ಬ್ರೇಕಿಂಗ್ ನ್ಯೂಸ್
07-06-21 05:23 pm Bangalore Correspondent ಕರ್ನಾಟಕ
ಬೆಂಗಳೂರು, ಜೂನ್ 7: ಮುಖ್ಯಮಂತ್ರಿ ಯಡಿಯೂರಪ್ಪ ಮತ್ತೊಂದು ರಾಜಕೀಯ ಪಟ್ಟು ಉರುಳಿಸಿದ್ದಾರೆ. ಮೇಲ್ನೋಟಕ್ಕೆ ರಾಷ್ಟ್ರೀಯ ನಾಯಕರ ಸೂಚನೆ ಪಾಲಿಸುತ್ತೇನೆ ಎಂಬ ಹೇಳಿಕೆ ನೀಡಿದ್ದರೂ, ಹೈಕಮಾಂಡ್ ಸೂಚಿಸಿದರೆ ರಾಜಿನಾಮೆ ನೀಡಲು ಸಿದ್ಧ ಎಂದಿದ್ದು ಮತ್ತೊಂದು ರೀತಿಯ ರಾಜಕೀಯ ಪಟ್ಟು ಎಂದೇ ವಿಶ್ಲೇಷಿಸಲಾಗುತ್ತಿದೆ.
ವರಿಷ್ಠರು ನನ್ನ ಮೇಲೆ ವಿಶ್ವಾಸ ಇಟ್ಟಿದ್ದಾರೆ. ಅವರು ಎಷ್ಟು ದಿನ ಮುಂದುವರಿಯಿರಿ ಅನ್ನುತ್ತಾರೋ ಅಷ್ಟು ದಿನ ಇರುತ್ತೇನೆ. ರಾಜಿನಾಮೆ ಕೊಡಿ ಎಂದರೆ ಕೊಟ್ಟು ಹೋಗುತ್ತೇನೆ ಎಂಬ ರೀತಿಯ ಹೇಳಿಕೆ ಅಸಹಜವಾಗಿ ಬಂದಿದ್ದಲ್ಲ. ಆದರೆ, ಮುಖ್ಯಮಂತ್ರಿ ಯಡಿಯೂರಪ್ಪ ಬಾಯಲ್ಲಿ ಈ ರೀತಿಯ ಹೇಳಿಕೆ ಬಂದಿದ್ದನ್ನು ನೋಡಿ, ಯಡಿಯೂರಪ್ಪ ಅಷ್ಟು ಸುಲಭದಲ್ಲಿ ಕರಗಿ ಬಿಟ್ಟರೇ ? ಕುರ್ಚಿ ಬಿಟ್ಟಲು ಒಪ್ಪಿಕೊಂಡು ಬಿಟ್ಟರೇ ಎನ್ನುವ ಅರ್ಥದ ಮಾತುಗಳು ಅಭಿಮಾನಿ ವಲಯದಲ್ಲಿ ಕೇಳಿಬರುತ್ತಿವೆ. ಇದೇ ಕಾರಣಕ್ಕೆ ರಾಜ್ಯದಲ್ಲಿ ಈ ಬಾರಿ ಸಿಎಂ ಬದಲಾವಣೆ ಖಚಿತ ಅನ್ನುವ ಚರ್ಚೆಯೇ ಜೋರಾಗಿದೆ.
ಪ್ರತಿ ಬಾರಿ ನಾಯಕತ್ವದ ಬದಲಾವಣೆ ವಿಚಾರ ಕೆದಕಿದಾಗ ಬಿರುನುಡಿಗಳನ್ನಾಡುತ್ತಿದ್ದ ಬಿ.ಎಸ್.ಯಡಿಯೂರಪ್ಪ ಈ ಬಾರಿ ಮಾತ್ರ ಯಾಕೆ ಈ ರೀತಿಯ ಹೇಳಿಕೆ ಕೊಟ್ಟು ಬಿಟ್ಟರು ಅನ್ನೋದು ಅವರನ್ನು ಬಲ್ಲ ಜೊತೆಗಾರರನ್ನೇ ಇರಿಸುಮುರಿಸಿಗೆ ತಳ್ಳಿದೆ. ಅವರು ಈ ರೀತಿಯ ಹೇಳಿಕೆ ನೀಡಿದ್ದೇ ರಾಜ್ಯದ ಬಿಜೆಪಿ ವಲಯದಲ್ಲಿ ಭಾರೀ ಕಲ್ಲೋಲವನ್ನು ಸೃಷ್ಟಿಸಿದೆ. ಯಾಕಂದ್ರೆ, ಯಡಿಯೂರಪ್ಪ ಬದಲಾದರೆ ಮುಖ್ಯಮಂತ್ರಿಯಾಗಿ ಬರಲಿರುವ ಮತ್ತೊಬ್ಬ ವ್ಯಕ್ತಿ ಯಾರು ಎನ್ನುವ ಕುತೂಹಲದ ಚರ್ಚೆಗಳು ನಡೆಯತೊಡಗಿದೆ.
