ಅಂಬ್ಲಮೊಗರು ; ಸ್ನೇಹಿತರೊಂದಿಗೆ ಕೆರೆ ನೀರಲ್ಲಿ ಆಟವಾಡಲು ಹೋದ ಪಿಯುಸಿ ವಿದ್ಯಾರ್ಥಿ ದಾರುಣ ಸಾವು, ಶವ ಹೊರ ತೆಗೆಯಲು ಹರಸಾಹಸ

19-04-26 10:20 am       HK News Staffer   ಕ್ರೈಂ

ಬೇಸಿಗೆ ರಜೆಯಲ್ಲಿ ಸ್ನೇಹಿತರೊಂದಿಗೆ ಕೆರೆಯಲ್ಲಿ ನೀರಾಟವಾಡಲು ತೆರಳಿದ್ದ ಬಾಲಕನೋರ್ವ ಪಕ್ಕದ ನಾಲೆಯೊಂದರ ಕೆಸರಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಅಂಬ್ಲಮೊಗರು ಗ್ರಾಮದ ಖಂಡಿಲ ಎಂಬಲ್ಲಿ ನಡೆದಿದೆ.

ಉಳ್ಳಾಲ, ಏ.19: ಬೇಸಿಗೆ ರಜೆಯಲ್ಲಿ ಸ್ನೇಹಿತರೊಂದಿಗೆ ಕೆರೆಯಲ್ಲಿ ನೀರಾಟವಾಡಲು ತೆರಳಿದ್ದ ಬಾಲಕನೋರ್ವ ಪಕ್ಕದ ನಾಲೆಯೊಂದರ ಕೆಸರಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಅಂಬ್ಲಮೊಗರು ಗ್ರಾಮದ ಖಂಡಿಲ ಎಂಬಲ್ಲಿ ನಡೆದಿದೆ.

ಅಂಬ್ಲಮೊಗರು ಗ್ರಾಮದ ಜರಿ ಹೌಸ್ ನಿವಾಸಿ ಶಿವರಾಮ್ ಅವರ ಪುತ್ರ ಸೃಜನ್(17) ಮೃತಪಟ್ಟ ಬಾಲಕ. ಸೃಜನ್ ಫ್ರಥಮ ಪಿಯುಸಿ ಮುಗಿಸಿದ್ದು ಬೇಸಿಗೆ ರಜೆ ಇದ್ದ ಕಾರಣ ಶನಿವಾರ ಮಧ್ಯಾಹ್ನ ತನ್ನ ಮೂವರು  ಸ್ನೇಹಿತರೊಂದಿಗೆ ಅಂಬ್ಲಮೊಗರುವಿನ ಖಂಡಿಲ ಎಂಬಲ್ಲಿನ‌ ಖಾಸಗಿ ವಿವಿಗೆ ಸೇರಿದ ಜಮೀನಿನ ಕೆರೆಯಲ್ಲಿ ನೀರಾಟವಾಡಲು ತೆರಳಿದ್ದನೆನ್ನಲಾಗಿದೆ. ಬಳಿಕ ಕೈಕಾಲು ತೊಳೆಯಲು ಪಕ್ಕದ ನಾಲೆಯೊಂದಕ್ಕೆ ಸೃಜನ್ ಏಕಾಂಗಿಯಾಗಿ ಇಳಿದಿದ್ದು, ಈ ವೇಳೆ‌ ಆತನ ಕಾಲುಗಳು ನಾಲೆಯ ಕೆಸರಿನಲ್ಲಿ ಮುಳುಗಿವೆ. ‌ಸೃಜನ್ ನನ್ನು ಮತ್ತೋರ್ವ ಸ್ನೇಹಿತ ರಕ್ಷಿಸಲು ಪ್ರಯತ್ನಿಸಿದ್ದು ಆತನೂ ಕೆಸರಿನಲ್ಲಿ ಮುಳುಗುತ್ತಾನೆ ಎಂದಾಗ ಉಳಿದ ಸ್ನೇಹಿತರು ಆತನನ್ನ ಎಳೆದು ರಕ್ಷಿಸಿದ್ದಾರೆ.

