ಬ್ರೇಕಿಂಗ್ ನ್ಯೂಸ್
22-12-20 04:25 pm Headline Karnataka News Network ಕ್ರೈಂ
ತಿರುವನಂತಪುರಂ, ಡಿ.22: ಕೊಟ್ಟಾಯಂ ಚರ್ಚ್ ಒಂದರ ಇಬ್ಬರು ಫಾದರ್ ಮತ್ತು ಸಿಸ್ಟರ್ ಸೇರಿ ತಮ್ಮ ಅನೈತಿಕ ಸಂಬಂಧ ಮುಚ್ಚಿ ಹಾಕುವುದಕ್ಕಾಗಿ ವಿದ್ಯಾರ್ಥಿನಿ ಒಬ್ಬಳನ್ನು ಕೊಂದು ಹಾಕಿದ್ದ ಪ್ರಕರಣದಲ್ಲಿ ಸುದೀರ್ಘ 28 ವರ್ಷಗಳ ಬಳಿಕ ಸಿಬಿಐ ಕೋರ್ಟ್ ಆರೋಪಿಗಳನ್ನು ಅಪರಾಧಿಗಳೆಂದು ಘೋಷಣೆ ಮಾಡಿದೆ. ತಿರುವನಂತಪುರದ ಸಿಬಿಐ ವಿಶೇಷ ನ್ಯಾಯಾಲಯ ಮಂಗಳವಾರ ಮಹತ್ವದ ತೀರ್ಪು ನೀಡಿದ್ದು, ಬುಧವಾರ ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಲಿದೆ.
ಕೊಟ್ಟಾಯಂ ಜಿಲ್ಲೆಯ ಕ್ನಾನಾಯ ಕೆಥೋಲಿಕ್ ಚರ್ಚ್ ನಲ್ಲಿ ಫಾದರ್ ಆಗಿದ್ದ ಥಾಮಸ್ ಕೊಟ್ಟೂರು ಮತ್ತು ಸಿಸ್ಟರ್ ಸೆಫಿ ಅಪರಾಧಿಗಳೆಂದು ತೀರ್ಪು ನೀಡಲಾಗಿದ್ದು, ಇನ್ನೊಬ್ಬ ಆರೋಪಿ ಫಾದರ್ ಜೋಸ್ ಪುತ್ರಿಕಯಿಲ್ ಎಂಬಾತನನ್ನು ಸಾಕ್ಷ್ಯಗಳ ಕೊರತೆಯಿಂದ ಬಿಡುಗಡೆ ಮಾಡಿದೆ.
28 ವರ್ಷಗಳ ಹಿಂದೆ ಆಗಿದ್ದೇನು ?
ಕೆಥೋಲಿಕ್ ಚರ್ಚ್ ನಡೆಸುತ್ತಿದ್ದ ಕಾನ್ವೆಂಟ್ ನಲ್ಲಿ 1992ರ ಮಾರ್ಚ್ 27ರಂದು ಪ್ರಕರಣ ನಡೆದಿತ್ತು. ಕಾನ್ವೆಂಟಿನಲ್ಲಿ 22 ನನ್ ಗಳು ಸೇರಿದಂತೆ 123 ಮಂದಿ ವಿದ್ಯಾರ್ಥಿನಿಯರಿದ್ದರು. ಅದರಲ್ಲಿ ಅಭಯಾ ಎಂಬ 19 ವರ್ಷದ ಯುವತಿ ನನ್ ಆಗಿದ್ದುಕೊಂಡೇ ಪಿಯುಸಿ ಓದುತ್ತಿದ್ದ ಹೆಣ್ಮಗಳು. ಮಾರ್ಚ್ 27ರಂದು ಪರೀಕ್ಷೆ ಇದ್ದುದರಿಂದ ನಸುಕಿನ ಜಾವ ನಾಲ್ಕು ಗಂಟೆಗೆ ಹುಡುಗಿಯನ್ನು ಕಾನ್ವೆಂಟ್ ನೋಡಿಕೊಳ್ಳುತ್ತಿದ್ದ ಸಿಸ್ಟರ್ ಶೆರ್ಲೀ ಎಬ್ಬಿಸಿದ್ದರು. ಹೀಗಾಗಿ ಚಾಪೆಯಿಂದ ಎದ್ದು ಮುಖ ತೊಳೆದುಕೊಂಡು ನೀರು ಕುಡಿಯುವುದಕ್ಕೆಂದು ಅಭಯಾ ಕಿಚನ್ ರೂಮಿಗೆ ಹೋಗಿದ್ದಳು. ಆದರೆ, ಕಿಚನ್ ಹೋದ ಹುಡುಗಿಗೆ ಅಲ್ಲಿನ ದೃಶ್ಯ ನೋಡಿ ಶಾಕ್ ಆಗಿತ್ತು.
