ಮಡಿಕೇರಿಯಿಂದ ಬಂದು ತಣ್ಣೀರುಬಾವಿಯಲ್ಲಿ ಹುಟ್ಟುಹಬ್ಬ ಆಚರಣೆ ; ದಾರಿ ಹೇಳುವ ನೆಪದಲ್ಲಿ ಸುಲಿಗೆ, ಪ್ರಮುಖ ಆರೋಪಿ ರೌಡಿಶೀಟರ್ ಚಂದು ಹಾರಿಸ್ ಬಂಧನ

22-04-26 10:13 pm       HK News Staffer   ಕ್ರೈಂ

ಮಡಿಕೇರಿ ನಿವಾಸಿಯೊಬ್ಬರು ತನ್ನ ಸ್ನೇಹಿತರೊಂದಿಗೆ ಕಾರಿನಲ್ಲಿ ಪಣಂಬೂರಿನಲ್ಲಿ ಹುಟ್ಟುಹಬ್ಬ ಆಚರಿಸಲೆಂದು ಬಂದಿದ್ದು ತಣ್ಣೀರುಬಾವಿ ಬಳಿಯಲ್ಲಿ ದಾರಿ ತಪ್ಪಿ ವಿಳಾಸ ಕೇಳುವ ಯತ್ನದಲ್ಲಿದ್ದಾಗ ಇಬ್ಬರು ಯುವಕರು ದಾರಿ ಹೇಳುವ ನೆಪದಲ್ಲಿ ಸುಲಿಗೆ ಮಾಡಿರುವ ಘಟನೆ ಎಪ್ರಿಲ್ 14ರಂದು ನಡೆದಿದ್ದು ಪ್ರಮುಖ ಆರೋಪಿಯನ್ನು ಪಣಂಬೂರು ಪೊಲೀಸರು ಬಂಧಿಸಿದ್ದಾರೆ. ‌ರೌಡಿಶೀಟರ್ ಚಂದು ಹಾರೀಸ್ (33) ಬಂಧಿತ.

ಮಂಗಳೂರು, ಎಪ್ರಿಲ್ 22: ಮಡಿಕೇರಿ ನಿವಾಸಿಯೊಬ್ಬರು ತನ್ನ ಸ್ನೇಹಿತರೊಂದಿಗೆ ಕಾರಿನಲ್ಲಿ ಪಣಂಬೂರಿನಲ್ಲಿ ಹುಟ್ಟುಹಬ್ಬ ಆಚರಿಸಲೆಂದು ಬಂದಿದ್ದು ತಣ್ಣೀರುಬಾವಿ ಬಳಿಯಲ್ಲಿ ದಾರಿ ತಪ್ಪಿ ವಿಳಾಸ ಕೇಳುವ ಯತ್ನದಲ್ಲಿದ್ದಾಗ ಇಬ್ಬರು ಯುವಕರು ದಾರಿ ಹೇಳುವ ನೆಪದಲ್ಲಿ ಸುಲಿಗೆ ಮಾಡಿರುವ ಘಟನೆ ಎಪ್ರಿಲ್ 14ರಂದು ನಡೆದಿದ್ದು ಪ್ರಮುಖ ಆರೋಪಿಯನ್ನು ಪಣಂಬೂರು ಪೊಲೀಸರು ಬಂಧಿಸಿದ್ದಾರೆ. ‌ರೌಡಿಶೀಟರ್ ಚಂದು ಹಾರೀಸ್ (33) ಬಂಧಿತ. 

