ಡಿಜಿಪಿ ಡಾ.ಎಂ.ಎ.ಸಲೀಂ ಮಂಗಳೂರಿಗೆ ; ವರ್ಗಾವಣೆ ಆಗಿದ್ದರೂ ಬಿಟ್ಟುಕೊಡದ ಕಮಿಷನರ್, ಪೊಲೀಸ್ ಸಿಬ್ಬಂದಿ ಕುಟುಂಬಸ್ಥರಿಂದ ಡಿಜಿಗೆ ದೂರು ಹೇಳಿ ಅಳಲು

21-04-26 03:13 pm       HK News Staffer   ಕ್ರೈಂ

ರಾಜ್ಯ ಪೊಲೀಸ್ ಇಲಾಖೆಯ ಡಿಜಿಪಿ ಡಾ.ಎಂ.ಎ. ಸಲೀಂ ಮಂಗಳೂರಿಗೆ ಆಗಮಿಸಿದ್ದು ಮಂಗಳೂರು ಕಮಿಷನರ್ ಕಚೇರಿಯಲ್ಲಿ ಕಮಿಷನರೇಟ್ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವ್ಯಾಪ್ತಿಯ ಪ್ರಗತಿ ಪರಿಶೀಲನೆ ಸಭೆ ನಡೆಸಿದ್ದಾರೆ.

ಮಂಗಳೂರು, ಎಪ್ರಿಲ್ 21: ರಾಜ್ಯ ಪೊಲೀಸ್ ಇಲಾಖೆಯ ಡಿಜಿಪಿ ಡಾ.ಎಂ.ಎ. ಸಲೀಂ ಮಂಗಳೂರಿಗೆ ಆಗಮಿಸಿದ್ದು ಮಂಗಳೂರು ಕಮಿಷನರ್ ಕಚೇರಿಯಲ್ಲಿ ಕಮಿಷನರೇಟ್ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವ್ಯಾಪ್ತಿಯ ಪ್ರಗತಿ ಪರಿಶೀಲನೆ ಸಭೆ ನಡೆಸಿದ್ದಾರೆ. 

ಇದೇ ವೇಳೆ, ಉತ್ತರ ಕರ್ನಾಟಕ ಮೂಲದ ಪೊಲೀಸ್ ಕಾನ್ಸ್ ಟೇಬಲ್ ಗಳಿಗೆ ಹತ್ತು ವರ್ಷದ ಸೇವೆ ಬಳಿಕ ವರ್ಗಾವಣೆಗೆ ಆದೇಶ ಆಗಿದ್ದರೂ, ಮಂಗಳೂರು ಕಮಿಷನರ್ ಸುಧೀರ್ ರೆಡ್ಡಿ ರಿಲೀವ್ ಮಾಡದೇ ಇರುವುದರ ಬಗ್ಗೆ ಪೊಲೀಸ್ ಸಿಬಂದಿ ಕುಟುಂಬಸ್ಥರು ಡಿಜಿಪಿ ಸಲೀಂ ಅವರಿಗೆ ಮನವಿ ನೀಡಿ ಅಳಲು ಹೇಳಿಕೊಂಡಿದ್ದಾರೆ. 

'ಕೋಮುಗಲಭೆ ಕಾರಣ ಕೊಟ್ಟು ಕಮಿಷನರ್ ಇಲ್ಲಿಂದ ರಿಲೀವ್ ಮಾಡಿಲ್ಲ. ಉತ್ತರ ಕರ್ನಾಟಕದ ಜಿಲ್ಲೆಗಳಿಂದ ಬಂದು 10 ವರ್ಷದಿಂದ ಇದ್ದೀವಿ. ಊರಿನಲ್ಲಿ ವಯಸ್ಸಾದವರಿದ್ದಾರೆ. ನಮ್ಮನ್ನೇ ನಂಬಿಕೊಂಡವರು ಇದ್ದಾರೆ. ವರ್ಗಾವಣೆ ಆಗಿ ನಾಲ್ಕು ತಿಂಗಳಾದ್ರೂ ಬಿಟ್ಟುಕೊಟ್ಟಿಲ್ಲ. ಈಗ ಮಕ್ಕಳ ಸ್ಕೂಲ್ ಅಡ್ಮಿಷನ್ ಮಾಡಿಸಬೇಕಾ, ಬೇಡ್ವಾ ಅನ್ನುವ ಪರಿಸ್ಥಿತಿ ಇದೆ. ನಮಗೆ ನ್ಯಾಯ ದೊರಕಿಸಿ ಕೊಡಬೇಕು ಎಂದು ಡಿಜಿಯವರಿಗೆ ಮನವಿ ಮಾಡಿದ್ದೇವೆ' ಎಂದು ಪೊಲೀಸ್ ಸಿಬಂದಿ ಕುಟುಂಬ ಸದಸ್ಯರು ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ‌ನಮ್ಮನ್ನು ರಿಲೀವ್ ಮಾಡದೇ ಇದ್ರೆ ಪ್ರತಿಭಟನೆ ನಡೆಸುವುದಾಗಿ ಹೇಳಿದ ಅವರು, ಇಲ್ಲಿಂದ ಪಾದಯಾತ್ರೆ ಮೂಲಕ ತೆರಳಿ ಮತ್ತೆ ಡಿಜಿಪಿ, ಗೃಹ ಸಚಿವರನ್ನು ಭೇಟಿ ಆಗುತ್ತೇವೆ ಎಂದೂ ಹೇಳಿದರು. 

ಜಿಲ್ಲೆಯ ಪೊಲೀಸ್ ಪ್ರಗತಿ ಪರಿಶೀಲನೆ ಬಳಿಕ ಮಾಧ್ಯಮಕ್ಕೆ ಮಾತನಾಡಿದ ಡಿಜಿಪಿ ಸಲೀಂ, ಕಳೆದ ಒಂದು ವರ್ಷದಿಂದ ಇಲ್ಲಿ ಕಾನೂನು ಸುವ್ಯವಸ್ಥೆ ಉತ್ತಮವಾಗಿದೆ. ಇದನ್ನೇ ಮುಂದುವರಿಸಿಕೊಂಡು ಹೋಗಿ ಅಂತ ಹೇಳಿದ್ದೇನೆ. ಉತ್ತರ ಕರ್ನಾಟಕ ಭಾಗದವರು ವರ್ಗಾವಣೆ ವಿಚಾರದಲ್ಲಿ ಮನವಿ ನೀಡಿದ್ದಾರೆ. ಈ ಬಗ್ಗೆ ಸಭೆಯಲ್ಲಿ ಚರ್ಚೆ ಮಾಡಲಾಗಿದೆ. 15 ಶೇಕಡಾದಂತೆ ಹಂತ ಹಂತವಾಗಿ ರಿಲೀವ್ ಮಾಡಿ ಅಂತ ಹೇಳಿದ್ದೇನೆ‌ ಎಂದು ಹೇಳಿದರು. ‌

ಮಂಗಳೂರು ಕಮಿಷನರ್ ಸುಧೀರ್ ರೆಡ್ಡಿ ವಿರುದ್ಧ ಡಿಸಿಆರ್ ಇ ವಿಭಾಗದ ಎಸ್ಪಿ ಎಸ್.ಎಸ್.ಕಾಶಿ ದೂರು ನೀಡಿರುವ ಬಗ್ಗೆ ಕೇಳಿದ ಪ್ರಶ್ನೆಗೆ, ಡಿಜಿ ಸಲೀಂ ಉತ್ತರಿಸದೇ ಹೊರಟು ಹೋದರು.