ಚರ್ಚಿನ ಇಬ್ಬರು ಫಾದರ್ ಗಳು ಒಬ್ಬಳು ಸಿಸ್ಟರ್ ಆಗಿದ್ದ ಯುವತಿಯ ಜೊತೆಗೆ ಕಾಮದಾಟದಲ್ಲಿ ತೊಡಗಿದ್ದರು. ಕೂಡಲೇ ಹುಡುಗಿ ಅಲ್ಲಿಂದ ಓಡಿ ಹೋಗಲು ಯತ್ನಿಸಿದ್ದಳು. ಆದರೆ, ಫಾದರ್ ಗಳಿಬ್ಬರು ಹುಡುಗಿಯ ಕುತ್ತಿಗೆ ಹಿಡಿದು ಅಮುಕಿದ್ದಾರೆ. ಸಿಸ್ಟರ್ ಸೆಫಿ, ಅಲ್ಲಿದ್ದ ಕತ್ತಿಯಿಂದ ಹೊಟ್ಟೆಗೆ ತಿವಿದಿದ್ದಾಳೆ. ಆನಂತರ ಮೂವರು ಸೇರಿ ಹುಡುಗಿಯನ್ನು ಜೀವಂತವಾಗೇ ಅಲ್ಲೇ ಹೊರಗಿದ್ದ ಬಾವಿಗೆ ಎಸೆದಿದ್ದಾರೆ. ಇದ್ಯಾವುದಕ್ಕೂ ಪ್ರತ್ಯಕ್ಷ ಸಾಕ್ಷಿ ಇಲ್ಲದಿದ್ದುದರಿಂದ ಆತ್ಮಹತ್ಯೆ ಎಂದೇ ಚರ್ಚ್ ಆಡಳಿತ ಬಿಂಬಿಸಿತ್ತು. ಆದರೆ, ಕಾನ್ವೆಂಟ್ ನೋಡಿಕೊಳ್ಳುತ್ತಿದ್ದ ಸಿಸ್ಟರ್, ಹುಡುಗಿಯ ದೇಹದಲ್ಲಿ ಇರಿತದ ಗಾಯಗಳಿದ್ದುದರಿಂದ ಇದು ಆತ್ಮಹತ್ಯೆ ಅಲ್ಲ, ಕೊಲೆಯೆಂದು ಪೊಲೀಸ್ ದೂರು ನೀಡಿದ್ದರು.