ಮಡಿಕೇರಿ ನಿವಾಸಿ ಅಜಯ್ ಕೆ (29) ಎಂಬವರು ತನ್ನ  ಸ್ನೇಹಿತರಾದ ರಮೇಶ್ ಮತ್ತು ರಫೀಕ್ ಎಂಬವರ  ಜೊತೆ ಕಾರಿನಲ್ಲಿ ತಣ್ಣೀರುಬಾವಿ ಬೀಚಿಗೆ  ತನ್ನ ಹುಟ್ಟುಹಬ್ಬವನ್ನು ಆಚರಿಸಲು ಎಪ್ರಿಲ್ 14ರಂದು ರಾತ್ರಿ ಬಂದಿದ್ದು, ನಸುಕಿನ ಜಾವ 2.30 ಗಂಟೆಯ ಸುಮಾರಿಗೆ ತಣ್ಣೀರುಬಾವಿ ಬೀಚ್ ಸಮೀಪ ಬಂದು ಕಸಬಾ ಬೆಂಗ್ರೆ ಕಡೆ ಹೋಗಿದ್ದು, ರಸ್ತೆ ಬದಿಯಲ್ಲಿ ಇಬ್ಬರು ಯುವಕರು ನಡೆದು ಹೋಗುತ್ತಿದ್ದವರನ್ನು ಕಂಡು ಕಾರನ್ನು ನಿಲ್ಲಿಸಿ ವಿಳಾಸ ಕೇಳಿದ್ದಾರೆ. ವಿಳಾಸ ತೋರಿಸುವುದಾಗಿ ಹೇಳಿ ಕಾರಿನ ಹಿಂಬದಿ ಕುಳಿತು ಸ್ವಲ್ಪ ಮುಂದಕ್ಕೆ ಹೋಗುತ್ತಿದ್ದಂತೆ ಕಾರನ್ನು ನಿಲ್ಲಿಸಿ ಇಬ್ಬರು ಆರೋಪಿಗಳು ತಮ್ಮ ಬಳಿ ಇದ್ದ ಸ್ಕ್ರೂ ಡ್ರೈವರನ್ನು ತೋರಿಸಿ ಚುಚ್ಚುವುದಾಗಿ ಬೆದರಿಸಿ, ಕಾರಿನ ಮುಂಭಾಗದ ಗ್ಲಾಸನ್ನು ಸ್ಕ್ರೂ ಡ್ರೈವರ್ ಹಿಡಿಯಿಂದ ಗುದ್ದಿ ಹಾನಿ ಮಾಡಿದ್ದಾರೆ. 

ಬಳಿಕ ಅಜಯ್ ಮತ್ತು ಸ್ನೇಹಿತರ ಬಳಿ ಇದ್ದ ಸುಮಾರು 9,000/- ಮೌಲ್ಯದ ಟೈಟಾನ್ ವಾಚ್, ಸುಮಾರು 3,000/- ರೂ. ಮೌಲ್ಯದ ಫಾಸ್ಟ್ ಟ್ರಾಕ್ ಕಂಪೆನಿಯ ವಾಚ್ ಮತ್ತು ರೂ. 2,000/- ಹಣ, ಅಲ್ಲದೇ  ಕ್ಯಾಮರಾಕ್ಕೆ ಅಳವಡಿಸುವ ಸುಮಾರು 8,000/- ಮೌಲ್ಯದ ಗಿಂಬಲ್, 2,000/- ಮೌಲ್ಯದ ಪವರ್ ಬ್ಯಾಂಕ್ ಮತ್ತು ಸುಮಾರು ರೂ. 500/- ಮೌಲ್ಯದ ರೋಲ್ಡ್ ಗೋಲ್ಡ್ ಬ್ರಾಸ್ಲೈಟ್ ಸೇರಿ ಸುಮಾರು 24,500/- ರೂ ಮೌಲ್ಯದ ಸೊತ್ತುಗಳನ್ನು ಕಿತ್ತುಕೊಂಡಿರುತ್ತಾರೆ. ಕೃತ್ಯ ನಡೆದ ಸ್ಥಳಕ್ಕೆ ಬೈಕಿನಲ್ಲಿ ಬಂದ ಆರೋಪಿಗಳ ಇನ್ನೊಬ್ಬ ಸ್ನೇಹಿತ ಆರೋಪಿಗಳು ಕಿತ್ತುಕೊಂಡ ವಸ್ತುಗಳನ್ನು ಪಡೆದು ಇಬ್ಬರು ಆರೋಪಿಗಳನ್ನು ಕರೆದುಕೊಂಡು ಹೋಗಿರುತ್ತಾನೆ‌. ಕಾರಿನ ಗ್ಲಾಸಿಗೆ ಆದ ಹಾನಿಯಿಂದ ಅಂದಾಜು ಮೌಲ್ಯ ರೂ 8,000/- ನಷ್ಟ ಆಗಿರುತ್ತದೆ. 

