Lokayukta Corruption, Bengaluru SP Srinath Joshi; ಲೋಕಾಯುಕ್ತ ಅಧಿಕಾರಿಗಳೇ ಭ್ರಷ್ಟಾಚಾರದಲ್ಲಿ ಶಾಮೀಲು ; ಬೆಂಗಳೂರು ಎಸ್ಪಿ ಶ್ರೀನಾಥ್ ಜೋಶಿ ಎತ್ತಂಗಡಿ, ಅಬಕಾರಿ ಇಲಾಖೆ ಅಧಿಕಾರಿಗಳಿಂದ ದಾಳಿ ನೆಪದಲ್ಲಿ ವಸೂಲಿ ಮಾಡ್ತಿದ್ದ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ !  

14-06-25 05:59 pm       Bengaluru Staff   ಕ್ರೈಂ

ರಾಜ್ಯದಲ್ಲಿ ಭ್ರಷ್ಟರ ಹೆಡೆಮುರಿ ಕಟ್ಟಿ ಸ್ವಸ್ಥ ಸಮಾಜ ಕಟ್ಟುವ ಗುರುತರ ಜವಾಬ್ದಾರಿ ಹೊತ್ತಿರುವ ಲೋಕಾಯುಕ್ತ ಅಧಿಕಾರಿಗಳೇ ಕೋಟಿ ಕೋಟಿ ಕೊಳ್ಳೆ ಹೊಡೆಯುತ್ತಿರುವ ಆರೋಪ ಕೇಳಿಬಂದಿದೆ.

ಬೆಂಗಳೂರು, ಜೂನ್ 14: ರಾಜ್ಯದಲ್ಲಿ ಭ್ರಷ್ಟರ ಹೆಡೆಮುರಿ ಕಟ್ಟಿ ಸ್ವಸ್ಥ ಸಮಾಜ ಕಟ್ಟುವ ಗುರುತರ ಜವಾಬ್ದಾರಿ ಹೊತ್ತಿರುವ ಲೋಕಾಯುಕ್ತ ಅಧಿಕಾರಿಗಳೇ ಕೋಟಿ ಕೋಟಿ ಕೊಳ್ಳೆ ಹೊಡೆಯುತ್ತಿರುವ ಆರೋಪ ಕೇಳಿಬಂದಿದೆ. ಐಪಿಎಸ್ ಅಧಿಕಾರಿಯೂ ಆಗಿರುವ, ಬೆಂಗಳೂರು ನಗರ ಲೋಕಾಯುಕ್ತ ಎಸ್ಪಿ ಮಹದೇವ ಶ್ರೀನಾಥ ಜೋಶಿ ಮತ್ತು ಇತರ ಹಿರಿಯ ಅಧಿಕಾರಿಗಳ ವಿರುದ್ಧ ಗಂಭೀರ ಆರೋಪ ಕೇಳಿಬಂದಿದ್ದು, ಲೋಕಾಯುಕ್ತ ಅಧಿಕಾರಿಗಳೇ ಈ ಬಗ್ಗೆ ತನಿಖೆ ಆರಂಭಿಸಿದ್ದಾರೆ.

ಅಕ್ರಮ ಆಸ್ತಿ ಗಳಿಸಿರುವ ವಿಚಾರದಲ್ಲಿ ಬೇರೆ ಬೇರೆ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸಿ ಲೋಕಾಯುಕ್ತದಿಂದ ದಾಳಿ ನಡೆಸುವುದಾಗಿ ಬೆದರಿಸಿ ಹಣ ಕೀಳುತ್ತಿದ್ದ ಆರೋಪದಲ್ಲಿ ಕೆಎಸ್ಸಾರ್ಪಿಯ ಮಾಜಿ ಕಾನ್ಸ್ ಟೇಬಲ್ ನಿಂಗಪ್ಪ ಎಂಬಾತನನ್ನು ಲೋಕಾಯುಕ್ತ ಬಂಧಿಸಿದ್ದು, ಆತನನ್ನು ವಿಚಾರಣೆ ನಡೆಸಿದಾಗ ಹಿರಿಯ ಅಧಿಕಾರಿಗಳೊಂದಿಗೆ ನಂಟು ಇರುವುದು ಬೆಳಕಿಗೆ ಬಂದಿದೆ. ಈ ಬಗ್ಗೆ ಖಚಿತ ಮಾಹಿತಿ ಆಧರಿಸಿ ಬೆಂಗಳೂರು ಲೋಕಾಯುಕ್ತ ಎಸ್ಪಿ ಶ್ರೀನಾಥ್ ಜೋಶಿ ಅವರನ್ನು ಲೋಕಾಯುಕ್ತದಿಂದಲೇ ತೆಗೆದು ಹಾಕಲಾಗಿದೆ.