ಆದರೆ, ಸಿಎಂ ಬದಲಾವಣೆಯ ವಿಚಾರ ಪ್ರತಿಬಾರಿ ಕೇಳಿಬಂದಾಗಲೂ ಯಡಿಯೂರಪ್ಪ ಸುಮ್ಮನಿದ್ದ ವ್ಯಕ್ತಿಯಲ್ಲ. ತಮ್ಮ ಕುರ್ಚಿಯನ್ನು ಗಟ್ಟಿ ಮಾಡಿಕೊಳ್ಳಲು ಯಾರೂ ಊಹಿಸದ ರೀತಿಯ ಚಾಣಾಕ್ಷ ಪಟ್ಟುಗಳನ್ನು ಹೊಸೆಯುತ್ತಾ ಬಂದವರು ಬೂಕನಹಳ್ಳಿಯ ಸರದಾರ ಯಡಿಯೂರಪ್ಪ. ಈ ಬಾರಿಯೂ ಹೈಕಮಾಂಡ್ ಮತ್ತು ರಾಜ್ಯ ನಾಯಕರ ಚಿತಾವಣೆ ಅರಿತುಕೊಂಡೇ ಈ ರೀತಿಯ ಹೇಳಿಕೆ ನೀಡಿದ್ದಾರೆ ಎನ್ನಲಾಗುತ್ತಿದೆ. ಇದರ ಹಿಂದೆಯೂ ಭಾರೀ ರಾಜಕೀಯ ಗಣಿತ ಇದ್ದಂತೆ ಕಾಣುತ್ತಿದೆ. ರಾಜಿನಾಮೆ ನೀಡಲು ಸಿದ್ಧ ಅನ್ನುವ ಮೂಲಕ ತಮ್ಮನ್ನು ರಾಷ್ಟ್ರೀಯ ನಾಯಕರು ಇಳಿಯಲು ಸೂಚನೆ ನೀಡಿದ್ದಾರೆನ್ನುವ ಬಗ್ಗೆ ತಮ್ಮ ಲಿಂಗಾಯತ ಸಮುದಾಯಕ್ಕೆ ಬಹಿರಂಗವಾಗಿಯೇ ಸೂಚನೆ ನೀಡಿದ್ದು ಒಂದಾದರೆ, ಮತ್ತೊಂದು ಕಡೆ ಹೈಕಮಾಂಡಿಗೂ ಬದಲೀ ಸಮರ್ಥ ನಾಯಕನನ್ನು ಹುಡುಕುವಂತೆ ಸವಾಲನ್ನೂ ಎಸೆದಿದ್ದಾರೆ.
ರಾಜ್ಯದಲ್ಲಿ ಬಿಜೆಪಿಯ ಮಟ್ಟಿಗೆ ಯಡಿಯೂರಪ್ಪ ಎದುರಾಳಿಯೇ ಇಲ್ಲದ ಜಗಜಟ್ಟಿಯೆಂದೇ ನಡೆದುಬಂದವರು. ಸದ್ಯದ ಮಟ್ಟಿಗೆ ಯಡಿಯೂರಪ್ಪ ಅವರನ್ನು ಬದಲಿಸಿ, ಬೇರೊಬ್ಬರನ್ನು ತಂದು ಕೂರಿಸುವುದೇ ಕಬ್ಬಿಣದ ಕಡಲೆ ಜಗಿದಂತೆ. ಯಾಕಂದ್ರೆ, ಯಡಿಯೂರಪ್ಪ ಅಂದ್ರೆ ಬಿಜೆಪಿ, ಬಿಜೆಪಿಯಂದ್ರೆ ಯಡಿಯೂರಪ್ಪ ಅನ್ನುವಂಥ ಸ್ಥಿತಿಯಿಂದ ರಾಜ್ಯದ ಬಿಜೆಪಿ ಇನ್ನೂ ಹೊರಬಂದಿಲ್ಲ. ಯಡಿಯೂರಪ್ಪ ಇಲ್ಲದೆ ಬಿಜೆಪಿಯನ್ನು ದಡ ಸೇರಿಸುವುದೇ ಸಾಧ್ಯವಿಲ್ಲ ಅನ್ನುವ ಸ್ಥಿತಿಯಿದೆ. ಉತ್ತರ ಕರ್ನಾಟಕದಲ್ಲಿ ಪ್ರಬಲ ಶಕ್ತಿಯಾಗಿರುವ ಲಿಂಗಾಯತ ಸಮುದಾಯಕ್ಕೆ ಯಡಿಯೂರಪ್ಪ ಮಾತ್ರ ಚಾಲಕ ಶಕ್ತಿಯಾಗಿ ಉಳಿದಿದ್ದಾರೆ.