ಕಿತ್ತುಕೊಂಡ ಸೊತ್ತುಗಳ ಹಾಗೂ ಕಾರಿನ ಗ್ಲಾಸಿಗೆ ಹಾನಿ ಪಡಿಸಿದರ ಒಟ್ಟು ಅಂದಾಜು ಮೌಲ್ಯ 32,500/- ಆಗಿದೆ. ಈ ಬಗ್ಗೆ ಪಣಂಬೂರು ಪೊಲೀಸ್ ಠಾಣೆಯಲ್ಲಿ  ಅ.ಕ್ರ ನಂಬ್ರ 49/2026 ಕಲಂ: 309(4),324(1), BNS-2023, ಕಲಂ 2(a)  ಕೆಪಿಡಿಎಲ್‌ಪಿ ಆಕ್ಟ್ 1981 ರಂತೆ ಪ್ರಕರಣ  ದಾಖಲಾಗಿ ತನಿಖೆಯಲ್ಲಿರುತ್ತದೆ. 

ತನಿಖೆ ಮುಂದುವರಿಸಿದ    ಪಣಂಬೂರು ಪೊಲೀಸ್ ಠಾಣೆ ನಿರೀಕ್ಷಕರಾದ ಸಲೀಂ ಅಬ್ಬಾಸ್ ಅವರು ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಪಣಂಬೂರು ಠಾಣಾ ಪಿ.ಎಸ್.ಐ ಗಳಾದ ಶ್ರೀಕಲಾ ಕೆ.ಟಿ, ಜ್ಞಾನಶೇಖರ ಹಾಗೂ ಸಿಬ್ಬಂದಿಗಳ ಸಹಕಾರದೊಂದಿಗೆ ಕಾರ್ಯಾಚರಣೆ ನಡೆಸಿ ಆರೋಪಿಗಳಾದ ಕಸಬಾ ಬೆಂಗ್ರೆಯ ಮೊಹಮ್ಮದ್ ಸಿನಾನ್ (24) ಮತ್ತು ಝಹೀರ್ ನಿಸಾರ್ ( 22) ಎಂಬವರನ್ನು ಖಚಿತ ಮಾಹಿತಿ ಮೇರೆಗೆ ಕಸಬಾ ಬೆಂಗ್ರೆಯಲ್ಲಿ ವಶಕ್ಕೆ ಪಡೆದು ಸುಲಿಗೆ ಮಾಡಿದ ಸೊತ್ತುಗಳನ್ನು ಸ್ವಾಧೀನಪಡಿಸಿದ್ದಾರೆ. ಕೃತ್ಯದಲ್ಲಿ  ಪಾಲ್ಗೊಂಡ ಇನ್ನೊಬ್ಬ ಆರೋಪಿ  ಚಂದು ಹಾರೀಸ್ (33) ಎಂಬಾತ ತಲೆಮರೆಸಿಕೊಂಡಿದ್ದ. ಇದೀಗ ಎಪ್ರಿಲ್ 22ರಂದು ದಸ್ತಗಿರಿ ಮಾಡಿ ಆತನಿಂದ ಸುಲಿಗೆ ಮಾಡಿದ ವಸ್ತುಗಳಾದ ಸ್ಮಾರ್ಟ್ ವಾಚ್, ಪವರ್ ಬ್ಯಾಂಕ್ ಮತ್ತು ಕೃತ್ಯಕ್ಕೆ ಬಳಸಿದ ಟಿವಿಎಸ್ ಅಪಾಚೆ ಬೈಕ್ ಅನ್ನು ವಶಕ್ಕೆ ಪಡೆಯಲಾಗಿದೆ. ಚಂದು ಹಾರೀಸ್ ವಿರುದ್ಧ 30ಕ್ಕೂ ಹೆಚ್ಚು ಪ್ರಕರಣಗಳಿದ್ದು ಪಣಂಬೂರು ಠಾಣೆಯಲ್ಲಿ ರೌಡಿ ಪಟ್ಟಿ ತೆರೆಯಲಾಗಿದ್ದು ಹಳೆಯ ಪ್ರಕರಣಗಳಲ್ಲಿ  ಮೂರು ವಾರೆಂಟ್‌ ಜಾರಿಯಾಗಲು ಬಾಕಿ ಇರುತ್ತದೆ.