ಎನ್ಐಎ, ಇಡಿ ಅಧಿಕಾರಿಗಳೆಂದು ಫೋನ್ ಕರೆ ; ಮುಂಬೈನಲ್ಲಿ 50 ಎಫ್ಐಆರ್ ಇದೆಯೆಂದು ಬೆದರಿಕೆ, ಮಂಗಳೂರಿನ ವ್ಯಕ್ತಿಗೆ 2.07 ಕೋಟಿ ದೋಖಾ

25-04-26 10:43 pm       Mangalore Correspondent   ಕ್ರೈಂ

ರಾಷ್ಟ್ರೀಯ ತನಿಖಾ ದಳ ಮತ್ತು ಜಾರಿ ನಿರ್ದೇಶನಾಲಯ(ಇಡಿ) ಅಧಿಕಾರಿಗಳೆಂದು ಫೋನ್ ಕರೆ ಮಾಡಿದ ಸೈಬರ್ ವಂಚಕರು ಮಂಗಳೂರಿನ 61 ವರ್ಷದ ವ್ಯಕ್ತಿಯೊಬ್ಬರಿಗೆ 2.07 ಕೋಟಿ ರೂಪಾಯಿ ವಂಚಿಸಿದ ಘಟನೆ ನಡೆದಿದೆ.

ಮಂಗಳೂರು, ಎಪ್ರಿಲ್ 25: ರಾಷ್ಟ್ರೀಯ ತನಿಖಾ ದಳ ಮತ್ತು ಜಾರಿ ನಿರ್ದೇಶನಾಲಯ(ಇಡಿ) ಅಧಿಕಾರಿಗಳೆಂದು ಫೋನ್ ಕರೆ ಮಾಡಿದ ಸೈಬರ್ ವಂಚಕರು ಮಂಗಳೂರಿನ 61 ವರ್ಷದ ವ್ಯಕ್ತಿಯೊಬ್ಬರಿಗೆ 2.07 ಕೋಟಿ ರೂಪಾಯಿ ವಂಚಿಸಿದ ಘಟನೆ ನಡೆದಿದೆ. 

ಮಾರ್ಚ್ 31ರಂದು ಸಂತ್ರಸ್ತರಿಗೆ ಕರೆ ಮಾಡಿದ್ದ ಅಪರಿಚಿತ ವ್ಯಕ್ತಿಯೊಬ್ಬ ತನ್ನನ್ನು ‘ನ್ಯಾಷನಲ್ ಡೇಟಾ ಪ್ರೊಟೆಕ್ಷನ್ ಸೆಂಟರ್’ ಅಧಿಕಾರಿ ಎಂದು ಪರಿಚಯಿಸಿಕೊಂಡಿದ್ದಾನೆ. “ನಿಮ್ಮ ಗುರುತಿನ ಚೀಟಿ ಬಳಸಿ ಮುಂಬೈನಲ್ಲಿ ಸಿಮ್ ಕಾರ್ಡ್ ಖರೀದಿಸಲಾಗಿದೆ. ಅದರ ಮೂಲಕ ಅಶ್ಲೀಲ ವೀಡಿಯೊ ರವಾನೆ ಹಾಗೂ ಡ್ರಗ್ಸ್ ದಂಧೆ ನಡೆಸಲಾಗುತ್ತಿದೆ. ನಿಮ್ಮ ಮೇಲೆ ಮುಂಬೈನ ಕೊಲಾಬಾ ಠಾಣೆಯಲ್ಲಿ 50ಕ್ಕೂ ಹೆಚ್ಚು ಎಫ್‌ಐಆರ್ ದಾಖಲಾಗಿವೆ ಎಂದು ಹೇಳಿ ಬೆದರಿಸಿದ್ದಾನೆ. 

ಬಳಿಕ ಎನ್‌ಐಎ ಅಧಿಕಾರಿ ಸಂದೀಪ್ ರಾವ್, ಎಡಿಜಿಪಿ ಮ್ಯಾಥ್ಯೂ ಮತ್ತು ಇಡಿ ಅಧಿಕಾರಿ ವಿಲಾಸ್ ರಾವ್ ಪಟೇಲ್ ಎಂಬ ಹೆಸರಿನಲ್ಲಿ ವಂಚಕರು ವಾಟ್ಸಪ್ ಕರೆ ಮಾಡಿದ್ದು ಸಂತ್ರಸ್ತ ವ್ಯಕ್ತಿಯನ್ನು ಭಯಭೀತರನ್ನಾಗಿಸಿದ್ದಾರೆ. ನೀವು ದೊಡ್ಡ ಕ್ರಿಮಿನಲ್, ಭಯೋತ್ಪಾದಕ ಚಟುವಟಿಕೆಯಲ್ಲಿ ನಿಮ್ಮ ಹೆಸರಿದೆ ಎಂದು ಹೆದರಿಸಿ ಪ್ರಕರಣದಿಂದ ಮುಕ್ತನಾಗಲು ಹಣವನ್ನು ಬೇರೆ ಖಾತೆಗಳಲ್ಲಿ ಡಿಪಾಸಿಟ್ ಇಡುವಂತೆ ಬೇಡಿಕೆ ಇಟ್ಟಿದ್ದಾರೆ.

ಇದರಿಂದ ಹೆದರಿದ ಸಂತ್ರಸ್ತ ವ್ಯಕ್ತಿ ಹಣ ಡಿಪಾಸಿಟ್ ಮಾಡಲು ಮುಂದಾಗಿದ್ದು ಏಪ್ರಿಲ್ 7ರಿಂದ 18ರ ಅವಧಿಯಲ್ಲಿ ವಿವಿಧ ಬ್ಯಾಂಕ್ ಖಾತೆಗಳಿಗೆ ಹಂತ ಹಂತವಾಗಿ ಹಣ ರವಾನಿಸಿದ್ದಾರೆ. ಒಟ್ಟು ₹2,07,04,600 ಹಣವನ್ನು ಆನ್‌ಲೈನ್ ಮೂಲಕ ವರ್ಗಾಯಿಸಿದ್ದು ಆನಂತರ ಹಣ ಕೇಳಿದಾಗ, ಹಣ ಹಿಂತಿರುಗಿ ಬರಲಿಲ್ಲ. ಕೊನೆಗೆ ತಾನು ಮೋಸ ಹೋಗಿರುವ ಸಂಶಯದಲ್ಲಿ ಮಂಗಳೂರಿನ ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.