ಪ್ರಕರಣ ಮುಚ್ಚಿ ಹಾಕಿದ್ದ ಪೊಲೀಸರು
ಆದರೆ, ಏನೇ ಸಂಶಯಪಟ್ಟು ದೂರು ಕೊಟ್ಟರೂ, ಪೊಲೀಸರು ಆತ್ಮಹತ್ಯೆ ಎಂದೇ ಪ್ರಕರಣ ಮುಗಿಸಲು ನೋಡಿದ್ದಾರೆ. ಈ ಘಟನೆ ಕೇರಳದಾದ್ಯಂತ ಭಾರೀ ಆಕ್ರೋಶಕ್ಕೂ ಕಾರಣವಾಯ್ತು. ಬಳಿಕ ಪ್ರಕರಣದ ತನಿಖೆಯನ್ನು ಕ್ರೈಮ್ ಬ್ರಾಂಚ್ ವಿಭಾಗಕ್ಕೆ ವಹಿಸಲಾಯ್ತು. ತನಿಖೆ ನಡೆಸಿದ ಕ್ರೈಂ ಬ್ರಾಂಚ್ ಅಧಿಕಾರಿಗಳು, ವಿದ್ಯಾರ್ಥಿನಿ ಅಭಯಾ ಆತ್ಮಹತ್ಯೆ ಎಂದೇ ಬಿಂಬಿಸಿ ರಿಪೋರ್ಟ್ ನೀಡಿದ್ದರು. ಇದರಿಂದ ರೋಸಿ ಹೋದ ಸಿಸ್ಟರ್ ಬೆನಕಾಸಿಯಾ ಮತ್ತು 65 ನನ್ ಗಳು ಸೇರಿ ಅಂದಿನ ಕೇರಳದ ಮುಖ್ಯಮಂತ್ರಿ ಕರಣಾಕರನ್ ಅವರಿಗೆ ದೂರು ನೀಡಿದ್ದರು. ಸಿಸ್ಟರ್ ಅಭಯಾ ಅವರನ್ನು ಕೊಲೆ ಮಾಡಲಾಗಿದೆ. ಪೊಲೀಸರು ಸರಿಯಾಗಿ ತನಿಖೆ ನಡೆಸಿಲ್ಲ. ಪ್ರಕರಣ ಮುಚ್ಚಿ ಕೆಲಸ ಮಾಡುತ್ತಿದ್ದಾರೆ. ಸಿಬಿಐ ತನಿಖೆಗೆ ಒಪ್ಪಿಸಬೇಕೆಂದು ನೀಡಿದ್ದ ಮನವಿ ಪರಿಗಣಿಸಿ, ಪ್ರಕರಣವನ್ನು ಕರುಣಾಕರನ್ ಸಿಬಿಐಗೆ ವಹಿಸಿದ್ದರು.
ಸರಿಯಾಗಿ ಒಂದು ವರ್ಷದ ಬಳಿಕ ಅಂದರೆ, 1993 ಮಾರ್ಚ್ 29ರಂದು ಸಿಬಿಐ ಅಧಿಕಾರಿಗಳು ತನಿಖೆಗೆ ಆರಂಭಿಸಿದ್ದರು. ತನಿಖೆಯ ಬಳಿಕ ಸಿಬಿಐ ಕೋರ್ಟಿಗೆ ಸಲ್ಲಿಸಿದ ವರದಿ ಹುಡುಗಿ ಪರವಾಗಿರಲಿಲಲ್ಲ. ಹುಡುಗಿಯನ್ನು ಕೊಲೆ ನಡೆಸಿದ್ದಾಗಿ ಕಂಡುಬರುತ್ತಿದೆ. ಆದರೆ, ಮೆಡಿಕಲ್ ರಿಪೋರ್ಟ್ ಆರೋಪ ಸಾಬೀತು ಮಾಡುವಷ್ಟು ಪ್ರಬಲವಾಗಿಲ್ಲ. ಹಾಗಾಗಿ ಆರೋಪಿಗಳನ್ನು ಪತ್ತೆ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಸಿಬಿಐ ಎಸ್ಪಿ ಎ.ಕೆ.ಓಹ್ರಿ ವರದಿ ನೀಡಿದ್ದರು. ಆದರೆ, ಸಿಬಿಐ ನ್ಯಾಯಾಲಯ ಈ ವರದಿಯನ್ನು ನಿರಾಕರಿಸಿ ಮರು ತನಿಖೆಗೆ ಆದೇಶ ಮಾಡಿತ್ತು.
