ಶಿವಮೊಗ್ಗ ; ಹುಟ್ಟುಹಬ್ಬದ ಪಾರ್ಟಿ ವೇಳೆ ಚಿಕನ್ ಮೂಳೆ ಗಂಟಲಲ್ಲಿ ಸಿಲುಕಿ ಯುವಕ ಸಾವು

19-04-26 02:58 pm       HK News Staffer   ಕ್ರೈಂ

ಹುಟ್ಟುಹಬ್ಬದ ಪಾರ್ಟಿ ವೇಳೆ ಚಿಕನ್ ಮೂಳೆಯೊಂದು ಯುವಕನ ಗಂಟಲಲ್ಲಿ ಸಿಲುಕಿದ್ದರಿಂದ 21 ವರ್ಷದ ಯುವಕನೊಬ್ಬ ಉಸಿರುಗಟ್ಟಿ ಸಾವನ್ನಪ್ಪಿದ ಘಟನೆ ಶಿವಮೊಗ್ಗ ಜಿಲ್ಲೆಯ ಕುಂಸಿ ಸಮೀಪದ ಚನ್ನಹಳ್ಳಿಯಲ್ಲಿ ನಡೆದಿದೆ.

ಶಿವಮೊಗ್ಗ, ಎಪ್ರಿಲ್ 19: ಹುಟ್ಟುಹಬ್ಬದ ಪಾರ್ಟಿ ವೇಳೆ ಚಿಕನ್ ಮೂಳೆಯೊಂದು ಯುವಕನ ಗಂಟಲಲ್ಲಿ ಸಿಲುಕಿದ್ದರಿಂದ 21 ವರ್ಷದ ಯುವಕನೊಬ್ಬ ಉಸಿರುಗಟ್ಟಿ ಸಾವನ್ನಪ್ಪಿದ ಘಟನೆ ಶಿವಮೊಗ್ಗ ಜಿಲ್ಲೆಯ ಕುಂಸಿ ಸಮೀಪದ ಚನ್ನಹಳ್ಳಿಯಲ್ಲಿ ನಡೆದಿದೆ. 

ಯುವಕನನ್ನು ಚೆನ್ನಹಳ್ಳಿ ಗ್ರಾಮದ ನಿವಾಸಿ ಸಚಿನ್ (21) ಎಂದು ಗುರುತಿಸಲಾಗಿದೆ. ಏಪ್ರಿಲ್ 17ರಂದು ರಾತ್ರಿ ಗ್ರಾಮಸ್ಥರೊಬ್ಬರ ಜನ್ಮದಿನದ ಹಿನ್ನೆಲೆಯಲ್ಲಿ ನಿರ್ಮಾಣ ಹಂತದ ಕಟ್ಟಡವೊಂದರ ಬಳಿ ಗೆಳೆಯರಿಗೆ ನಾನ್ ವೆಜ್ ಊಟದ ವ್ಯವಸ್ಥೆ ಮಾಡಲಾಗಿತ್ತು. ಪಾರ್ಟಿ ಮುಗಿಸಿ ಉಳಿದವರೆಲ್ಲರೂ ತಮ್ಮ ಮನೆಗಳಿಗೆ ತೆರಳಿದ್ದರೆ, ಸಚಿನ್ ಮಾತ್ರ ಅದೇ ಕಟ್ಟಡದಲ್ಲಿಯೇ ಉಳಿದುಕೊಂಡಿದ್ದ. ಮರುದಿನ ಬೆಳಗ್ಗೆ ಕಟ್ಟಡ ಕಾಮಗಾರಿ ಮುಂದುವರಿಸಲು ಕಾರ್ಮಿಕರು ಬಂದಾಗ ಸಚಿನ್ ಶವವಾಗಿ ಬಿದ್ದಿರುವುದು ಪತ್ತೆಯಾಗಿದೆ. ತಕ್ಷಣ ಕುಟುಂಬಸ್ಥರು ಆತನನ್ನು ಶಿವಮೊಗ್ಗಕ್ಕೆ ಕೊಂಡೊಯ್ದರೂ, ಅದಾಗಲೇ ಮೃತಪಟ್ಟಿರುವುದು ದೃಢಪಟ್ಟಿದೆ. 

ಸ್ಥಳಕ್ಕೆ ಭೇಟಿ ನೀಡಿದ ಕುಂಸಿ ಪೊಲೀಸರು ಶವವನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದರು. ಸಚಿನ್ ಮದ್ಯಪಾನ ಮಾಡಿದ್ದರಿಂದ ಆಹಾರ ಸೇವನೆಯ ವೇಳೆ ಅಜಾಗರೂಕತೆಯಿಂದ ಗಂಟಲಲ್ಲಿ ಮೂಳೆ ಸಿಲುಕಿದೆ. ಇದು ಶ್ವಾಸನಾಳವನ್ನು ತಡೆದಿದ್ದರಿಂದ ಉಸಿರಾಟ ಸ್ಥಗಿತಗೊಂಡು ಸಾವು ಸಂಭವಿಸಿದೆ ಎಂದು ವೈದ್ಯರು ತಿಳಿಸಿದ್ದಾರೆ. ಕುಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.