ಯಡಿಯೂರಪ್ಪ ಮತ್ತು ಅವರ ಲಿಂಗಾಯತ ಪ್ರಾಬಲ್ಯದ ಬಗ್ಗೆ ಬಿಜೆಪಿ ಹೈಕಮಾಂಡಿಗೆ ಅರಿವು ಇಲ್ಲ ಅಂತಲ್ಲ. ಆದರೆ, ವಯಸ್ಸಿನ ಕಾರಣದಿಂದ ಅವರನ್ನು ನೇಪಥ್ಯಕ್ಕೆ ಸರಿಸಲೇಬೇಕು. ರಾಜ್ಯದಲ್ಲಿ ಯಡಿಯೂರಪ್ಪ ಇಲ್ಲದ ಬಿಜೆಪಿಯನ್ನು ಕಟ್ಟುವುದು ಆರೆಸ್ಸೆಸ್ ಮತ್ತು ಬಿಜೆಪಿ ಪಾಲಿಗೆ ಅನಿವಾರ್ಯವೂ ಹೌದು. 78ರ ಹರೆಯದ ಯಡಿಯೂರಪ್ಪ ಅವರನ್ನು ವಯಸ್ಸಿನ ಲಕ್ಷ್ಮಣ ರೇಖೆಯಡಿ ಉಳಿಯಗೊಟ್ಟಿದ್ದು ಅವರಿಗೆ ಮಾತ್ರ ನೀಡಿದ್ದ ವಿನಾಯ್ತಿ ಆಗಿತ್ತು. ಆಡ್ವಾಣಿ, ಜೋಷಿಯನ್ನು ಬದಿಗೆ ಸರಿಸಿದ ಚಾಲಕ ಶಕ್ತಿಗೆ ಯಡಿಯೂರಪ್ಪ ಅವರನ್ನು ಸರಿಸುವುದು ಕಷ್ಟ ಆಗಿರಲಿಲ್ಲ. ಆದರೆ, ರಾಷ್ಟ್ರ ಮಟ್ಟದಲ್ಲಿ ಆಡ್ವಾಣಿಗೆ ಪರ್ಯಾಯವಾಗಿ ಮೋದಿ, ಅಮಿತ್ ಷಾ ಜೋಡಿ ಬೆಳೆದು ನಿಂತ ರೀತಿಯಲ್ಲಿ ಕರ್ನಾಟಕದಲ್ಲಿ ಯಾವುದೇ ನಾಯಕ ಇನ್ನೂ ಬೆಳೆದಿಲ್ಲ.
ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಅವರನ್ನು ಅಲ್ಲಿನ ಜಾತಿ ಪ್ರಾಬಲ್ಯವನ್ನು ಮೆಟ್ಟಿ ನಿಂತು ಮುಂಚೂಣಿಗೆ ತಂದು ನಿಲ್ಲಿಸಿದ ರೀತಿ ಕರ್ನಾಟಕದಲ್ಲಿಯೂ ನಡೆಸಬಹುದು ಎನ್ನುವ ಲೆಕ್ಕಾಚಾರದಲ್ಲಿ ಸಂಘದ ಶಕ್ತಿಗಳು ಇದ್ದರೆ, ಯಡಿಯೂರಪ್ಪ ಮಾತ್ರ ರಾಜಕೀಯದ ಪಟ್ಟುಗಳನ್ನು ಉರುಳಿಸುತ್ತಲೇ ಬಂದಿದ್ದಾರೆ. ಇದೇ ಕಾರಣದಿಂದ ಯಡಿಯೂರಪ್ಪ ಎಂಬ ಬೆಳ್ಳಿಯ ನಾಣ್ಯ ರಾಜಕೀಯ ವರ್ತುಲದಲ್ಲಿ ಸದಾ ಚಿಮ್ಮುತ್ತಲೇ ಇರುತ್ತದೆ, ಯಾರೂ ಊಹಿಸದ ರೀತಿ. ಪ್ರತಿ ಪಟ್ಟಿನ ಸಂದರ್ಭದಲ್ಲೂ ಯಡಿಯೂರಪ್ಪ ಕೈಗೇ ಸಿಗದೆ ನಾಣ್ಯದಂತಾಗಿದ್ದಾರೆ.