13 ಬಾರಿ ಸಿಬಿಐ ಅಧಿಕಾರಿಗಳ ತನಿಖೆ
ತನಿಖೆ ಮುಂದುವರಿದು ಫೈನರ್ ರಿಪೋರ್ಟ್ ಎಂದು ಮತ್ತೆ ಕೋರ್ಟಿಗೆ ವರದಿ ಸಲ್ಲಿಕೆಯಾಗಿತ್ತು. ಡೆಪ್ಯುಟಿ ಎಸ್ಪಿ ಸುರೀಂದರ್ ಪೌಲ್ ವರದಿ ಸಲ್ಲಿಸಿದ್ದರು. ಆತ್ಯಹತ್ಯೆ ಅಲ್ಲ, ಕೊಲೆಯಿಂದಲೇ ಘಟನೆ ನಡೆದಿದೆ. ಆದರೆ, ಯಾರು ಕೃತ್ಯ ಎಸಗಿದ್ದಾರೆ ಎಂಬುದನ್ನು ಸಾಬೀತುಪಡಿಸುವ ಸಾಕ್ಷ್ಯ ಇಲ್ಲ. ಮೆಡಿಕಲ್ ರಿಪೋರ್ಟಿನಲ್ಲೂ ಮೂವರು ವೈದ್ಯರು ವಿಭಿನ್ನ ವರದಿ ನೀಡಿದ್ದಾರೆ. ಹೀಗಾಗಿ ಪತ್ತೆಯಾಗದ ಪ್ರಕರಣ ಎಂದು ಮುಗಿಸುತ್ತಿದ್ದೇವೆ ಎಂಬುದಾಗಿ ವರದಿ ನೀಡಲಾಗಿತ್ತು. ಕೋರ್ಟ್ ಆ ವರದಿಯನ್ನೂ ನಿರಾಕರಿಸಿತ್ತು. ಹೀಗೆ 13 ಬಾರಿ ಸಿಬಿಐ ಅಧಿಕಾರಿಗಳ ತಂಡ ತನಿಖೆಗೆ ಬಂದು ವರದಿ ನೀಡಿದ್ದವು ಎನ್ನುತ್ತದೆ, ಇಂಡಿಯನ್ ಎಕ್ಸ್ ಪ್ರೆಸ್ ವರದಿ.
ಈ ನಡುವೆ, 2008ರ ಸೆಪ್ಟಂಬರ್ 4ರಂದು ಕೇರಳ ಹೈಕೋರ್ಟ್, ಪ್ರಕರಣದ ತನಿಖೆಯನ್ನು ಸಿಬಿಐ ಕೇರಳ ಘಟಕ ಕೊಚ್ಚಿನ್ ವಿಭಾಗಕ್ಕೆ ವಹಿಸಿತ್ತು. ಕೊಚ್ಚಿನ್ ಸಿಬಿಐ ತಂಡವೂ ನಾಲ್ಕು ಬಾರಿ ಕೋರ್ಟಿಗೆ ಮನವಿ ಮಾಡಿ, ಸಾಕ್ಷ್ಯಗಳ ಕೊರತೆಯಿಂದ ಪ್ರಕರಣವನ್ನು ಕೊನೆಗೊಳಿಸಲು ಮುಂದಾಗಿತ್ತು. ಆದರೆ, ಹೈಕೋರ್ಟ್ ಈ ಮಧ್ಯೆ ಡಿಎಸ್ಪಿ ನಂದಕುಮಾರನ್ ನಾಯರ್ ಎಂಬ ಅಧಿಕಾರಿಗೆ ತನಿಖೆ ಹೊಣೆ ಒಪ್ಪಿಸಿ ಮೂರು ತಿಂಗಳಲ್ಲಿ ವರದಿ ನೀಡುವಂತೆ ಗಡುವು ನೀಡಿತ್ತು.
ಮನಸ್ಸು ಮಾಡಿದ್ರೆ ಹಿಡಿಯೋದು ಕಷ್ಟನಾ ?
