ದೆಹಲಿಯಲ್ಲಿ ಬಿ.ಎಲ್.ಸಂತೋಷ್ ಅಚ್ಚರಿಯ ನಡೆ ; ಜೆಡಿಎಸ್ ವರಿಷ್ಠ ಎಚ್‌.ಡಿ ರೇವಣ್ಣ ಭೇಟಿ, ರಾಜ್ಯ ರಾಜಕೀಯ ಚರ್ಚೆ !! 

23-07-21 10:28 pm       Headline Karnataka News Network   ಕರ್ನಾಟಕ

ರಾಜ್ಯದಲ್ಲಿ ಸಿಎಂ ಬದಲಿಸಲು ಕಸರತ್ತು ನಡೆದಿರುವಾಗಲೇ ಅತ್ತ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರು ಜೆಡಿಎಸ್ ಧುರೀಣ ಎಚ್.ಡಿ.ರೇವಣ್ಣ ಅವರನ್ನು ದೆಹಲಿಗೆ ಕರೆಸಿಕೊಂಡು ರಾಜ್ಯ ರಾಜಕೀಯದ ಬಗ್ಗೆ ಮಾತುಕತೆ ನಡೆಸಿದ್ದಾರೆ ಎನ್ನಲಾಗುತ್ತಿದ್ದು ಕುತೂಹಲ ಮೂಡಿಸಿದೆ.

ಬೆಂಗಳೂರು, ಜುಲೈ 23: ರಾಜ್ಯದಲ್ಲಿ ಸಿಎಂ ಬದಲಿಸಲು ಕಸರತ್ತು ನಡೆದಿರುವಾಗಲೇ ಅತ್ತ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರು ಜೆಡಿಎಸ್ ಧುರೀಣ ಎಚ್.ಡಿ.ರೇವಣ್ಣ ಅವರನ್ನು ದೆಹಲಿಗೆ ಕರೆಸಿಕೊಂಡು ರಾಜ್ಯ ರಾಜಕೀಯದ ಬಗ್ಗೆ ಮಾತುಕತೆ ನಡೆಸಿದ್ದಾರೆ ಎನ್ನಲಾಗುತ್ತಿದ್ದು ಕುತೂಹಲ ಮೂಡಿಸಿದೆ. ಈ ಭೇಟಿ ವೇಳೆ ರೇವಣ್ಣ ಪುತ್ರ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಕೂಡ ಜೊತೆಗಿದ್ದರು. 

ಕರ್ನಾಟಕದ ರಾಜಕೀಯ ಬೆಳವಣಿಗೆ ಬಗ್ಗೆ ಚರ್ಚಿಸಲು ಸಂತೋಷ್ ಅವರೇ ರೇವಣ್ಣ ಅವರನ್ನು ದೆಹಲಿಗೆ ಕರೆಸಿಕೊಂಡು ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ. ರಾಜ್ಯದಲ್ಲಿ ಸಿಎಂ ಯಡಿಯೂರಪ್ಪ ಅವರನ್ನು ಬದಲಾಯಿಸುವ ವಿಚಾರದಲ್ಲಿ 500ಕ್ಕೂ ಹೆಚ್ಚು ವೀರಶೈವ, ಲಿಂಗಾಯತ ಸ್ವಾಮೀಜಿಗಳು ಬೀದಿಗೆ ಬಂದು ಬಿಜೆಪಿ ವಿರುದ್ಧ ಕಿಡಿಕಾರಿದ್ದ ಬೆಳವಣಿಗೆ ಆಗಿತ್ತು. ಯಡಿಯೂರಪ್ಪ ಅವರನ್ನು ಸಿಎಂ ಸ್ಥಾನದಿಂದ ಕೈಬಿಡುವ ಬಗ್ಗೆ ಆಕ್ರೋಶ ಹೊರಹಾಕಿದ್ದರು. 

ಯಡಿಯೂರಪ್ಪ ಒಂದು ವೇಳೆ ಪಕ್ಷದ ವಿರುದ್ಧ ಬಂಡಾಯ ಎದ್ದರೆ ಅಥವಾ ಯಡಿಯೂರಪ್ಪ ಪರವಾಗಿ ಒಂದಷ್ಟು ಮಂದಿ ರಾಜಿನಾಮೆ ಒತ್ತಡ ಹೇರಿದರೆ ಬಿಜೆಪಿ ಸರಕಾರ ಉಳಿಸಿಕೊಳ್ಳಲು ಜೆಡಿಎಸ್ ಬೆಂಬಲ ಪಡೆಯುವ ಬಗ್ಗೆ ಮಾತುಕತೆ ನಡೆದಿದೆ ಎನ್ನಲಾಗಿದೆ. ಮಾಜಿ ಸಿಎಂ ಕುಮಾರಸ್ವಾಮಿ ತಾವು ಬಿಜೆಪಿ ಬಗ್ಗೆ ಸಾಫ್ಟ್ ಕಾರ್ನರ್ ಹೊಂದಿದ್ದಾಗಿ ಆರೋಪ ಬರದಂತೆ ನೋಡಿಕೊಳ್ಳಲು, ಅವರೇ ತನ್ನ ಸೋದರನನ್ನು ದೆಹಲಿಗೆ ಕಳಿಸಿಕೊಟ್ಟಿದ್ದಾರೆ ಎನ್ನಲಾಗಿದೆ. 