ನಿಂಗಪ್ಪ ಎಂಬ ವ್ಯಕ್ತಿ ತಾನು ಲೋಕಾಯುಕ್ತ ಡಿವೈಎಸ್ಪಿ ಎಂದು ಹೇಳಿ ಪರಿಚಯ ಮಾಡಿಕೊಂಡು ಬೆಂಗಳೂರು ಸೇರಿ ರಾಜ್ಯದಲ್ಲಿ ಬೇರೆ ಬೇರೆ ಜಿಲ್ಲೆಯ ಸರ್ಕಾರಿ ಅಧಿಕಾರಿಗಳಿಗೆ ಕರೆ ಮಾಡಿ ದಾಳಿ ಮಾಡುವುದಾಗಿ ಬೆದರಿಸುತ್ತಿದ್ದ. ಈ ವೇಳೆ, ಡೀಲ್ ಕುದುರಿಸುತ್ತಿದ್ದ ನಿಂಗಪ್ಪ ಅದರ ಪಾಲನ್ನು ಲೋಕಾಯುಕ್ತದ ಅಸಲಿ ಅಧಿಕಾರಿಗಳಿಗೆ ಕೊಡುತ್ತಿದ್ದ ಎನ್ನುವುದು ತನಿಖೆಯಲ್ಲಿ ತಿಳಿದುಬಂದಿದೆ. ಈ ಬಗ್ಗೆ ನಿಂಗಪ್ಪ ಮತ್ತು ಲೋಕಾಯುಕ್ತ ಎಸ್ಪಿ ಶ್ರೀನಾಥ್ ಜೋಷಿ ಮಾತನಾಡಿರುವ ಕಾಲ್ ಡಿಟೈಲ್ಸ್ ಸಿಕ್ಕಿದ್ದು, ಅದರಲ್ಲಿ ಭ್ರಷ್ಟಾಚಾರದ ರಹಸ್ಯ ಅಡಗಿದೆ ಎಂದು ಹೇಳಲಾಗುತ್ತಿದೆ.

ಇದಲ್ಲದೆ, ಈ ರೀತಿ ಭ್ರಷ್ಟಾಚಾರದಲ್ಲಿ ಗಳಿಸಿದ ಅಕ್ರಮ ಸಂಪತ್ತನ್ನು ಕಾನೂನು ಕಣ್ಣಿನಿಂದ ಮತ್ತು ತೆರಿಗೆ ತಪ್ಪಿಸಲು ಬಿಟ್ ಕಾಯಿನ್ ಮೇಲೆ ಹೂಡಿಕೆ ಮಾಡಿದ್ದಾರೆ ಎಂಬ ಮಾಹಿತಿಯೂ ಇದೆ. ಶ್ರೀನಾಥ್ ಜೋಷಿ ಅವರಲ್ಲದೆ, ಓರಗೆಯ ಇನ್ನೊಬ್ಬ ಐಪಿಎಸ್ ಅಧಿಕಾರಿಯೂ ಇದೇ ರೀತಿ ಅಕ್ರಮ ಹಣ ಮಾಡಿದ್ದಾರೆಂಬ ಆರೋಪ ಇದೆ. ಈ ವಿಚಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಗಮನಕ್ಕೆ ಬರುತ್ತಲೇ ಆರೋಪ ಹೊತ್ತವರನ್ನು ಇಲಾಖೆಯಿಂದ ಬಿಡುಗಡೆ ಮಾಡಲಾಗಿದೆ. ಆದರೆ ಅವರ ಮೇಲೆ ಕ್ರಮ ಜರುಗಿಸುವ ಬದಲು ಮೃದು ಧೋರಣೆ ತಳೆದಿದ್ದಾರೆ ಎನ್ನುವ ವಿಚಾರವೂ ಚರ್ಚೆಗೀಡಾಗಿದೆ. ಇದೊಂದು ರೀತಿಯಲ್ಲಿ ಬೇಲಿಯೇ ಎದ್ದು ಹೊಲ ಮೇಯ್ದಂತೆ ಆಗಿದ್ದು, ಹೈಕೋರ್ಟ್ ನಿಂದ ಫುಲ್ ಪವರ್ ಪಡೆದು ಮೀಸೆ ತಿರುವಿಕೊಂಡಿದ್ದ ಲೋಕಾಯುಕ್ತ ಅಧಿಕಾರಿಗಳ ಬಗ್ಗೆ ಸಾರ್ವಜನಿಕ ನೆಲೆಯಲ್ಲಿ ಅನುಮಾನ ತೋರುವಂತಾಗಿದೆ.

ಬಿಡಿಎ ಮತ್ತು ಅಬಕಾರಿ ಇಲಾಖೆಗಳ ಅಧಿಕಾರಿಗಳಿಗೆ ಕರೆ ಮಾಡಿ ಹಣ ವಸೂಲಿ ಮಾಡುತ್ತಿದ್ದ ಪ್ರಕರಣದಲ್ಲಿ ಲೋಕಾಯುಕ್ತ ಎಸ್ಪಿ ವಂಶಿಕೃಷ್ಣ ನೇತೃತ್ವದ ತಂಡವು ನಿಂಗಪ್ಪನನ್ನು ಬಂಧಿಸಿ ವಿಚಾರಣೆ ಕೈಗೊಂಡಾಗ ಪ್ರಕರಣ ಬೆಳಕಿಗೆ ಬಂದಿದೆ. ಇಲಾಖೆಯ ಹಿರಿಯ ಅಧಿಕಾರಿಗಳೇ ನಿಂಗಪ್ಪ ಜೊತೆಗೆ ಶಾಮೀಲಾಗಿದ್ದಾರೆಂಬ ಮಾಹಿತಿ ದೊರಕಿದೆ.

In a stunning twist that has sent shockwaves across Karnataka’s administrative and anti-corruption circles, senior Lokayukta officials, including Bengaluru City Lokayukta SP Mahadev Srinath Joshi (an IPS officer), have come under the scanner for alleged involvement in a multi-crore extortion racket.