ಡಿಸಿಸಿ ಬ್ಯಾಂಕ್ ಸಾಲಕ್ಕೆ ಜಾಮೀನು ನಿಂತು ಚೆಕ್ ನೀಡಿದ್ದ ಶಾಲಾ ಶಿಕ್ಷಕ ; ಚೆಕ್ ಬೌನ್ಸ್ ಆಗಿ ಸಿಕ್ಕಿಬಿದ್ದ ಕಾರಣಕ್ಕೆ ಜೈಲು ಶಿಕ್ಷೆ, ಜೆಎಂಎಫ್‌ ಕೋರ್ಟ್‌ ತೀರ್ಪಿನಿಂದ ಸರ್ಕಾರಿ ನೌಕರಿಗೆ ಕುತ್ತು ಭೀತಿ ! 

14-11-25 03:34 pm       Mangalore Correspondent   ಕರಾವಳಿ

ಸಾಲಕ್ಕೆ ಜಾಮೀನು ನಿಂತ ಕಾರಣಕ್ಕೆ ಚೆಕ್ ನೀಡಿ ಅಮಾನ್ಯಗೊಂಡ ಪ್ರಕರಣದಲ್ಲಿ ಪ್ರಾಥಮಿಕ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕರೊಬ್ಬರಿಗೆ ಮಂಗಳೂರಿನ ಒಂಭತ್ತನೇ ಜೆಎಂಎಫ್‌ ನ್ಯಾಯಾಲಯ ಜೈಲು ಶಿಕ್ಷೆ ವಿಧಿಸಿದ್ದು ಇದರಿಂದಾಗಿ ಸರ್ಕಾರಿ ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. 

ಮಂಗಳೂರು, ನ.14 : ಸಾಲಕ್ಕೆ ಜಾಮೀನು ನಿಂತ ಕಾರಣಕ್ಕೆ ಚೆಕ್ ನೀಡಿ ಅಮಾನ್ಯಗೊಂಡ ಪ್ರಕರಣದಲ್ಲಿ ಪ್ರಾಥಮಿಕ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕರೊಬ್ಬರಿಗೆ ಮಂಗಳೂರಿನ ಒಂಭತ್ತನೇ ಜೆಎಂಎಫ್‌ ನ್ಯಾಯಾಲಯ ಜೈಲು ಶಿಕ್ಷೆ ವಿಧಿಸಿದ್ದು ಇದರಿಂದಾಗಿ ಸರ್ಕಾರಿ ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. 

ಬಂಟ್ವಾಳದ ಕಾವಳಕಟ್ಟೆಯಲ್ಲಿರುವ ಕಲೈ ಚಂದ್ರಮೌಳಿ ಪ್ರಾಥಮಿಕ ಶಾಲೆಯ ಶಿಕ್ಷಕರಾದ ಚಂದ್ರಶೇಖರ್ ಎಸ್. ನಾಯಕ್ ಶಿಕ್ಷೆಗೊಳಗಾದವರು. ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ಕೊಡಿಯಾಲ್‌ಬೈಲ್‌ ಶಾಖೆಯಲ್ಲಿ ಪಡೆದ ಸಾಲಕ್ಕೆ ಪ್ರತಿಯಾಗಿ ನೀಡಿದ್ದ ಚೆಕ್ ಅಮಾನ್ಯಗೊಂಡಿತ್ತು. ಬ್ಯಾಂಕ್‌ ಕಡೆಯಿಂದ ಕಾನೂನು ಪ್ರಕ್ರಿಯೆಯನ್ನು ಪೂರೈಸಿದ ಬಳಿಕ ಮಂಗಳೂರಿನ ಜೆಎಂಎಫ್‌ ನ್ಯಾಯಾಲಯದಲ್ಲಿ ಕ್ರಿಮಿನಲ್ ಕೇಸ್ ದಾಖಲಿಸಲಾಗಿತ್ತು.

ಪ್ರಕರಣದ ವಿಚಾರಣೆ ನಡೆಸಿದ 9ನೇ ಜೆಎಂಎಫ್‌ ಕೋರ್ಟ್ ನ್ಯಾಯಾಧೀಶೆ ಡಾ. ಶಿಲ್ಪಾ ಬ್ಯಾಡಗಿ ಅವರು ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಆರೋಪಿಗೆ ರೂ. 2.42 ಲಕ್ಷ ದಂಡ ಹಾಗೂ ಒಂದು ತಿಂಗಳ ಜೈಲು ಶಿಕ್ಷೆಯನ್ನು ವಿಧಿಸಿ ತೀರ್ಪು ನೀಡಿದ್ದಾರೆ. ನ್ಯಾಯಾಲಯದ ತೀರ್ಪಿನಿಂದಾಗಿ ಸರ್ಕಾರಿ ನೌಕರಿಯಲ್ಲಿ ಇರುವ ಚಂದ್ರಶೇಖರ್ ನಾಯಕ್ ತಮ್ಮ ಸರ್ಕಾರಿ ನೌಕರಿ ಕಳೆದುಕೊಳ್ಳುವ ಭೀತಿಯನ್ನು ಎದುರಿಸುತ್ತಿದ್ದಾರೆ.

ಮಂಗಳೂರಿನ ದಿವ್ಯಶ್ರೀ ಡಿ.ಕೆ. ಎಂಬವರು ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ಕೊಡಿಯಾಲ್‌ಬೈಲ್‌ ಶಾಖೆಯಿಂದ ಸಾಲ ಪಡೆದಿದ್ದು ಈ ಸಾಲಕ್ಕೆ ಚಂದ್ರಶೇಖರ್ ನಾಯಕ್ ಜಾಮೀನುದಾರರಾಗಿದ್ದರು. ದಿವ್ಯಶ್ರೀ ಪಡೆದ ಸಾಲವನ್ನು ಸಕಾಲಕ್ಕೆ ತೀರಿಸದೆ ಸುಸ್ತಿಯಾಗಿತ್ತು. ಈ ಬಗ್ಗೆ ಸಾಲ ವಸೂಲಾತಿಗಾಗಿ ಸಹಕಾರಿ ಕಾಯ್ದೆಯನ್ವಯ ಬ್ಯಾಂಕ್‌ ಕಾನೂನು ಪ್ರಕ್ರಿಯೆ ಜರುಗಿಸಿತ್ತು.

ಈ ಮಧ್ಯೆ, ಬ್ಯಾಂಕ್‌ನ್ನು ಸಂಪರ್ಕಿಸಿದ ಕಾವಳಕಟ್ಟೆ ಶಾಲೆಯ ಹೆಡ್ ಮಾಸ್ಟರ್ ಚಂದ್ರಶೇಖರ್ ನಾಯಕ್ ಸಾಲದ ಮರು ಪಾವತಿಗಾಗಿ ಚೆಕ್ ನೀಡಿದ್ದರು. ಈ ಚೆಕ್ ಅಮಾನ್ಯಗೊಂಡ ಹಿನ್ನೆಲೆಯಲ್ಲಿ ಚಂದ್ರಶೇಖರ್ ನಾಯಕ್ ವಿರುದ್ಧ ಬ್ಯಾಂಕ್ ಕಾನೂನು ಪ್ರಕ್ರಿಯೆ ಆರಂಭಿಸಿತ್ತು. ಬ್ಯಾಂಕಿನ ಪರವಾಗಿ 18 ದಾಖಲೆಗಳನ್ನು ಹಾಜರುಪಡಿಸಲಾಗಿತ್ತು. ಮೌಖಿಕ ಸಾಕ್ಷಿ ಮತ್ತು ದಾಖಲೆಗಳನ್ನು ಪರಿಶೀಲಿಸಿದ ನ್ಯಾಯಾಲಯ, ಸಾಲ ಪಡೆದ ವ್ಯಕ್ತಿಯ ಬದಲು ಜಾಮೀನು ನಿಂತು ಚೆಕ್ ನೀಡಿದ ಆರೋಪಿಗೆ ಶಿಕ್ಷೆ ಪ್ರಕಟಿಸಿ ತೀರ್ಪು ನೀಡಿದೆ. ಶಾಲಾ ಶಿಕ್ಷಕ ಸಾಲದಲ್ಲಿ ತನ್ನ ನೇರ ಪಾತ್ರ ಇಲ್ಲದಿದ್ದರೂ ಜೈಲಿಗೆ ಹೋಗುವ ಸ್ಥಿತಿ ಬಂದಿದೆ.

A government primary school headmaster has been sentenced to jail by the 9th JMFC Court in Mangaluru after a cheque he issued as a loan guarantor bounced. The conviction has now put his government job in jeopardy.