ನಿಯಂತ್ರಣ ತಪ್ಪಿ ನಿಲ್ದಾಣದ ಪ್ಲಾಟ್​ ಫಾರಂಗೆ ನುಗ್ಗಿದ ಧರ್ಮಸ್ಥಳದ ಬಸ್​, ಪ್ರಯಾಣಿಕನ ಕೈ ಕಟ್ ; ಡ್ರೈವರ್ ವಿರುದ್ಧ ಪ್ರಯಾಣಿಕರ ಆಕ್ರೋಶ

15-06-26 08:37 pm       HK News Staffer   ಕ್ರೈಂ

ಚಾಲಕನ ನಿಯಂತ್ರಣ ತಪ್ಪಿದ ಸಾರಿಗೆ ಬಸ್​​ ಪ್ರಯಾಣಿಕನಿಗೆ ಡಿಕ್ಕಿಯಾದ ಪರಿಣಾಮ ಆತನ ಕೈ ಕಟ್​ ಆಗಿರುವ ಘಟನೆ ಚನ್ನಪಟ್ಟಣದ ಸಾರಿಗೆ ಬಸ್​ ನಿಲ್ದಾಣದಲ್ಲಿ ನಡೆದಿದೆ.

ಹಾಸನ, ಜೂನ್ 15: ಚಾಲಕನ ನಿಯಂತ್ರಣ ತಪ್ಪಿದ ಸಾರಿಗೆ ಬಸ್​​ ಪ್ರಯಾಣಿಕನಿಗೆ ಡಿಕ್ಕಿಯಾದ ಪರಿಣಾಮ ಆತನ ಕೈ ಕಟ್​ ಆಗಿರುವ ಘಟನೆ ಚನ್ನಪಟ್ಟಣದ ಸಾರಿಗೆ ಬಸ್​ ನಿಲ್ದಾಣದಲ್ಲಿ ನಡೆದಿದೆ.

ಬೆಂಗಳೂರಿನಿಂದ ಧರ್ಮಸ್ಥಳದ ಕಡೆಗೆ ಹೋಗಬೇಕಿದ್ದ ಬಸ್​ ತನ್ನ ನಿಲ್ದಾಣದ ಪ್ಲಾಟ್​ ಫಾರಂಗೆ ಬರುವ ವೇಳೆ ನಿಯಂತ್ರಣ ತಪ್ಪಿ ನಿಲ್ದಾಣದ ಒಳಗೆ ಬಂದು ಗುದ್ದಿದೆ. ಈ ವೇಳೆ ಅಲ್ಲೇ ನಿಂತಿದ್ದ ಪ್ರಯಾಣಿಕನಿಗೆ ಗಂಭೀರ ಗಾಯಗಳಾಗಿದ್ದು, ಅವರ ಸಂಪೂರ್ಣ ಎಡಗೈ ಕಟ್​ ಆಗಿದೆ. ಗಾಯಾಳುವನ್ನು ಹಾಸನದ ಜಯಚಾಮರಾಜೇಂದ್ರ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಗಾಯಾಳುವನ್ನು ಚಿಕ್ಕಮಗಳೂರು ಮೂಲದ ಮಂಜುನಾಥ್ ಎಂದು ಗುರುತಿಸಲಾಗಿದೆ. ಅವರು ಚಿಕ್ಕಮಗಳೂರಿಗೆ ತೆರಳಲು ಬಸ್​ ನಿಲ್ದಾಣದಲ್ಲಿ ಕಾಯುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ.

ಮಾಹಿತಿಯ ಪ್ರಕಾರ ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ತೆರಳುತ್ತಿದ್ದ KA-21 F-0151 ಸಂಖ್ಯೆಯ ಪುತ್ತೂರು ವಿಭಾಗದ ಸಾರಿಗೆ ಬಸ್‌ನ್ನು ಚಾಲಕ ಅತಿವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದಿದ್ದಾನೆ ಎಂಬ ಆರೋಪ ಕೇಳಿಬಂದಿದೆ.

ಘಟನೆಯ ಬಳಿಕ ಬಸ್​ ಚಾಲಕನ ವಿರುದ್ಧ ಪ್ರಯಾಣಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಬೆಂಗಳೂರಿನಿಂದ ಕೂಡ ಅತಿ ವೇಗ ಮತ್ತು ಅಜಾಗರೂಕತೆಯಿಂದಲೇ ಚಾಲನೆ ಮಾಡಿಕೊಂಡು ಬರುತ್ತಿದ್ದರು ಎಂಬುದನ್ನು ಸ್ಥಳಕ್ಕೆ ಬಂದ ಪೊಲೀಸರ ಸಮ್ಮುಖದಲ್ಲಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರು ಆರೋಪ ಮಾಡಿದ್ದಾರೆ. ಘಟನೆಯ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸರಿಯಾಗಿದ್ದು, ಇದರ ಆಧಾರದ ಮೇಲೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ.

ಸ್ಥಳಕ್ಕೆ ಹಾಸನದ ಕೆಆರ್ ಪುರಂ ಬಡಾವಣೆ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ರಾತ್ರಿ ವೇಳೆ ಸಂಭವಿಸಿದ ಪರಿಣಾಮ ಪ್ರಯಾಣಿಕರು ಕಡಿಮೆ ಸಂಖ್ಯೆಯಲ್ಲಿದ್ದರಿಂದ ಉಳಿದ ಮೂರು ನಾಲ್ಕು ಮಂದಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.