ಆಡಳಿತಕ್ಕೆ ಬಂದರೂ ಭದ್ರ ನೆಲೆಕಾಣದ ಬಿಜೆಪಿ
ಈವತ್ತಿಗೂ ರಾಜ್ಯದಲ್ಲಿ ಬಿಜೆಪಿಗೆ ಸರಿಯಾದ ನೆಲೆ ಇರುವುದು 170ರಿಂದ 180 ವಿಧಾನಸಭೆ ಸ್ಥಾನಗಳಲ್ಲಿ ಮಾತ್ರ. ಕರಾವಳಿ ಮತ್ತು ಉತ್ತರ ಕರ್ನಾಟಕ ಹಾಗೂ ಬೆಂಗಳೂರಿನ ಕೆಲವು ಕಡೆ ಬಿಜೆಪಿಗೆ ಭದ್ರ ನೆಲೆ ಇರುವುದು. ಆದರೆ, ಉತ್ತರ ಕರ್ನಾಟಕದ ಭದ್ರ ನೆಲೆ ಇನ್ನೂ ಜಾತಿಯ ಲಾಬಿಯನ್ನು ಹೊರತುಪಡಿಸಿ ಭದ್ರವಾಗುವ ಮಟ್ಟಿಗೆ ಬೆಳೆದಿಲ್ಲ. ಹಿಂದೊಮ್ಮೆ ಕಾಂಗ್ರೆಸ್ ಶಕ್ತಿಯಾಗಿದ್ದ ಉತ್ತರ ಕರ್ನಾಟಕದ ವೀರಶೈವ- ಲಿಂಗಾಯತರು ಬಿಜೆಪಿಯ ಪರ ನಿಂತಿದ್ದೇ ಯಡಿಯೂರಪ್ಪ ಕಾರಣದಿಂದಾಗಿ. ಯಡಿಯೂರಪ್ಪ ಇಲ್ಲದ ಬಿಜೆಪಿಗೆ ಇತರೇ ಲಿಂಗಾಯತ ನಾಯಕರ ಅಭಯ ಇದ್ದರೂ ಅದು ಎಣಿಕೆಗೂ ನಿಲುಕದ್ದು. ಹಾಗೆಂದು, ಲಿಂಗಾಯತ – ವೀರಶೈವ ಸಮುದಾಯದ ಕೇವಲ ಹತ್ತು ಶೇಕಡಾ ಮತಗಳು ಕಾಂಗ್ರೆಸ್ ಪಾಲಾದರೂ, ಕಾಂಗ್ರೆಸ್ ಮೇಲುಗೈ ಸಾಧಿಸುತ್ತದೆ.
