು ಈ ವಿಷಯದಲ್ಲಿ ಎಳೆದು ತರಬಾರದು. ಶವ ಹೂತಿಟ್ಟ ಸ್ಥಳದಲ್ಲಿ ಯಾವುದೇ ಕುರುಹು ಸಿಗದಿದ್ದರೆ ದೂರುದಾರ ವ್ಯಕ್ತಿಯ ವಿರುದ್ಧ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎಂದು ಹೇಳಿದರು.‌

ಮುಜರಾಯಿ ವ್ಯಾಪ್ತಿಯ ದೇವಸ್ಥಾನಗಳಲ್ಲಿ ಪ್ಲಾಸ್ಟಿಕ್ ಬ್ಯಾನ್‌ ಮಾಡಲಾಗಿದೆ. ದೇವಸ್ಥಾನದ ಆವರಣದ ಒಳಗೆ ಮತ್ತು ಹೊರಭಾಗದಲ್ಲಿ ಪ್ಲಾಸ್ಟಿಕ್ ಬಳಕೆ ಮಾಡಬಾರದು. ರಾಜ್ಯ ಸರ್ಕಾರ‌ ಹಾಗೂ ಜಿಲ್ಲಾಧಿಕಾರಿ ಇದನ್ನು ಜಾರಿ ಮಾಡಬೇಕು. ಸ್ವಚ್ಛತೆ ಹಾಗೂ ಪರಿಸರವನ್ನ ಗಮನದಲ್ಲಿರಿಸಿ ಬ್ಯಾನ್ ಮಾಡಿದ್ದೇವೆ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ.

Endowments Minister Ramalinga Reddy stated that in the Dharmasthala case, if no trace of a buried body is found at the location indicated by the complainant, action will have to be taken against him.