ತನಿಖೆ ಆರಂಭಿಸಿದ ಅಧಿಕಾರಿ, ಅಭಯಾ ಮೃತಪಟ್ಟಿದ್ದ ಕೊಠಡಿಯ ಬಳಿಯಲ್ಲೇ ಇದ್ದ ಸಂಜು ಪಿ. ಮ್ಯಾಥ್ಯೂ ಎಂಬ ವಿದ್ಯಾರ್ಥಿನಿಯ ಹೇಳಿಕೆ ದಾಖಲು ಮಾಡಿದ್ದರು. ಅಭಯಾ ಮೃತಪಟ್ಟಿದ್ದ ಹಿಂದಿನ ದಿನ ಮಾರ್ಚ್ 26ರಂದು ಆರೋಪಕ್ಕೆ ಗುರಿಯಾಗಿದ್ದ ಫಾದರ್ ಥಾಮಸ್ ಕೊಟ್ಟೂರು ನನ್ನು ಹಾಸ್ಟೆಲ್ ಕ್ಯಾಂಪಸ್ ನಲ್ಲಿ ನೋಡಿದ್ದಾಗಿ ಆಕೆ ಹೇಳಿಕೆ ನೀಡಿದ್ದಳು. ಅದೇ ಹೇಳಿಕೆ ಆಧರಿಸಿ ಸಿಬಿಐ ತಂಡ, 2008ರ ನ.19ರಂದು ಆರೋಪಿಗಳಾದ ಥಾಮಸ್ ಕೊಟ್ಟೂರು, ಸಿಸ್ಟರ್ ಸೆಫಿ ಮತ್ತು ಜೋಸ್ ಪುತ್ರಕಯಲ್ ನನ್ನು ಬಂಧಿಸಿದ್ದರು. ಬಳಿಕ 2009ರ ಜುಲೈ 17ರಂದು ಸಿಬಿಐ ಅಧಿಕಾರಿಗಳು ಮೂವರು ಆರೋಪಿಗಳ ವಿರುದ್ಧ ಕೋರ್ಟಿಗೆ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದರು. ಆದರೆ, ಕೋರ್ಟ್ ಪ್ರಕರಣವನ್ನು ವಿಚಾರಣೆ ಕೈಗೆತ್ತಿಕೊಂಡಿದ್ದು ಹತ್ತು ವರ್ಷಗಳ ಬಳಿಕ 2019ರಲ್ಲಿ.
ಕೆಲವರು ಏನೇ ತಿಪ್ಪರಲಾಗ ಹೊಡೆದರೂ ಮಾಡಿದ ಕರ್ಮ ಬೆನ್ನುಬಿಡಲ್ಲ ಎನ್ನುವುದಕ್ಕೆ ಈ ಪ್ರಕರಣ ಸಾಕ್ಷಿ. ಸಾಕ್ಷಿ ನಾಶಪಡಿಸಿ, ಸಿಬಿಐ ಅಧಿಕಾರಿಗಳನ್ನೇ ಸೂಟ್ ಕೇಸು ಕೊಟ್ಟು ಖರೀದಿಸಿ ತಮ್ಮ ಪರವಾಗಿ ವರದಿ ಬರೆಯಿಸಿಕೊಂಡರೂ, ಪುಣ್ಯಾತ್ಮ ಜಡ್ಜ್ ಮಾತ್ರ ಹಿಡಿದ ಹಠ ಬಿಡಲಿಲ್ಲ. ತಮ್ಮ ಕರ್ಮ ಮುಚ್ಚಿ ಹಾಕಲು ಅಮಾಯಕ ಯುವತಿಯನ್ನು ಬಲಿಕೊಟ್ಟಿದ್ದ ಇಬ್ಬರನ್ನು ಜೈಲಿಗೆ ತಳ್ಳಿಯೇ ಬಿಟ್ಟಿದ್ದಾರೆ.
ಹಾಸ್ಟೆಲ್ ಹೊಕ್ಕಿದ್ದ ಕಳ್ಳನೇ ಪ್ರತ್ಯಕ್ಷದರ್ಶಿಯಾಗಿದ್ದ !!
