ಕೋಟೆಕಾರು ದರೋಡೆ ಪ್ರಕರಣದಲ್ಲಿ ಮತ್ತೊಬ್ಬ ಆರೋಪಿ ಬಂಧನ ; ತಿಂಗಳ ಬಳಿಕ ಮಾಹಿತಿ ಕೊಟ್ಟ ಉಳ್ಳಾಲ ಪೊಲೀಸರು, ಒಂದೂವರೆ ವರ್ಷದ ಬಳಿಕ ಮುಂಬೈನಲ್ಲಿ ಅರೆಸ್ಟ್ ಆಗಿದ್ದ ಕುಖ್ಯಾತ ಆರೋಪಿ !

07-06-26 03:08 pm       HK News Desk   ಕ್ರೈಂ

ಕೋಟೆಕಾರು ವ್ಯವಸಾಯ ಸೇವಾ ಸಹಕಾರ ಬ್ಯಾಂಕ್ ನಲ್ಲಿ ನಡೆದ ದರೋಡೆ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಮತ್ತೊಬ್ಬ ಆರೋಪಿಯನ್ನು ಉಳ್ಳಾಲ ಪೊಲೀಸರು ಕೊನೆಗೂ ಬಂಧಿಸಿದ್ದಾರೆ.

ಮಂಗಳೂರು, ಜೂನ್ 6: ಕೋಟೆಕಾರು ವ್ಯವಸಾಯ ಸೇವಾ ಸಹಕಾರ ಬ್ಯಾಂಕ್ ನಲ್ಲಿ ನಡೆದ ದರೋಡೆ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಮತ್ತೊಬ್ಬ ಆರೋಪಿಯನ್ನು ಉಳ್ಳಾಲ ಪೊಲೀಸರು ಕೊನೆಗೂ ಬಂಧಿಸಿದ್ದಾರೆ. 

ಉತ್ತರ ಪ್ರದೇಶ ಮೂಲದ ಧರ್ಮ ಬೀರ್ ಬೀರೇಂದ್ರ ಸಿಂಗ್ @ ಧರ್ಮವೀರ್ ಸಿಂಗ್ ಎಂಬಾತ ಬಂಧಿತ. ಆರೋಪಿಗಳ ಪತ್ತೆಗಾಗಿ ವಿಶೇಷ ತಂಡವನ್ನು ರಚಿಸಲಾಗಿತ್ತು. 2025ರ ಜನವರಿ 17ರಂದು ಕೆ.ಸಿ ರೋಡ್ ನಲ್ಲಿರುವ ಕೋಟೆಕಾರು ವ್ಯವಸಾಯ ಸಹಕಾರಿ ಬ್ಯಾಂಕಿನಲ್ಲಿ ಹಾಡಹಗಲೇ ದುಷ್ಕರ್ಮಿಗಳು ನುಗ್ಗಿ 20 ಕೇಜಿ ಚಿನ್ನಾಭರಣ ದರೋಡೆಗೈದಿದ್ದರು.‌ ಮುಂಬೈ ಮೂಲದ ಗ್ಯಾಂಗ್ ದರೋಡೆ ನಡೆಸಿದ್ದು ತನಿಖೆಯಲ್ಲಿ ಪತ್ತೆಯಾಗಿತ್ತು.‌ ಹತ್ತಕ್ಕೂ ಹೆಚ್ಚು ಮಂದಿ ಆರೋಪಿಗಳನ್ನು ಬಂಧಿಸಿದ್ದು ಇದೀಗ ಮತ್ತೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಕಳೆದ ಮೇ 11ರಂದು ಮುಂಬೈಯ ಪನ್ವೇಲ್ ರೈಲ್ವೆ ಸ್ಟೇಷನ್ ಬಳಿ ಆರೋಪಿಯನ್ನು ವಶಕ್ಕೆ ಪಡೆದಿದ್ದು ಮರುದಿನ ಉಳ್ಳಾಲ ಪೊಲಿಸ್ ಠಾಣೆಗೆ ಕರೆತಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು.‌

34 ವರ್ಷದ ಧರ್ಮ ಬೀರ್ ಬೀರೇಂದ್ರ ಸಿಂಗ್ ತನ್ನ ಹೆಸರನ್ನು ಧರ್ಮವೀರ್ ಸಿಂಗ್, ಮನೋಜ್ ಜೀತ್ ಲಾಲ್ ವರ್ಮ, ಧರ್ಮ, ಮಾಸ್ಟರ್, ಕಳ್ಳು ಎಂದು ವಿವಿಧ ಹೆಸರುಗಳಲ್ಲಿ ಗುರುತಿಸಿಕೊಂಡಿದ್ದ. ಸದ್ರಿ ಆರೋಪಿಯನ್ನು ಕೋರ್ಟಿಗೆ ಹಾಜರುಪಡಿಸಿ 10 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಪಡೆಯಲಾಗಿತ್ತು. ಮುಂದಿನ ತನಿಖೆಯನ್ನು ನಡೆಸಿ ವಾಪಸ್ ಮೇ 22 ರಂದು ನ್ಯಾಯಾಲಯಕ್ಕೆ ಹಾಜರುಪಡಿಸಿ, ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿರುತ್ತದೆ.