ಘಟನೆಯಿಂದ ಆಘಾತಕ್ಕೊಳಗಾದ ಬಾಲಕರು ವಿಚಾರವನ್ನು ಯಾರಲ್ಲೂ ತಿಳಿಸದೆ ತಮ್ಮ ಮನೆ ಸೇರಿದ್ದರು. ರಾತ್ರಿ 8 ಗಂಟೆಯಾದರೂ ಸೃಜನ್ ಮನೆಗೆ ಮರಳದ ಹಿನ್ನೆಲೆಯಲ್ಲಿ ಕುಟುಂಬದವರು ಹುಡುಕಾಟ ನಡೆಸಿ ಸ್ನೇಹಿತರಲ್ಲಿ ವಿಚಾರಿಸಿದಾಗ ಘಟನೆಯ ಬಗ್ಗೆ ಸಂಪೂರ್ಣ ಮಾಹಿತಿ ಲಭಿಸಿದೆ. ಕೂಡಲೇ ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳ, ಕೊಣಾಜೆ ಪೊಲೀಸರು ಧಾವಿಸಿ ಸೃಜನ್ ಗಾಗಿ ನಾಲೆಯಲ್ಲಿ ಶೋಧ ನಡೆಸಿದ್ದಾರೆ. ನಾಲೆಯಲ್ಲಿ ಭಾರೀ ಹೂಳು ತುಂಬಿದ್ದರಿಂದ ರಕ್ಷಣಾ ಕಾರ್ಯವೂ ಕಷ್ಟವಾಗಿತ್ತು. ರಾತ್ರಿ ವೇಳೆ ನಿರ್ಜನ ಪ್ರದೇಶದಲ್ಲಿ ರಕ್ಷಣಾ ಕಾರ್ಯಕ್ಕೆ ಬೆಳಕಿನ ವ್ಯವಸ್ಥೆಯೂ ಇಲ್ಲದ ಕಾರಣ ಟಿಪ್ಪರ್ ಲಾರಿಗಳ ಹೆಡ್ ಲೈಟ್ ಸಹಾಯದಿಂದ ಮಧ್ಯರಾತ್ರಿ ವರೆಗೂ ಕಾರ್ಯಾಚರಣೆ ನಡೆಸಲಾಗಿತ್ತು. ಉತ್ತರ ಭಾರತದ ನುರಿತ ಕಾರ್ಮಿಕರು ಹರಸಾಹಸ ಪಟ್ಟು ಕೊನೆಗೂ ಮಧ್ಯರಾತ್ರಿ ಬಾಲಕನ ಮೃತದೇಹವನ್ನ ನಾಲೆಯಿಂದ ಮೇಲಕ್ಕೆತ್ತಿದ್ದಾರೆ.

ಮೃತ ಸೃಜನ್ ತಂದೆ ರಿಕ್ಷಾ ಚಾಲಕರಾಗಿದ್ದು, ತಾಯಿ ಜಯಲಕ್ಷ್ಮಿ ಅಂಬ್ಲಮೊಗರು ಗಾಂಧಿನಗರದ ಅಂಗನವಾಡಿಯಲ್ಲಿ ಶಿಕ್ಷಕಿಯಾಗಿದ್ದಾರೆ. ದಂಪತಿಗೆ ಸೃಜನ್ ಹಿರಿಯ ಮಗನಾಗಿದ್ದು, ಮತ್ತೋರ್ವ ಮಗಳು ಇದ್ದಾಳೆ. ಕೊಣಾಜೆ ಪೊಲೀಸರು ಯುಡಿಆರ್ ಪ್ರಕರಣ ದಾಖಲಿಸಿಕೊಂಡಿದ್ದಾರೆ.