ಉಡುಪಿಯಲ್ಲಿ ಕಾರು ಡಿಕ್ಕಿ; ರಸ್ತೆ ದಾಟುತ್ತಿದ್ದ 12 ವರ್ಷದ ಪ್ರತಿಭಾವಂತ ವಿದ್ಯಾರ್ಥಿ ಬಲಿ

15-05-26 05:45 pm       HK News Staffer   ಕ್ರೈಂ

ರಸ್ತೆ ಅಪಘಾತದಲ್ಲಿ 6ನೇ ತರಗತಿ ವಿದ್ಯಾರ್ಥಿಯೊಬ್ಬ ಮೃತಪಟ್ಟ ಹೃದಯವಿದ್ರಾವಕ ಘಟನೆ ಉಡುಪಿ ಜಿಲ್ಲೆಯ ನೇಜಾರಿನ ಜ್ಯೋತಿ ನಗರದ ಆರನೇ ಕ್ರಾಸ್ ಸಮೀಪ ನಡೆದಿದೆ. ಮೃತ ಬಾಲಕನನ್ನು 12 ವರ್ಷದ ಅಬ್ದುಲ್ ರೆಹಮಾನ್ ಎಂದು ಗುರುತಿಸಲಾಗಿದೆ.

ಉಡುಪಿ, ಮೇ 15: ರಸ್ತೆ ಅಪಘಾತದಲ್ಲಿ 6ನೇ ತರಗತಿ ವಿದ್ಯಾರ್ಥಿಯೊಬ್ಬ ಮೃತಪಟ್ಟ ಹೃದಯವಿದ್ರಾವಕ ಘಟನೆ ಉಡುಪಿ ಜಿಲ್ಲೆಯ ನೇಜಾರಿನ ಜ್ಯೋತಿ ನಗರದ ಆರನೇ ಕ್ರಾಸ್ ಸಮೀಪ ನಡೆದಿದೆ. ಮೃತ ಬಾಲಕನನ್ನು 12 ವರ್ಷದ ಅಬ್ದುಲ್ ರೆಹಮಾನ್ ಎಂದು ಗುರುತಿಸಲಾಗಿದೆ.

ಅಬ್ದುಲ್ ರೆಹಮಾನ್ ರಸ್ತೆ ದಾಟುತ್ತಿದ್ದ ವೇಳೆ ವೇಗವಾಗಿ ಬಂದ ಕಾರೊಂದು ಡಿಕ್ಕಿ ಹೊಡೆದಿದೆ. ಅಪಘಾತದ ಪರಿಣಾಮ ಬಾಲಕ ಗಂಭೀರವಾಗಿ ಗಾಯಗೊಂಡಿದ್ದು, ತಕ್ಷಣವೇ ಆತನನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಿಸದೆ ಬಾಲಕ ಕೊನೆಯುಸಿರೆಳೆದಿದ್ದಾನೆ.

ಅಬ್ದುಲ್ ರೆಹಮಾನ್ ಸಲಿಹಾತ್ ಶಿಕ್ಷಣ ಸಂಸ್ಥೆ ಯ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದು, ಆತನ ಅಕಾಲಿಕ ನಿಧನಕ್ಕೆ ಶಾಲಾ ಆಡಳಿತ ಮಂಡಳಿ, ಶಿಕ್ಷಕರು ಹಾಗೂ ಸಹಪಾಠಿಗಳು ಸಂತಾಪ ವ್ಯಕ್ತಪಡಿಸಿದ್ದಾರೆ. ಬಾಲಕನ ಸಾವಿನ ಸುದ್ದಿ ಕುಟುಂಬಸ್ಥರು ಮತ್ತು ಸ್ಥಳೀಯರಲ್ಲಿ ದುಃಖದ ವಾತಾವರಣ ಮೂಡಿಸಿದೆ.

ರಸ್ತೆ ದಾಟುವಾಗ ಮಕ್ಕಳು ಹಾಗೂ ಪಾದಚಾರಿಗಳು ಅತ್ಯಂತ ಎಚ್ಚರಿಕೆಯಿಂದ ಇರಬೇಕು. ವಾಹನ ಚಾಲಕರು ಶಾಲಾ ಪ್ರದೇಶಗಳು ಮತ್ತು ವಸತಿ ಪ್ರದೇಶಗಳಲ್ಲಿ ವೇಗ ನಿಯಂತ್ರಿಸಿ ಸಂಚರಿಸುವುದು ಅನಿವಾರ್ಯ. ಒಂದು ಕ್ಷಣದ ನಿರ್ಲಕ್ಷ್ಯ ಅಮೂಲ್ಯ ಜೀವ ಕಸಿದುಕೊಳ್ಳಬಹುದು.