ಬಿ.ಎಲ್. ಸಂತೋಷ್ ಕರ್ನಾಟಕ ಮೂಲದ ಫುಲ್ ಟೈಮ್ ಪ್ರಚಾರಕ್ ಆಗಿದ್ದು ಬಿಜೆಪಿ ಸಂಘಟನಾ ಕಾರ್ಯದರ್ಶಿ ಆದಬಳಿಕ ರಾಜ್ಯ ಬಿಜೆಪಿ ಮೇಲೆ ಹಿಡಿತ ಸಾಧಿಸಿದ್ದಾರೆ. ರಾಜ್ಯ ಬಿಜೆಪಿಯನ್ನು ಸಂಪೂರ್ಣ ತನ್ನ ಹಿಡಿತದಲ್ಲಿಟ್ಟುಕೊಂಡಿದ್ದರೂ ಬಿ.ಎಸ್.ಯಡಿಯೂರಪ್ಪ ಮತ್ತವರ ತಂಡವನ್ನು ನಿಯಂತ್ರಿಸಲು ಸಾಧ್ಯವಾಗಿಲ್ಲ. ಹಾಗಿದ್ದರೂ ಸಾಮಾನ್ಯವಾಗಿ ಬಿಜೆಪಿ ಅಥವಾ ಸಂಘ ಪರಿವಾರದ ನಾಯಕರನ್ನು ಹೊರತುಪಡಿಸಿ ಉಳಿದವರನ್ನು ಸಂತೋಷ್ ಮೀಟ್ ಆಗಲ್ಲ‌. ಈ ನಡುವೆ ಸಿಎಂ ಆಕಾಂಕ್ಷಿಗಳು ಸೇರಿ ಬಿಜೆಪಿ ನಾಯಕರು ಸಂತೋಷ್ ಭೇಟಿಯಾಗಲು ಸರದಿಯಲ್ಲಿ ನಿಂತಿದ್ದರೆ, ಆರೆಸ್ಸೆಸ್ ಮೂಲದ ಬಿ.ಎಲ್. ಸಂತೋಷ್ ವಿರೋಧಿ ಪಕ್ಷವಾಗಿರುವ ಜೆಡಿಎಸ್ ವರಿಷ್ಠ ನಾಯಕನನ್ನು ಭೇಟಿಯಾಗಿದ್ದು ರಾಜಕೀಯ ವಲಯದಲ್ಲಿ ಹೊಸ ಚರ್ಚೆಗೆ ನಾಂದಿ ಹಾಡಿದೆ. ಅಲ್ಲದೆ ಸಾಕಷ್ಟು ಅಚ್ಚರಿಗೂ ಕಾರಣವಾಗಿದೆ. 

ಇದೇ ವೇಳೆ, ಕಳೆದ ಬಾರಿ ಬಿಜೆಪಿ ಸರಕಾರ ಬರಲು ಕಾರಣವಾಗಿದ್ದ 17 ಮಂದಿ ವಲಸಿಗ ಶಾಸಕರು ಯಡಿಯೂರಪ್ಪ ಅವರನ್ನು ಬದಲಿಸದಂತೆ ಒತ್ತಡ ಹೇರಿದ್ದಾರೆ ಎನ್ನಲಾಗುತ್ತಿದೆ. ಯಡಿಯೂರಪ್ಪ ಬದಲಿಸಿದರೆ ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡುವ ಮೂಲಕ ಒತ್ತಡ ತಂತ್ರ ಹೇರಲಿದ್ದಾರೆ ಎಂಬ ಮಾಹಿತಿಗಳು ಇರುವುದರಿಂದ ಬಿಜೆಪಿ ಕಡೆಯಿಂದಲೂ ಅದಕ್ಕೆ ತಯಾರಿ ಮಾಡಿಕೊಂಡಿದ್ದಾರೆಯೇ ಎನ್ನುವ ಅನುಮಾನ ಮೂಡಿಸಿದೆ. ಈ ವಿಚಾರ ಬಿಜೆಪಿ ಕಾರ್ಯಕರ್ತರ ವಲಯದಲ್ಲಿ ಮಾತ್ರ ಅಸಂತೋಷಕ್ಕೆ ಕಾರಣವಾಗಿದೆ.

The luncheon meeting between Holenarasipur JD(S) MLA H.D. Revanna and BJP National General Secretary B.L. Santhosh in Delhi has intrigued many in State politics and has given rise to speculations. Hassan MP Prajwal Revanna was also present.