ಖಾಸಗಿ ಬಸ್ಸಿನ ನಿರ್ಲಕ್ಷ್ಯದ ಚಾಲನೆ, ತಂದೆ- ಮಗಳಿದ್ದ ಸ್ಕೂಟರಿನ ಹಿಂಬದಿಗೆ ಬಸ್ ಡಿಕ್ಕಿ ; ಪಡುಬಿದ್ರೆಯ ಪ್ರತಿಭಾನ್ವಿತ ಬಾಲಕಿ ದುರಂತ ಸಾವು

22-04-26 08:41 pm       HK News Staffer   ಕ್ರೈಂ

ಖಾಸಗಿ ಬಸ್ಸಿನ ಧಾವಂತಕ್ಕೆ ತಂದೆ - ಮಗಳು ಪ್ರಯಾಣಿಸುತ್ತಿದ್ದ ಸ್ಕೂಟರ್ ಸಿಲುಕಿದ್ದರಿಂದ ಎಂಟು ವರ್ಷದ ಪ್ರತಿಭಾನ್ವಿತ ಬಾಲಕಿ ದುರಂತ ಸಾವನ್ನಪ್ಪಿದ ಘಟನೆ ಪಡುಬಿದ್ರೆ ಬಳಿಯ ಕಾಪು ಪೇಟೆಯಲ್ಲಿ ನಡೆದಿದೆ.

ಪಡುಬಿದ್ರೆ, ಎಪ್ರಿಲ್ 22: ಖಾಸಗಿ ಬಸ್ಸಿನ ಧಾವಂತಕ್ಕೆ ತಂದೆ - ಮಗಳು ಪ್ರಯಾಣಿಸುತ್ತಿದ್ದ ಸ್ಕೂಟರ್ ಸಿಲುಕಿದ್ದರಿಂದ ಎಂಟು ವರ್ಷದ ಪ್ರತಿಭಾನ್ವಿತ ಬಾಲಕಿ ದುರಂತ ಸಾವನ್ನಪ್ಪಿದ ಘಟನೆ ಪಡುಬಿದ್ರೆ ಬಳಿಯ ಕಾಪು ಪೇಟೆಯಲ್ಲಿ ನಡೆದಿದೆ. 

ದುಬೈನಲ್ಲಿದ್ದು ಊರಿಗೆ ಮರಳಿದ್ದ ನಿತ್ಯಾನಂದ ಶೆಟ್ಟಿ ಮಗಳ ಜೊತೆಗೆ ಸ್ಕೂಟರಿನಲ್ಲಿ ಕಾಪು ಪೇಟೆಗೆ ಬಂದಿದ್ದರು. ಈ ವೇಳೆ, ಸರ್ವಿಸ್ ರಸ್ತೆಯಿಂದ ರಾಷ್ಟ್ರೀಯ ಹೆದ್ದಾರಿಗೆ ನುಗ್ಗಿ ಬಂದ ಉಡುಪಿ- ಮಂಗಳೂರು ಎಕ್ಸ್‌ಪ್ರೆಸ್‌ ಬಸ್ ಕಾಪು ಸಾಯಿ ಸರ್ವಿಸ್ ಸ್ಟೇಶನ್ ಬಳಿ ಸ್ಕೂಟಿಗೆ ಹಿಂಬದಿಯಿಂದ ಡಿಕ್ಕಿಯಾಗಿದೆ. ಇದರಿಂದ ತಂದೆಯೊಂದಿಗೆ ಹಿಂಬದಿ ಕುಳಿತಿದ್ದ ಬಾಲಕಿ ಸ್ವಾತಿ ಶೆಟ್ಟಿ (8) ರಸ್ತೆಗೆ ಬಿದ್ದು ತೀವ್ರ ಗಾಯಗೊಂಡು ಸಾವನ್ನಪ್ಪಿದ್ದಾಳೆ. ನಿತ್ಯಾನಂದ ಶೆಟ್ಟಿ ಗಂಭೀರ ಗಾಯಗಳೊಂದಿಗೆ ಆಸ್ಪತ್ರೆಗೆ ದಾಖಲಾಗಿದ್ದಾರೆ. 

ದುಬೈಯಲ್ಲಿ ವಾಸವಿದ್ದ ನಿತ್ಯಾನಂದ ಶೆಟ್ಟಿ ಮುಂದೆ ಊರಿನಲ್ಲೇ ನೆಲೆಸುವುದಕ್ಕಾಗಿ ಸಿದ್ಧತೆಯಲ್ಲಿದ್ದರು. ಮಗಳು ಸ್ವಾತಿಯನ್ನು ಉಡುಪಿಯ ಖಾಸಗಿ ಶಾಲೆಯಲ್ಲಿ ಸೇರ್ಪಡೆಗೊಳಿಸಿದ್ದರು. ಪತ್ನಿ, ಮಗಳನ್ನು ಬಿಟ್ಟು ಎರಡು ದಿನದಲ್ಲಿ ನಿತ್ಯಾನಂದ ಶೆಟ್ಟಿ ಮಾತ್ರ ದುಬೈಗೆ ತೆರಳುವವರಿದ್ದರು. ಈ ನಡುವೆ, ಕಾಪು ಪೇಟೆಗೆ ಸ್ಕೂಟರ್‌ ನಲ್ಲಿ ಬಂದು ವಾಪಾಸಾಗುತ್ತಿದ್ದಾಗ ಅಪಘಾತಕ್ಕೀಡಾಗಿದ್ದಾರೆ.  

ನಿತ್ಯಾನಂದ ಶೆಟ್ಟಿ ಕಾಪು ಬಳಿಯ ಪೂವಣಿಗುತ್ತು ಮನೆ ನಿವಾಸಿಯಾಗಿದ್ದು ಅಲ್ಲಿಂದ ಕೇವಲ ಅರ್ಧ ಕಿ.ಮೀ. ದೂರದಲ್ಲಿ ಅಪಘಾತ ನಡೆದಿದೆ. ಸ್ವಾತಿ ಶೆಟ್ಟಿ ಸಣ್ಣ ವಯಸ್ಸಿನಲ್ಲೇ ಪರಿಸರದಲ್ಲಿ ಆಕರ್ಷಕ ವ್ಯಕ್ತಿತ್ವ ಬೆಳೆಸಿಕೊಂಡಿದ್ದಳು. ಬಂಟರ ಸಂಘದ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಬಂಧುಗಳ ಗಮನ ಸೆಳೆದಿದ್ದಳು. ಆದರೆ ದುರ್ವಿಧಿ ಬೇರೆಯದ್ದೇ ಬಗೆದಿದ್ದು ಅಪಘಾತದಲ್ಲಿ ಸಾವು ಕಂಡಿದ್ದು ಕುಟುಂಬಸ್ಥರು ಮತ್ತು ಪರಿಸರದ ಜನರಿಗೆ ಆಘಾತ ಮೂಡಿಸಿದೆ.‌ ಬಸ್ ಚಾಲಕನ ನಿರ್ಲಕ್ಷ್ಯ ಮತ್ತು ಧಾವಂತದ ಚಾಲನೆಯಿಂದಾಗಿ ಘಟನೆ ನಡೆದಿದ್ದು ಕಾಪು ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.