ವಿಶೇಷ ಅಂದ್ರೆ, ಪ್ರಕರಣದಲ್ಲಿ ಸಿಬಿಐ ಅಧಿಕಾರಿಗಳು 177 ಸಾಕ್ಷಿಗಳನ್ನು ಸಂಗ್ರಹ ಮಾಡಿದ್ದರು. ಆದರೆ, ಈ ಪೈಕಿ ಕೆಲವರು ಮರಣ ಹೊಂದಿದ್ದಾರೆ. ಕೆಲವರು ಚರ್ಚ್ ಆಡಳಿತದ ಪರವಾಗಿ ನಿಂತು ಉಲ್ಟಾ ಹೊಡೆದಿದ್ದಾರೆ. ಸಂತ್ರಸ್ತ ಯುವತಿಯ ತಂದೆ- ತಾಯಿ 2016ರಲ್ಲಿ ತೀರಿಕೊಂಡಿದ್ದರು. ಕಾನ್ವೆಂಟ್ ನೋಡಿಕೊಂಡಿದ್ದ ಪ್ರಮುಖ ಸಾಕ್ಷಿಯಾಗಿದ್ದ ಸಿಸ್ಟರ್ ಲೀಸಿಯಕ್ಸ್ ಮರಣ ಹೊಂದಿದ್ದರು.
ಅಭಯಾ ಕೊಲೆಯಾದ ಸಂದರ್ಭದಲ್ಲಿ ವಾಚ್ ಮನ್ ಆಗಿದ್ದ ಪ್ರಮುಖ ಸಾಕ್ಷಿಯನ್ನು ಕೊಲ್ಲಲಾಗಿತ್ತು. ಇತರೇ ಒಂಬತ್ತು ಮಂದಿ ಚರ್ಚ್ ಪಾದ್ರಿಗಳ ವಿರುದ್ಧ ಸಾಕ್ಷಿ ನುಡಿಯಲು ನಿರಾಕರಿಸಿದ್ದರು. ಕೊನೆಗೆ ಪ್ರತ್ಯಕ್ಷದರ್ಶಿಯ ಸಾಕ್ಷ್ಯವನ್ನು ಕೋರ್ಟ್ ಗಂಭೀರವಾಗಿ ಪರಿಗಣಿಸಿತ್ತು. ಅಭಯಾ ಕೊಲೆಯಾದ ರಾತ್ರಿ ಅಡಕ್ಕ ರಾಜು ಎಂಬಾತ ಕಳವು ಮಾಡುವುದಕ್ಕಾಗಿ ಹಾಸ್ಟೆಲ್ ಕ್ಯಾಂಪಸ್ ಹೊಕ್ಕಿದ್ದ. ಆತ ನೀಡಿದ ಹೇಳಿಕೆಯಲ್ಲಿ ಮೂವರು ಸೇರಿ ಬಾವಿಗೆ ನೂಕಿದ್ದನ್ನು ನೋಡಿದ್ದೆ ಎಂದಿದ್ದ. ವಿಚಾರಣೆ ವೇಳೆ ಕಳ್ಳನೊಬ್ಬನ ಸಾಕ್ಷ್ಯ ಪರಿಗಣಿಸುವುದು ಹೇಗೆ ಎಂಬ ಪ್ರಶ್ನೆ ಎದುರಾಗಿತ್ತು. ಕೋರ್ಟಿನಲ್ಲಿ ವಕೀಲರ ಪ್ರಶ್ನೆಗೆ ಪ್ರತಿಕ್ರಿಯಿಸಿದ್ದ ಅಡಕ್ಕ ರಾಜು, ನನಗೂ ಹೆಣ್ಮಕ್ಕಳಿದ್ದಾರೆ. ಮಕ್ಕಳಿಗೆ ನೋವು ಕೊಡುವುದನ್ನು ನೋಡಲು ಆಗುವುದಿಲ್ಲ. ನನಗೂ ದೊಡ್ಡ ಮೊತ್ತದ ಹಣ ಕೊಡಲು ಬಂದಿದ್ದರು. ಆದರೆ, ಎಲ್ಲವನ್ನೂ ನಿರಾಕರಿಸಿದ್ದೇನೆ ಎಂದು ಹೇಳಿಕೆ ಕೊಟ್ಟಿದ್ದ. ಕೋರ್ಟ್ ಇಂದು ತೀರ್ಪು ಪ್ರಕಟಿಸಿದ ಬಳಿಕ ಪ್ರತಿಕ್ರಿಯಿಸಿರುವ ಅಡಕ್ಕ ರಾಜು, ನನ್ನ ಮಗಳಿಗೆ ನ್ಯಾಯ ಸಿಕ್ಕಂತಾಗಿದೆ. ತುಂಬ ಸಂತೋಷವಾಗಿದೆ ಎಂದಿದ್ದಾರೆ.
