ಕಾರ್ಕಳ ಹೆದ್ದಾರಿಯಲ್ಲಿ ಭೀಕರ ಅಪಘಾತ ; ಬೈಕ್ ಗೆ ಡಿಕ್ಕಿ ಹೊಡೆದ ಕಾರು, ತಂದೆ ಸಾವು, ಮಗಳ ಸ್ಥಿತಿ ಗಂಭೀರ, ನಿಟ್ಟೆ ಕಾಲೇಜು ವಿದ್ಯಾರ್ಥಿಗಳ ವಿರುದ್ಧ ಆಕ್ರೋಶ !

25-04-26 12:55 pm       HK News Staffer   ಕ್ರೈಂ

ಕಾರು ಮತ್ತು ಬೈಕ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ತಂದೆ ಸಾವನ್ನಪ್ಪಿ, ಮಗಳು ಗಂಭೀರವಾಗಿ ಗಾಯಗೊಂಡ ಘಟನೆ ಕಾರ್ಕಳ–ಪಡುಬಿದ್ರಿ ರಾಜ್ಯ ಹೆದ್ದಾರಿಯ ನಿಟ್ಟೆ ಗ್ರಾಮದ ‘ನಿಟ್ಟೆ ಫಾರ್ ಎವರ್’ ಹೋಟೆಲ್ ಮುಂಭಾಗ ನಡೆದಿದೆ.

ಕಾರ್ಕಳ, ಏಪ್ರಿಲ್ 25: ಕಾರು ಮತ್ತು ಬೈಕ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ತಂದೆ ಸಾವನ್ನಪ್ಪಿ, ಮಗಳು ಗಂಭೀರವಾಗಿ ಗಾಯಗೊಂಡ ಘಟನೆ ಕಾರ್ಕಳ–ಪಡುಬಿದ್ರಿ ರಾಜ್ಯ ಹೆದ್ದಾರಿಯ ನಿಟ್ಟೆ ಗ್ರಾಮದ ‘ನಿಟ್ಟೆ ಫಾರ್ ಎವರ್’ ಹೋಟೆಲ್ ಮುಂಭಾಗ ನಡೆದಿದೆ.

ಕಾರ್ಕಳ ನಿವಾಸಿ ನವೀನ್ ಚಂದ್ರ (45)  ಅವರು ತಮ್ಮ ಮಗಳು ಪ್ರೇರಣಾಳನ್ನ ಬೈಕ್‌ನಲ್ಲಿ ಕೂರಿಸಿಕೊಂಡು ನಿಟ್ಟೆ ಕಡೆಯಿಂದ ಕಾರ್ಕಳದತ್ತ ಬರುತ್ತಿದ್ದರು. ಈ ವೇಳೆ ಎದುರು ದಿಕ್ಕಿನಿಂದ ಅತಿವೇಗ ಹಾಗೂ ಅಜಾಗರೂಕತೆಯಿಂದ ಬಂದ ಕಾರು ನಿಯಂತ್ರಣ ತಪ್ಪಿ ರಸ್ತೆಯ ಬಲಭಾಗಕ್ಕೆ ಚಲಿಸಿ, ಬೈಕ್‌ಗೆ ನೇರವಾಗಿ ಡಿಕ್ಕಿ ಹೊಡೆದಿದೆ.  ಅಪಘಾತದ ಭೀಕರತೆಗೆ ತೀವ್ರವಾಗಿ ಗಾಯಗೊಂಡ ನವೀನ್ ಚಂದ್ರ ಅವರನ್ನು ತಕ್ಷಣ ಕಾರ್ಕಳದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ ಪ್ರೇರಣಾ ಹೆಚ್ಚಿನ ಚಿಕಿತ್ಸೆಗಾಗಿ ಕೆ.ಎಂ.ಸಿ ಆಸ್ಪತ್ರೆ ಗೆ ಸ್ಥಳಾಂತರಿಸಲಾಗಿದೆ.
 
ಘಟನೆ ಸಂಬಂಧ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕಾರು ಚಾಲಕನ ವಿರುದ್ಧ ಬಿಎನ್‌ಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದ್ದು, ತನಿಖೆ ಮುಂದುವರಿದಿದೆ.

ಕಾರಿನಲ್ಲಿದ್ದವರು ನಿಟ್ಟೆ ಕಾಲೇಜು ವಿದ್ಯಾರ್ಥಿಗಳು ಎಂದು ತಿಳಿದು ಬಂದಿದೆ. ಅತಿಯಾದ ವೇಗವೇ ಅಪಘಾತಕ್ಕೆ ಕಾರಣ ಎಂದು ಪ್ರತ್ಯಕ್ಷದರ್ಶಿಗಳು ಆರೋಪಿಸಿದ್ದಾರೆ. ನಿಟ್ಟೆ ಇಂಜಿನೀಯರಿಂಗ್‌ ಕಾಲೇಜಿನ ವಿದ್ಯಾರ್ಥಿಗಳು ಮಿತಿಮೀರಿದ ವೇಗದಲ್ಲಿ ಕಾರು, ಬೈಕ್‌ ಚಲಾಯಿಸುತ್ತಿದ್ದು ಈ ಹಿಂದೆಯೂ ಅನೇಕ ಬಾರಿ ಅಪಘಾತವನ್ನುಂಟು ಮಾಡಿದ್ದಾರೆ. ನಿಟ್ಟೆ ಇಂಜಿನೀಯರಿಂಗ್ ಕಾಲೇಜು ವಿದ್ಯಾರ್ಥಿಗಳ ಬೇಜವಾಬ್ದಾರಿ ಚಾಲನೆ, ಮೋಜು ಮಸ್ತಿಗೆ ಅಮಾಯಕರು ಬಲಿಯಾಗುತ್ತಿದ್ದಾರೆ. ಕಳೆದ ಬಾರಿ ಅತ್ತೂರು ಹಾಗೂ ಬೆಳ್ಳಣ್ ನಲ್ಲಿ ಸಂಭವಿಸಿದ ಅಪಘಾತಕ್ಕೂ ನಿಟ್ಟೆ ಇಂಜಿನೀಯರಿಂಗ್‌ ವಿದ್ಯಾರ್ಥಿಗಳೇ ಕಾರಣರಾಗಿದ್ದರು. ವಿದ್ಯಾರ್ಥಿಗಳ ವೇಗಕ್ಕೆ ಕಡಿವಾಣ ಅವಶ್ಯ ಎಂದು ಸಾರ್ವಜನಿಕ ವಲಯದಿಂದ ಅಭಿಪ್ರಾಯ ಕೇಳಿಬರುತ್ತಿದೆ.