ಮೂರನೇ ಮಗುವೂ ಹೆಣ್ಣಾಗುತ್ತದೆಂದು ಗರ್ಭಿಣಿ ಪತ್ನಿ, ಇಬ್ಬರು ಹೆಣ್ಮಕ್ಕಳನ್ನು ಈಜು ಕೊಳದಲ್ಲಿ ಮುಳುಗಿಸಿ ಕೊಂದ ಪಾಪಿ! ಪೊಲೀಸ್ ತನಿಖೆಯಲ್ಲಿ ಕೃತ್ಯ ಬಯಲು

03-04-26 11:00 pm       HK News Staffer   ಕ್ರೈಂ

ತೆಲಂಗಾಣದ ಹನ್ಮಕೊಂಡ ಜಿಲ್ಲೆ, ಐನವೋಲು ಮಂಡಲದ ಪುನ್ನೇಲು ಗ್ರಾಮದಲ್ಲಿ ಭೀಕರ ಘಟನೆಯೊಂದು ನಡೆದಿದೆ. ಪತಿಯೋರ್ವ ಗರ್ಭಿಣಿ ಪತ್ನಿ ಮತ್ತು ಇಬ್ಬರು ಪುಟ್ಟ ಮಕ್ಕಳನ್ನು ನೀರಿನಲ್ಲಿ ಮುಳುಗಿಸಿ ಕೊಲೆ ಮಾಡಿ ಎಸ್ಕೇಪ್‌ ಆಗಲು ಯತ್ನಿಸಿದ್ದಾನೆ. ಆದರೆ ಪತ್ನಿಯ ಕುಟುಂಬಸ್ಥರ ಅನುಮಾನದಿಂದ ಇದೀಗ ಆರೋಪಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.

ಹೈದರಾಬಾದ್, ಏಪ್ರಿಲ್ 3 : ತೆಲಂಗಾಣದ ಹನ್ಮಕೊಂಡ ಜಿಲ್ಲೆ, ಐನವೋಲು ಮಂಡಲದ ಪುನ್ನೇಲು ಗ್ರಾಮದಲ್ಲಿ ಭೀಕರ ಘಟನೆಯೊಂದು ನಡೆದಿದೆ. ಪತಿಯೋರ್ವ ಗರ್ಭಿಣಿ ಪತ್ನಿ ಮತ್ತು ಇಬ್ಬರು ಪುಟ್ಟ ಮಕ್ಕಳನ್ನು ನೀರಿನಲ್ಲಿ ಮುಳುಗಿಸಿ ಕೊಲೆ ಮಾಡಿ ಎಸ್ಕೇಪ್‌ ಆಗಲು ಯತ್ನಿಸಿದ್ದಾನೆ. ಆದರೆ ಪತ್ನಿಯ ಕುಟುಂಬಸ್ಥರ ಅನುಮಾನದಿಂದ ಇದೀಗ ಆರೋಪಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.

ಫರ್ಹತ್‌ ಮತ್ತು ಆಕೆಯ ಇಬ್ಬರು ಮಕ್ಕಳಾದ ಉಮೇರಾ (8), ಆಯೇಷಾ (6) ಮೃತ ದುರ್ದೈವಿಗಳು. ಆರೋಪಿ ಅಜರುದ್ದೀನ್‌ಗೆ ಈ ಮೊದಲು ಉಮೇರಾ ಹಾಗೂ ಆಯೇಷಾ ಹೆಸರಿನ ಇಬ್ಬರು ಹೆಣ್ಣು ಮಕ್ಕಳಿದ್ದು ಪತ್ನಿ ಫರ್ಹತ್‌ ಮೂರನೇ ಭಾರಿಗೆ ಗರ್ಭಿಣಿಯಾಗಿದ್ದಳು. ಆದರೆ ಈ ಬಾರಿಯೂ ಪತ್ನಿಗೆ ಹೆಣ್ಣು ಮಗುವಾಗುತ್ತದೆ ಎಂಬ ಭಯದಿಂದ ಆತಂಕಗೊಂಡಿದ್ದ ಅಜರುದ್ದೀನ್ ಫರ್ಹತ್‌ಗೆ ಗರ್ಭಪಾತ ಮಾಡಲು ಒತ್ತಾಯಿಸಿದ್ದ. ಆದರೆ ಇದಕ್ಕೆ ಪತ್ನಿ ಒಪ್ಪಿರಲಿಲ್ಲ. 

ಹೆಂಡತಿಯ ಈ ನಿರ್ಧಾರದಿಂದ ಅಜರುದ್ದೀನ್‌ ಕೋಪಗೊಂಡಿದ್ದ. ಹೀಗಾಗಿ ವಾರಂಗಲ್-ಖಮ್ಮಮ್ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ತಾನು ಕೆಲಸ ಮಾಡುತ್ತಿದ್ದ ಈಜು ಕೊಳಕ್ಕೆ ಹೆಂಡತಿ ಮತ್ತು ಮಕ್ಕಳನ್ನು ಕರೆದುಕೊಂಡು ಹೋಗಿದ್ದ. ಬಳಿಕ ಮೂವರನ್ನು ನೀರಿನಲ್ಲಿ ಮುಳುಗಿಸಿ ಹತ್ಯೆ ಮಾಡಿದ್ದಾನೆ. ಆ ಬಳಿಕ ಇದೊಂದು ಆಕಸ್ಮಿಕ ಸಾವು ಎಂದು ಎಲ್ಲರನ್ನು ನಂಬಿಸಿದ್ದ. ಆದರೆ ಮೃತ ಮಹಿಳೆಯ ಕುಟುಂಬಸ್ಥರ ಅನುಮಾನದಿಂದಾಗಿ ಪೊಲೀಸರು ಅಜರುದ್ದೀನ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಆರೋಪಿ ಕೃತ್ಯ ಬೆಳಕಿಗೆ ಬಂದಿದೆ.

ಇದೇ ರೀತಿ ಈ ಹಿಂದೆಯೂ ಎರಡು ಬಾರಿ ಪತ್ನಿಗೆ ಹೆಣ್ಣು ಮಗುವಾಗುವ ಭಯದಿಂದ ಅಜರುದ್ದೀನ್‌ ಗರ್ಭಪಾತ ಮಾಡಿಸಿದ್ದ. ಅದಾದ 4 ವರ್ಷಗಳ ನಂತರ ಆಕೆ ಮತ್ತೆ ಗರ್ಭಿಣಿಯಾಗಿದ್ದರು. ಆದರೆ ಈ ಬಾರಿಯೂ ಪತ್ನಿಗೆ ಹೆಣ್ಣು ಮಗುವೇ ಆಗುತ್ತದೆ ಎಂದು ಅನಿಸತೊಡಗಿತ್ತು. ಹೀಗಾಗಿ ಗರ್ಭಪಾತಕ್ಕೆ ಒತ್ತಾಯಿಸಿದ್ದು ಪತ್ನಿ ಒಪ್ಪದೇ ಇದ್ದುದಕ್ಕೆ ಅಜರುದ್ದೀನ್‌ ಭೀಕರ ಕೃತ್ಯ ಎಸಗಿದ್ದು ಪೊಲೀಸರ ತನಿಖೆಯ ವೇಳೆ ತಿಳಿದುಬಂದಿದೆ.