Kerala Sister Abhaya Murder Mystery a detailed crime report by Headline Karnataka. The verdict came 28 years after the body of the nun was found in a well of her convent hostel in Kottayam.
09-08-25 08:00 pm
HK Staff
ಎರಡು ವಂದೇ ಭಾರತ್, ಮೆಟ್ರೋ ಯಲ್ಲೋ ಲೈನ್ ಅನಾವರಣಕ್ಕೆ...
09-08-25 07:28 pm
Siddaramaiah,Ibrahim: ಸಿದ್ದರಾಮಯ್ಯ ಎರಡು ಬಾರಿ ಮ...
09-08-25 03:32 pm
Fraud Case, Dhruva Sarja, Mumbai: ಆಕ್ಷನ್ ಪ್ರಿ...
09-08-25 01:40 pm
ನೂರಾರು ಕೊಲೆ ಮಾಡಿಸಲು ಧರ್ಮಸ್ಥಳದ ಧರ್ಮಾಧಿಕಾರಿ ದಾವ...
08-08-25 06:23 pm
09-08-25 07:38 pm
HK Staff
ಭದ್ರತಾ ಸಲಹೆಗಾರ ಅಜಿತ್ ದೋವಲ್ - ರಷ್ಯಾ ಉಪ ಪ್ರಧಾನಿ...
09-08-25 02:49 pm
ಮಧ್ಯಪ್ರದೇಶದ ಈ ಜಾಗದಲ್ಲಿದ್ಯಂತೆ ಅಪಾರ ಪ್ರಮಾಣದ ಚಿನ...
07-08-25 10:02 pm
ಸಂಘರ್ಷ ನಿರತ ಜಗತ್ತಿಗೆ ಹಿಂದು ಧರ್ಮದಲ್ಲಿ ಮದ್ದು ಇದ...
07-08-25 09:42 pm
ಕೇರಳ ಚರ್ಚ್ ಪ್ರತಿಭಟನೆಯಲ್ಲಿ ಇಸ್ಲಾಮಿಕ್ ಮೂಲಭೂತವಾದ...
06-08-25 12:15 pm
09-08-25 08:10 pm
Mangalore Correspondent
Father Muller Medical College, Hospital, Mang...
09-08-25 04:22 pm
Dharmasthala,16th Spot at Bahubali Hill: ಧರ್ಮ...
09-08-25 02:16 pm
Udupi, Talaq; ವರದಕ್ಷಿಣೆ ಕಿರುಕುಳ ; ವಿದೇಶದಿಂದ ಮ...
09-08-25 11:36 am
Roshan Saldanha, ED Raid, Mangalore, Fraud: ರ...
08-08-25 11:10 pm
08-08-25 10:07 pm
Bangalore Correspondent
ಮಸಾಜ್ ಹೆಸರಲ್ಲಿ ಪುರುಷರಿಗೆ ದೇಹ ಸುಖಕ್ಕೆ ಒತ್ತಾಯ,...
08-08-25 09:44 pm
ಹೆಚ್ಚು ಲೈಕ್ಸ್, ಫಾಲೋವರ್ಸ್ ಸಿಗ್ತಾರೆ ಅಂತ ಕುಖ್ಯಾತ...
08-08-25 12:30 pm
ಕುಖ್ಯಾತ ಕಳ್ಳನಿಗೆ ತನ್ನ ಮನೆಯಲ್ಲೇ ಆಶ್ರಯ ಕೊಟ್ಟಿದ್...
08-08-25 12:27 pm
2014 Kulai Sumathi Prabhu Murder Case: 2014 ರ...
08-08-25 12:21 pm