ಕಾಂಗ್ರೆಸ್ ಬಗ್ಗೆಯೇ ಬಿಜೆಪಿಗೆ ಅಳುಕು
ಯಾಕಂದ್ರೆ, ಕಾಂಗ್ರೆಸಿಗೆ ರಾಜ್ಯದಾದ್ಯಂತ ಭದ್ರ ನೆಲೆ ಇನ್ನೂ ಇದೆ. ಅಲ್ಪಸಂಖ್ಯಾತ, ದಲಿತ, ಹಿಂದುಳಿದ ಮತಗಳ ಟ್ರಂಪ್ ಕಾರ್ಡ್ ಜೊತೆಗೆ ಆಯಾ ಭಾಗದ ಪ್ರಬಲ ಸಮುದಾಯದ ಹತ್ತು ಶೇ. ಮತಗಳು ಸಿಕ್ಕರೆ ಕಾಂಗ್ರೆಸ್ ಗೆಲುವು ಸುಲಭವಾಗುತ್ತದೆ. ಈ ಲೆಕ್ಕಾಚಾರದಡಿ ಬಿಜೆಪಿ 180 ಸ್ಥಾನಗಳನ್ನು ನಂಬಿಕೊಂಡು ಹೋರಾಟಕ್ಕೆ ನಿಂತರೆ, ಕಾಂಗ್ರೆಸ್ 220 ಸ್ಥಾನಗಳಲ್ಲಿಯೂ ಭದ್ರ ನೆಲೆ ಹೊಂದಿರುವುದರಿಂದ ಮ್ಯಾಜಿಕ್ ಸಂಖ್ಯೆ ಪಡೆಯುವುದಕ್ಕೆ ಕಷ್ಟವಾಗಲ್ಲ. ಕಳೆದ ಬಾರಿಯ ಚುನಾವಣೆಯಲ್ಲಿ ಬಿಜೆಪಿಗೆ ಅತಿ ಹೆಚ್ಚು ಸ್ಥಾನ ದೊರಕಿದ್ದರೂ, ಮತ ಗಳಿಕೆಯಲ್ಲಿ ಹೆಚ್ಚಿನ ಪಾಲು ಸಿಕ್ಕಿದ್ದು ಕಾಂಗ್ರೆಸಿಗೆ. ಕಾಂಗ್ರೆಸ್ ಸೋಲು ಕಂಡ ರಾಜ್ಯದ ಅಷ್ಟೂ ಸ್ಥಾನಗಳಲ್ಲಿ ದ್ವಿತೀಯ ಸ್ಥಾನದಲ್ಲಿದ್ದುದು ಅದಕ್ಕೆ ಕಾರಣ ಆಗಿತ್ತು. ಉಳಿದಂತೆ, ಜೆಡಿಎಸ್ ದಕ್ಷಿಣ ಕರ್ನಾಟಕದ ಒಕ್ಕಲಿಗ ಬೆಲ್ಟ್ ಇರುವ ಕಡೆಗಳಲ್ಲಿ ತಮ್ಮ ಸ್ಥಾನ ಭದ್ರ ಮಾಡಿರುವುದು.
2013ರ ಚುನಾವಣೆಯಲ್ಲಿ ಯಡಿಯೂರಪ್ಪ ಬಿಟ್ಟು ಚುನಾವಣೆಗೆ ಹೋಗಿದ್ದ ಬಿಜೆಪಿ ಸ್ಥಿತಿ ಏನಾಗಿತ್ತು ಅನ್ನೋದ್ರ ಅರಿವು ಹೊಂದಿರುವ ಪಕ್ಷದ ನಾಯಕರು ತಮ್ಮ ಮಾಂತ್ರಿಕ ಶಕ್ತಿಯನ್ನು ಕಳಕೊಳ್ಳಲು ತಯಾರಿಲ್ಲ. ಅದಕ್ಕಾಗಿಯೇ ನಾಯಕತ್ವದ ಬದಲಾವಣೆ ಅನಿವಾರ್ಯವೇ ಆಗಿದ್ದರೂ, ಅಲೆದು ತೂಗಿ ಅಲ್ಲದೆ ಅಜ್ಜನ ಮನವೊಲಿಸುವುದಕ್ಕೇ ಹೆಚ್ಚು ಒತ್ತು ಕೊಟ್ಟಿರುವುದು. ಇದೇ ಅಂಶ ಯಡಿಯೂರಪ್ಪ ಪಾಲಿಗೂ ಪ್ಲಸ್ ಆಗಿರುವುದು. ಸಿಎಂ ಬದಲಾವಣೆಯ ಮಾತು ಕೇಳಿಬಂದಾಗೆಲ್ಲ ರಾಜಕೀಯ ಪಟ್ಟುಗಳನ್ನು ಬೀಸಲು ಯಡಿಯೂರಪ್ಪರಿಗೆ ದಾಳ ಆಗಿರುವುದೂ ಇದೇ ವಿಚಾರ.
ಬದಲಾದರೆ ರಾಜ್ಯಾಧ್ಯಕ್ಷ , ಸಿಎಂ ಸ್ಥಾನ ಎರಡೂ !
