Mangalore Robbery, Forest Jeep: ಅರಣ್ಯ ಇಲಾಖೆಯ ಜೀಪನ್ನೇ ಎಗರಿಸಿ ಕುಂದಾಪುರ ತಲುಪಿದ್ದ ಖದೀಮ ಅರ್ಧ ಗಂಟೆಯಲ್ಲೇ ಲಾಕ್ ! ಆರೋಪಿ ಪತ್ತೆಗೆ ನೆರವಾಯ್ತು ಜಿಪಿಎಸ್ ಲೊಕೇಶನ್ ! ಮಂಗಳೂರು ಆರ್ ಎಫ್ ಓ ಚುರುಕುತನಕ್ಕೆ ಭೇಷ್

02-06-26 02:58 pm       HK News Staffer   ಕ್ರೈಂ

ನಗರದ ಪಡೀಲ್ ಅರಣ್ಯ ಇಲಾಖೆಯ ಕ್ವಾಟ್ರಸ್ ಬಳಿ ನಿಲ್ಲಿಸಿದ್ದ ಇಲಾಖಾ ಜೀಪನ್ನು ರಾತ್ರೋರಾತ್ರಿ ಕದ್ದು ಪರಾರಿಯಾಗಿದ್ದ ಖದೀಮನನ್ನು ಜಿಪಿಎಸ್ ಲೊಕೇಷನ್ ಬಳಸಿ ಕೇವಲ ಅರ್ಧ ಗಂಟೆಯಲ್ಲಿ ಸಿನಿಮೀಯ ಶೈಲಿಯಲ್ಲಿ ಪತ್ತೆಹಚ್ಚಿದ ಘಟನೆ ಕುಂದಾಪುರ ತಾಲೂಕಿನ ಕೋಟೇಶ್ವರ ಸಮೀಪದ ಮೂಡುಗೋಪಾಡಿಯಲ್ಲಿ ನಡೆದಿದೆ.

ಮಂಗಳೂರು, ಜೂನ್ 2: ನಗರದ ಪಡೀಲ್ ಅರಣ್ಯ ಇಲಾಖೆಯ ಕ್ವಾಟ್ರಸ್ ಬಳಿ ನಿಲ್ಲಿಸಿದ್ದ ಇಲಾಖಾ ಜೀಪನ್ನು ರಾತ್ರೋರಾತ್ರಿ ಕದ್ದು ಪರಾರಿಯಾಗಿದ್ದ ಖದೀಮನನ್ನು ಜಿಪಿಎಸ್ ಲೊಕೇಷನ್ ಬಳಸಿ ಕೇವಲ ಅರ್ಧ ಗಂಟೆಯಲ್ಲಿ ಸಿನಿಮೀಯ ಶೈಲಿಯಲ್ಲಿ ಪತ್ತೆಹಚ್ಚಿದ ಘಟನೆ ಕುಂದಾಪುರ ತಾಲೂಕಿನ ಕೋಟೇಶ್ವರ ಸಮೀಪದ ಮೂಡುಗೋಪಾಡಿಯಲ್ಲಿ ನಡೆದಿದೆ. 

ಕೇರಳದ ಕೋಯಿಕ್ಕೋಡ್ ಮೂಲದ ನದೀಮ್(23) ಬಂಧಿತ ಆರೋಪಿಯೆಂದು ತಿಳಿದುಬಂದಿದೆ. ‌ಮಂಗಳೂರಿನ ಪಡೀಲಿನಲ್ಲಿರುವ ಅರಣ್ಯ ಇಲಾಖೆಯ ವಸತಿ ಗೃಹದಲ್ಲಿ ಸಂಚಾರಿ ದಳದ ಆರ್‌ಎಫ್ ಓ ಸಂತೋಷ್ ರೈ ಅವರ ಜೀಪನ್ನು ನಿಲ್ಲಿಸಲಾಗಿತ್ತು. ಇಲಾಖೆಯ ಜೀಪು ಇನ್ನಿತರ ವಾಹನಗಳನ್ನು ನಿಲ್ಲಿಸಿ ಚಾಲಕರು ತಮ್ಮ ಕ್ವಾಟ್ರಸ್ ನಲ್ಲಿ ಉಳಿದುಕೊಂಡಿದ್ದರು. ಕೇರಳದಿಂದ ರೈಲಿನಲ್ಲಿ ಬಂದಿದ್ದ ನದೀಮ್ ಸೋಮವಾರ ಮುಂಜಾನೆ 5 ಗಂಟೆ ವೇಳೆಗೆ ಕ್ವಾಟ್ರಸ್ ಬಳಿಗೆ ಬಂದು ಜೀಪಿನ ಗಾಜು ಒಡೆದು ಮತ್ತೊಂದು ಡ್ರಾವರಿನಲ್ಲಿ ಇಟ್ಟಿದ್ದ ಇನ್ನೊಂದು ಕೀಯನ್ನು ಬಳಸಿ ಕಳವು ಮಾಡಿದ್ದ. ಜೀಪಿಗೆ ಅಳವಡಿಸಿದ್ದ ಸೈರನ್ ವೈರನ್ನೂ ಕಡಿತಗೊಳಿಸಿ ಜೀಪ್ ಎತ್ತಿಕೊಂಡು ಪರಾರಿಯಾಗಿದ್ದ. ಬೆಳಗ್ಗೆ 7 ಗಂಟೆಗೆ ಕರ್ತವ್ಯಕ್ಕೆ ಬಂದಿದ್ದ ಚಾಲಕ ನೋಡಿದಾಗ ಜೀಪ್ ನಾಪತ್ತೆಯಾಗಿತ್ತು. ಕೂಡಲೇ ಆರ್ ಎಫ್ ಓಗೆ ಮಾಹಿತಿ ನೀಡಿದ್ದರು. 

ಬಳಿಕ ಜೀಪ್‌ಗೆ ಅಳವಡಿಸಿದ್ದ ಜಿಪಿಎಸ್ ಲೊಕೇಷನ್ ಟ್ಯಾಕ್ ಮಾಡಿದಾಗ ಉಡುಪಿ, ಕುಂದಾಪುರದತ್ತ ತೆರಳಿ ಕೋಟೇಶ್ವರದ ಮನೆಯೊಂದರ ಬಳಿ ಜೀಪ್ ನಿಲ್ಲಿಸಿರುವುದು ಕಂಡುಬಂದಿತ್ತು.‌ ಕೂಡಲೇ ಕುಂದಾಪುರ ಭಾಗದ ಅರಣ್ಯ ಇಲಾಖೆ ಅಧಿಕಾರಿಗಳಿಗೆ ತಿಳಿಸಿ, ಜೀಪ್ ವಶಕ್ಕೆ ಪಡೆಯಲು ಸೂಚಿಸಿದ್ದರು. ಮೂಡುಗೋಪಾಡಿ ಎಂಬಲ್ಲಿನ ಮುಖ್ಯ ರಸ್ತೆಯ ಸಮೀಪ ಮನೆಯ ಅಂಗಳದಲ್ಲಿ ಜೀಪ್ ನಿಲ್ಲಿಸಿದ ಜಾಗಕ್ಕೆ ಅರಣ್ಯ ಸಿಬಂದಿ ತೆರಳುತ್ತಿದ್ದಂತೆ ಆರೋಪಿ ಅಲರ್ಟ್ ಆಗಿದ್ದು ಜೀಪಿನೊಂದಿಗೆ ಹೆದ್ದಾರಿಗೆ ಬಂದು ಪರಾರಿಯಾಗಲು ಯತ್ನಿಸಿದ್ದಾನೆ. 

ಇತ್ತ ಲೊಕೇಶನ್ ಟ್ರ್ಯಾಕ್ ಮಾಡುತ್ತಿದ್ದ ಸಂತೋಷ್ ರೈ ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ಜೀಪಿನ ಬಗ್ಗೆ ಮಾಹಿತಿ ನೀಡಿದ್ದು ಅರಣ್ಯ ಸಿಬಂದಿ ಅಡ್ಡಗಟ್ಟಿದ್ದಾರೆ. ಆರೋಪಿ ನದೀಮ್ ಜೀಪನ್ನು ರಸ್ತೆಯಲ್ಲಿ ಬಿಟ್ಟು ಓಡಲು ಯತ್ನಿಸಿದ್ದು ಸಿಬಂದಿ ವಶಕ್ಕೆ ಪಡೆದಿದ್ದಾರೆ.‌ ಇದಕ್ಕು ಮುನ್ನ ಆರೋಪಿ ಕೂಳೂರು ಸಮೀಪದ ಪೆಟ್ರೋಲ್ ಬಂಕ್‌ನಲ್ಲಿ ಫುಲ್ ಟ್ಯಾಂಕ್ ಡೀಸೆಲ್ ತುಂಬಿಸಿಕೊಂಡಿದ್ದು ಅಲ್ಲಿ ಹಣ ಕೊಡದೇ ನೇರವಾಗಿ ತೆರಳಿದ್ದ. ನಸುಕಿನಲ್ಲಿ ಘಟನೆ ನಡೆದಿದ್ದರಿಂದ ಪೆಟ್ರೋಲ್ ಪಂಪ್ ಸಿಬ್ಬಂದಿ ಬಳಿಕ ಸಿಸಿಟಿವಿ ಪರಿಶೀಲಿಸಿ ಜೀಪು ನಂಬರ್ ಸಹಿತ ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ಶೋಧ ನಡೆಸಿದಾಗ ಅರಣ್ಯ ಸಂಚಾರಿ ದಳದ ಜೀಪ್ ಎಂದು ತಿಳಿದುಬಂದಿತ್ತು.

ಜೀಪು ಕಳವು ಮಾಡಿದ ಬಗ್ಗೆ ಅರಣ್ಯ ಸಂಚಾರಿ ದಳದ ಆ‌ರ್ ಎಫ್‌ಒ ಕಂಕನಾಡಿ ಠಾಣೆಗೆ ದೂರು ನೀಡಿದ್ದು ಪೊಲೀಸರು ಬಳಿಕ ಕುಂದಾಪುರಕ್ಕೆ ತೆರಳಿ ಆರೋಪಿಯನ್ನು ಸ್ಥಳದಿಂದಲೇ ಬಂಧಿಸಿದ್ದಾರೆ. ‌ನದೀಮ್ ವೃತ್ತಿಪರ ವಾಹನ ಕಳ್ಳನಾಗಿರುವ ಶಂಕೆಯಿದ್ದು ಜೀಪು ಗಾಜು ಒಡೆದು ಕೀ ಪಡೆದಿರುವುದು, ಸೈರನ್ ವೈರ್ ಕಟ್ ಮಾಡಿರುವುದು, ಸದ್ದಿಲ್ಲದೆ ಸರ್ಕಾರಿ ವಾಹನವನ್ನೇ ಎಗರಿಸಿರುವುದು ಆತನ ಚಾಲಾಕಿತನವನ್ನು ತೋರಿಸಿದೆ. ಪೊಲೀಸರು ಆತನ ಹಿನ್ನೆಲೆ, ಸಂಬಂಧಿಕರ ಮಾಹಿತಿಯನ್ನು ಕೇಳಿದರೂ ಸರಿಯಾದ ಉತ್ತರ ನೀಡಿಲ್ಲ. ಜೀಪು ಕದ್ದೊಯ್ದ ಜಾಗದಲ್ಲಿ ತನ್ನ ಚಪ್ಪಲಿಯನ್ನು ಬಿಟ್ಟಿದ್ದು ಅಲ್ಲಿದ್ದ ಅರಣ್ಯ ಇಲಾಖೆಯ ಸಿಬಂದಿಯೊಬ್ಬರ ಹಳೆ ಚಪ್ಪಲಿಯನ್ನು ಧರಿಸಿ ತೆರಳಿದ್ದಾನೆ. 2023ರಲ್ಲಿ ಖರೀದಿಸಿದ್ದ ಬೊಲೆರೋ ಜೀಪು ಹೊಸತರ ಹಾಗೇ ಇತ್ತು.