ಈಗ ಸಿಎಂ ಸ್ಥಾನ ಬದಲಾಗಲೇಬೇಕೆಂದು ಹೈಕಮಾಂಡ್ ಪಟ್ಟು ಹಿಡಿದರೆ, ಯಡಿಯೂರಪ್ಪ ಒಡ್ಡುವ ಷರತ್ತಿಗೂ ಒಪ್ಪಲೇ ಬೇಕಾಗುತ್ತದೆ. ಅಂಥ ಸನ್ನಿವೇಶ ಬಂದರೆ ಯಡಿಯೂರಪ್ಪ ಮತ್ತು ಅವರ ಪುತ್ರ ವಿಜಯೇಂದ್ರ ಉರುಳಿಸುವ ರಾಜಕೀಯ ದಾಳವೇ ಅಲ್ಟಿಮೇಟ್ ಆಗಿರುತ್ತದೆ. ಜಾತಿ ಟ್ರಂಪ್ ಕಾರ್ಡ್ ಅಡಿ ಲಿಂಗಾಯತ ಸಮುದಾಯಕ್ಕೇ ಸಿಎಂ ಸ್ಥಾನ ಕೊಟ್ಟರೆ, ರಾಜ್ಯಾಧ್ಯಕ್ಷ ಸ್ಥಾನವನ್ನು ಒಕ್ಕಲಿಗರಿಗೆ ಕೊಡಬೇಕೆಂಬ ಲೆಕ್ಕಾಚಾರ ಕೆಲವರದ್ದಿದೆ. ಸಿಎಂ ಸ್ಥಾನ ಇನ್ನೊಬ್ಬರಿಗೆ ಹೋದರೆ, ರಾಜ್ಯಾಧ್ಯಕ್ಷ ಸ್ಥಾನ ತನಗೇ ಸಿಗಬೇಕೆಂಬ ಗಣಿತವೂ ವಿಜಯೇಂದ್ರ ಮತ್ತು ತಂಡದ್ದಿದೆ. ಈ ಎರಡು ಕೋನದಲ್ಲಿ ನೋಡಿದರೆ, ಬದಲಾವಣೆ ಆಗೋದಾದ್ರೆ ಸಿಎಂ ಮತ್ತು ರಾಜ್ಯಾಧ್ಯಕ್ಷ ಸ್ಥಾನ ಎರಡೂ ಬದಲಾಗಲಿದೆ ಅನ್ನುವ ಸುದ್ದಿ ಸದ್ಯಕ್ಕಿದೆ.
In the midst of rumblings of a leadership change in the Karnataka unit, 10-13 BJP MLAs met with Karnataka CM BS Yediyurappa and vowed their support for him.
08-05-25 11:07 pm
Bangalore Correspondent
U T Khader, Dinesh Gundurao, Suhas Shetty Mur...
08-05-25 07:50 pm
Karwar high alert: ಕಾರವಾರದಲ್ಲಿ ಹೈ ಎಲರ್ಟ್ ; ಸಮ...
08-05-25 12:23 pm
Special Poojas, Indian Army, Minister Ramalin...
07-05-25 04:07 pm
ಭಾರತ - ಪಾಕ್ ಮಧ್ಯೆ ಉದ್ವಿಗ್ನ ಸ್ಥಿತಿ ; ಮೇ 7 ರಂದು...
06-05-25 11:23 pm
09-05-25 12:00 am
HK News Desk
New Pope, Robert Francis Prevost;140 ಕೋಟಿ ಸದಸ...
08-05-25 11:44 pm
Pak drone-missile attack; ಚೈನಾ ಮೇಡ್ ಲಾಹೋರ್ ಏರ...
08-05-25 04:57 pm
ರಾಷ್ಟ್ರಪತಿ ದ್ರೌಪದಿ ಮುರ್ಮು ಮೇ 18ರಂದು ಶಬರಿಮಲೆಗೆ...
08-05-25 12:47 pm
Masood Azhar: ಜೈಶ್ ಮೊಹಮ್ಮದ್ ಉಗ್ರರ ನೆಲೆ ಧ್ವಂಸ...
07-05-25 10:45 pm
08-05-25 10:54 pm
Mangalore Correspondent
Satish Kumapla, Mangalore, U T Khader: ಮೂಡಾ ಅ...
08-05-25 09:06 pm
Mangalore Rohan Corporation, Shah Rukh Khan:...
08-05-25 04:52 pm
Mangalore, Suhas Shetty, NIA, Sunil Kumar: ಸು...
08-05-25 04:14 pm
MLA Harish Poonja, High Court: ಮುಸ್ಲಿಮರ ಬಗ್ಗೆ...
07-05-25 10:30 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm